News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆಟೋ ರಿಕ್ಷಾ ಚಾಲಕರ ರಾಜ್ಯ ಮಟ್ಟದ ಜಾಥಾ ಮಂಗಳೂರಿನಲ್ಲಿ ಉದ್ಘಾಟನೆ

imagesಮಂಗಳೂರು : ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಫೆಡರೇಶನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್‍ಸ್ ಯೂನಿಯನ್ (ಸಿಐಟಿಯು) ಕರ್ನಾಟಕ ರಾಜ್ಯ ಸಮಿತಿಯು ಹಮ್ಮಿಕೊಂಡಿರುವ ರಾಜ್ಯ ಮಟ್ಟದ 3  ಜಾಥಾಗಳಲ್ಲಿ, ಮೂರನೇ ಜಾಥಾವು ಏಪ್ರಿಲ್ 2 ನಗರದ ಸೆಂಟ್ರಲ್ ಮಾರ್ಕೆಟ್ ಬಳಿಯಲ್ಲಿ ಉದ್ಘಾಟನೆಗೊಂಡಿತು.

ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಫೆಡರೇಶನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವಿ. ರಾಘವೇಂದ್ರ ಮಾತನಾಡಿ, ಕೇಂದ್ರ ಸರಕಾರವು ಮಂಡಿಸಲಿರುವ ರಸ್ತೆ ಸಾರಿಗೆ ಮತ್ತು ಸುರಕ್ಷಾ ಮಸೂದೆ 2014ರ ನೀತಿಯು ಸಾರಿಗೆ ರಂಗಕ್ಕೆ ಮಾತ್ರವಲ್ಲ ಆಟೋ ಚಾಲಕರನ್ನೂ ಅಪರಾಧಿಗಳಾಗಿ ಪರಿಗಣಿಸುವ ಧೋರಣೆ ಹೊಂದಿದ್ದು, ಆಟೋ ಚಾಲಕರ ಫೆಡರೇಶನ್ ಇದನ್ನು ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ ಈಗಾಗಲೇ ಸಾವಿರಾರು ಚಾಲಕರು ನಿರ್ದಿಷ್ಟ ವಿದ್ಯಾರ್ಹತೆಯಿಲ್ಲದಿದ್ದರೂ ಹಲವಾರು ವರ್ಷಗಳಿಂದ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಾಲಕರಿಗೆ ನಿರ್ದಿಷ್ಟ ವಿದ್ಯಾರ್ಹತೆ ನಿಗದಿಗೊಳಿಸಿದ್ದಲ್ಲಿ ಅನೇಕ ದುಡಿಮೆಗಾರ ಚಾಲಕರು ಕೆಲಸ ಕಳೆದುಕೊಳ್ಳುವರು. ಸರಕಾರ ಅನೇಕ ಕಾರ್ಮಿಕರಿಗೆ ಒದಗಿಸಿದಂತೆ ಕಲ್ಯಾಣಮಂಡಳಿ ಹಾಗೂ ಗುರುತು ಚೀಟಿ ನೀಡುವ ಬೇಡಿಕೆಗಳನ್ನು ಇನ್ನೂ ಈಡೇರಿಸಿಲ್ಲ. ಕೇಂದ್ರ ಸರಕಾರದ ಇಂತಹ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಏಪ್ರಿಲ್ 30 ರಂದು ದೇಶಾದ್ಯಂತ ಪ್ರತಿಭಟನೆ ನಡೆಯಲಿದೆ ಎಂದು ಎಚ್ಚರಿಸಿದರು.

