ನವದೆಹಲಿ: ಕೊರೋನಾ ಸೋಂಕು ಹರಡುವ ಅಪಾಯವನ್ನು ತಪ್ಪಿಸುವ ಸಲುವಾಗಿ ಏಮ್ಸ್ ದೆಹಲಿ ಮತ್ತು ಜಜ್ಜಾರ್ನಲ್ಲಿ ಎಐ- ಚಾಲಿತ ಎರಡು ರೊಬೋಟ್ಗಳನ್ನು ಬಳಕೆ ಮಾಡುತ್ತಿದೆ. ಮನುಷ್ಯನ ಮೇಲೆ ಕೊರೋನಾ ವೈರಸ್ ಶೀಘ್ರ ಮಾರಣಾಂತಿಕ ಪ್ರಭಾವ ಬೀರುತ್ತಿದ್ದು, ಇದನ್ನು ಕಡಿಮೆಗೊಳಿಸುವ ಉದ್ದೇಶದಿಂದ ರೊಬೋಟ್ಗಳ ಬಳಕೆಗೆ ಏಮ್ಸ್ ಮುಂದಾಗಿದೆ.
ಸೋಂಕು ಹಬ್ಬುತ್ತಿರುವ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ವೈದ್ಯಕೀಯ ಸಿಬ್ಬಂದಿಗಳನ್ನು ಸೋಂಕಿತರಿಂದ ಕೊಂಚ ಮಟ್ಟಿಗೆ ದೂರವಿರಿಸುವುದಕ್ಕೆ ಪೂರಕವಾಗುವಂತೆ ರೊಬೋಟ್ಗಳನ್ನು ಬಳಕೆ ಮಾಡಲಾಗುತ್ತಿದೆ. ಇಡೀ ವಿಶ್ವವೇ ಆರೋಗ್ಯ ಕ್ಷೇತ್ರದಲ್ಲಿ ರೊಬೋಟ್ ಬಳಕೆಯ ಬಗ್ಗೆ ಹೆಚ್ಚು ಆಸಕ್ತಿಯನ್ನೂ ಹೊಂದಿದೆ. ಅಲ್ಲದೆ ಸೋಂಕಿನಿಂದ ಕುಟುಂಬ ವರ್ಗದವರನ್ನು ರಕ್ಷಿಸುವ ಸಲುವಾಗಿ ರೋಗಿಗಳ ಆರೈಕೆಗೆ ಮನೆಯಲ್ಲೀಯೂ ರೊಬೋಟ್ಗಳ ಬಳಕೆ ಮಾಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಭಾರತದಲ್ಲಿ ಕೊರೋನಾ ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ಐಮ್ಯಾಪ್ 9 ಮತ್ತು ಹ್ಯುಮನಾಯ್ಡ್ ಐ ಎಲ್ ಎಫ್ ಎಂಬ ಎರಡು ರೊಬೋಟ್ಗಳನ್ನು ತಯಾರಿಸಲಾಗಿದೆ. ವೈದ್ಯಕೀಯ ಸಿಬ್ಬಂದಿಗಳನ್ನು ಸೋಂಕಿಗೆ ಒಳಗಾಗದಂತೆ ತಡೆಯುವ ನಿಟ್ಟಿನಲ್ಲಿ ಮತ್ತು ವೈರಸ್ ಹರಡುವುದನ್ನು ಪರಿಶೀಲನೆ ಮಾಡುವುದಕ್ಕೆ ಸಹಾಯವಾಗುವಂತೆ ಈ ರೊಬೋಟ್ಗಳ ಕಾರ್ಯಕ್ರಮವನ್ನು ನಿರೂಪಿಸಲಾಗಿದೆ ಎಂದು ರೊಬೋಟಿಕ್ ತಯಾರಿಕಾ ಸಂಸ್ಥೆ ಮಿಲಾಗ್ರೋದ ಸಂಸ್ಥಾಪಕ ಅಧ್ಯಕ್ಷ ರಾಜೀವ್ ಕಾರ್ವಾಲ್ ಮಾಹಿತಿ ನೀಡಿದ್ದಾರೆ.
ಹ್ಯುಮನಾಯ್ಡ್ ಇ ಎಲ್ ಎಫ್ ರೊಬೋಟ್ ನಲ್ಲಿ LIDAR ಮತ್ತು SLAM ತಂತ್ರಜ್ಞಾನ ಬಳಸಲಾಗಿದೆ. ಇದು ರೊಬೋಟ್ ಮುಕ್ತವಾಗಿ ತಿರುಗಾಟ ನಡೆಸುವುದು ಮತ್ತು ಘರ್ಷಣೆ ತಪ್ಪಿಸಲು ಸಹಾಯ ಮಾಡುತ್ತದೆ. 92 ಮೀಟರ್ ಎತ್ತರವಿರುವ ಈ ರೊಬೋಟ್ 60 ಸಂವೇದಕಗಳನ್ನು ಹೊಂದಿದೆ. 2.9. ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಇದರೊಳಗಿನ 3D ಮತ್ತು HD ಕೆಮರಾಗಳನ್ನು ಬಳಸಿಕೊಂಡು ವಾರ್ಡ್ನ ಎಲ್ಲಾ ಚಟುವಟಿಕೆಗಳನ್ನೂ ರೆಕಾರ್ಡಿಂಗ್ ಮಾಡುತ್ತದೆ. ಇದರಿಂದಾಗಿ ರೋಗಿಗಳೊಡನೆ ವೈದ್ಯಕೀಯ ಸಿಬ್ಬಂದಿ ದೂರದಿಂದಲೇ ಸಂವಹನ ನಡೆಸಲು ಸಾಧ್ಯವಿದೆ. ಇದರಲ್ಲಿ 10 ಇಂಚಿನ ಪರದೆ ಅಳವಡಿಸಲಾಗಿದ್ದು, ರೋಗಿಯೊಂದಿಗೆ ಅವನ/ಳ ಸಂಬಂಧಿಕರು, ಸ್ನೇಹಿತರು ಸಹಾ ಸಂವಹನ ನಡೆಸಲು ಸಾಧ್ಯವಿದೆ.
ಇನ್ನು ