ಅಗರ್ತಲ : ಈಶಾನ್ಯ ರಾಜ್ಯವಾದ ತ್ರಿಪುರಾ ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದ ಮುಕ್ತಗೊಂಡಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇವ್ ಅವರು ಗುರುವಾರ ಘೋಷಣೆ ಮಾಡಿದ್ದಾರೆ.
ಅಲ್ಲಿನ ಎರಡನೇ ಕೋವಿಡ್-19 ರೋಗಿಯ ಪರೀಕ್ಷೆಯು ನೆಗೆಟಿವ್ ಆಗಿ ಹೊರಹೊಮ್ಮಿದ ಹಿನ್ನಲೆಯಲ್ಲಿ ಈ ಘೋಷಣೆಯನ್ನು ಮಾಡಲಾಗಿದೆ.
“ತ್ರಿಪುರಾ ಕೊರೋನಾ ಮುಕ್ತ ರಾಜ್ಯವಾಗಿ ಹೊರಹೊಮ್ಮಿದರೂ ಕೂಡ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಸರಕಾರದ ಎಲ್ಲಾ ನಿರ್ದೇಶನಗಳನ್ನು ತಪ್ಪದೇ ಪಾಲನೆ ಮಾಡಬೇಕು. ಮನೆಯಲ್ಲೇ ಇರಬೇಕು ಮತ್ತು ಸುರಕ್ಷಿತವಾಗಿರಬೇಕು” ಎಂದು ಬಿಪ್ಲವ್ ದೇವ್ ಅವರು ತಮ್ಮ ರಾಜ್ಯದ ಜನತೆಗೆ ಕರೆಯನ್ನು ನೀಡಿದ್ದಾರೆ.
ತ್ರಿಪುರಾದ ಮೊದಲ ಕರೋನ ರೋಗಿ ಮಹಿಳೆಯಾಗಿದ್ದು, ಗೋಮತಿ ಜಿಲ್ಲೆಯ ಉದಯಪುರ ನಗರದರಾಗಿದ್ದರು. ಲಾಕ್ ಡೌನ್ ಘೋಷಣೆಯಾಗುವುದಕ್ಕೆ ಮುನ್ನ ಅವರು ಗುವಾಹಟಿಯಿಂದ ವಾಪಸ್ಸಾಗಿದ್ದರು. ಏಪ್ರಿಲ್ 6 ರಂದು ಇವರಿಗೆ ಕೊರೋನಾ ದೃಢಪಟ್ಟಿತ್ತು. ಏಪ್ರಿಲ್ 16ರಂದು ಇವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದ ಬಳಿಕ ಇವರನ್ನು ಗೋಮತಿ ಜಿಲ್ಲೆಯ ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಎರಡನೇ ರೋಗಿಯೂ ತ್ರಿಪುರಾ ಸ್ಟೇಟ್ ರೈಫಲ್ಸ್ ಯೋಧನಾಗಿದ್ದು, ಉತ್ತರ ತ್ರಿಪುರಾದ ದಮ್ಚೆರಾದಲ್ಲಿ ಏಪ್ರಿಲ್ 16ರಂದು ಇವರಿಗೆ ಕೊರೋನಾ ಇರುವುದು ದೃಢಪಟ್ಟಿತ್ತು. ಇದೀಗ ಗುರುವಾರ ಅವರು ಗುಣಮುಖರಾಗಿ ಹೊರಹೊಮ್ಮಿದ್ದಾರೆ. ಈ ಹಿನ್ನೆಲೆಯಲ್ಲಿ ತ್ರಿಪುರಾ ಕೊರೋನಾ ಮುಕ್ತ ರಾಜ್ಯವಾಗಿ ಹೊರಹೊಮ್ಮಿದೆ.
ಎರಡನೇ ರೋಗಿಗೆ ಮತ್ತೊಂದು ಬಾರಿ ಪರೀಕ್ಷೆ ನಡೆಸಲಾಗುವುದು, ಅದರಲ್ಲೂ ನೆಗೆಟಿವ್ ಬಂದರೆ ರೋಗಿಯನ್ನು ಆಸ್ಪತ್ರೆಯ ಬಿಡುಗಡೆ ಮಾಡಲಾಗುವುದು ಎಂದು ತ್ರಿಪುರಾದ ಶಿಕ್ಷಣ ಸಚಿವ ಮತ್ತು ಸಂಪುಟ ವಕ್ತಾರ ರತನ್ ಲಾಲ್ ನಾಥ್ ಹೇಳಿದ್ದಾರೆ.
ಪ್ರಸ್ತುತಿ ತ್ರಿಪುರಾದಲ್ಲಿ 111 ಮಂದಿ ಕೊರೋನವೈರಸ್ ಶಂಕಿತರಿದ್ದಾರೆ. ಇವರ ಮೇಲೆ ತೀವ್ರ ನಿಗಾವನ್ನು ಇರಿಸಲಾಗಿದೆ. 227 ಮಂದಿಯನ್ನು ಹೋಂ ಕ್ವಾರಂಟೈನ್ನಲ್ಲಿ ಇಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.