ಫೆಡರೇಶನ್‌ನ ದ.ಕ ಜಿಲ್ಲಾ ಸಮಿತಿ ಅಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್‌ರವರು ಮಾತನಾಡಿ, ಆಟೋ ಚಾಲಕರು ಹಲವಾರು ಬಗೆಯ ಕಷ್ಟ, ಅವಮಾನ ಎದುರಿಸಿ ಬದುಕುವ ಜನವಿಭಾಗ. ಆಟೋದಲ್ಲಿ ಬಿಟ್ಟುಹೋದ ವಸ್ತುಗಳನ್ನು ಸಂಬಂಧಪಟ್ಟವರಿಗೆ ತಲುಪಿಸುವ ಅವರ ಪ್ರಾಮಾಣಿಕತೆ ಜನರಿಗೆಲ್ಲ ಗೊತ್ತು.ರಾಜ್ಯದಲ್ಲಿ ಆಟೋ ಚಾಲಕರೇ ಸರಕಾರಕ್ಕೆ ರೂ.3200/- ಕೋಟಿ ತೆರಿಗೆ ಕಟ್ಟುತ್ತಿದ್ದಾರೆ. ಇಂಥ ಆಟೋ ಚಾಲಕರಿಗೆ ಸಮಾಜ ಮತ್ತು ಸರಕಾರ ಏನು ಕೊಟ್ಟಿದೆ? ಜಿಲ್ಲೆಯಲ್ಲಿ ಎರಡು ತಿಂಗಳ ಹಿಂದೆ ಜಿಲ್ಲಾಡಳಿತ ಏಕಾಏಕಿ ಆಟೋದರ ಇಳಿಸಿ ಬದಲಾವಣೆ ಮಾಡಿದರೆ, ಆಟೋ ಚಾಲಕರ ಬಗ್ಗೆ ಚುನಾವಣೆ ಭರವಸೆ ನೀಡಿದ್ದ ಮಂಗಳೂರು ದಕ್ಷಿಣ ಶಾಸಕರೂ ಹಾಗೂ ಇನ್ನೊಂದು ಆಟೋ ಚಾಲಕ ಸಂಘಟನೆಯ ಗೌರವಾಧ್ಯಕ್ಷರಾದ ಹಾಲಿ ವಿಧಾನಪರಿಷತ್ ಸದಸ್ಯರೂ ಆ ಬಗ್ಗೆ ಚಕಾರ ಶಬ್ದವೆತ್ತದೆ ದಿವ್ಯ ಮೌನವಹಿಸಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸರಕಾರ ಅತೀ ಶೀಘ್ರದಲ್ಲಿಯೇ ಆಟೋ ಚಾಲಕರಿಗೆ ಕಲ್ಯಾಣಮಂಡಳಿ ರಚಿಸಬೇಕೆಂದು ಆಗ್ರಹಿಸಿದರು.

ಫೆಡರೇಶನ್‌ನ ದ.ಕ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಲ್.ಟಿ. ಸುವರ್ಣ ಮಾತನಾಡಿ, ಜಾಥಾ ದ.ಕ ಜಿಲ್ಲೆ ಸೇರಿದಂತೆ ಇತರ ಜಿಲ್ಲೆಗಳಿಗೂ ಸಂಚರಿಸಿ ಅಂತಿಮವಾಗಿ ಕುಂದಾಪುರದಲ್ಲಿ ಸಮಾಪನಗೊಳ್ಳಲಿದೆ ಎಂದು ತಿಳಿಸಿದರು.

ಫೆಡರೇಶನ್‌ನ ಮಂಗಳೂರು ನಗರ ಸಮಿತಿ ಕಾರ್ಯದರ್ಶಿ ಮಹಮ್ಮದ್ ಅನ್ಸಾರ್ ಸ್ವಾಗತಿಸಿದರು. ಮಂಗಳೂರು ನಗರ ಸಮಿತಿ ಅಧ್ಯಕ್ಷ ಕೃಷ್ಣಪ್ಪಗೌಡ, ಫೆಡರೇಶನ್‌ನ ರಾಜ್ಯ ಸಮಿತಿ ಸಹಕಾರ್ಯದರ್ಶಿ ಸಂತೋಷ್ ಕುಮಾರ್, ಫೆಡರೇಶನ್‌ನ ನಗರ ಮುಖಂಡರಾದ ಮಹಮ್ಮದ್ ಇರ್ಫಾನ್, ಸ್ಟ್ಯಾನ್ಲಿ ನೊರೋನ್ಹಾ, ಸಂಜೀವ, ಅಂತಪ್ಪ ಪೂಜಾರಿ, ರಾಮಚಂದ್ರ ಶೆಟ್ಟಿ, ಬಾಲಕೃಷ್ಣ, ರಾಮಣ್ಣ, ಮುಲ್ಕಿ ಚಾಲಕರ ಸಂಘದ ಮುಖಂಡ ಅಶೋಕ್, ಕಟ್ಟಡ ಕಾರ್ಮಿಕರ ಸಂಘಟನೆಯ ಯೋಗೀಶ್ ಜಪ್ಪಿನಮೊಗರು ಮತ್ತಿತರರು ಜಾಥಾ ಉದ್ಘಾಟನಾ ಸಭೆಯಲ್ಲಿ ಉಪಸ್ಥಿತರಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top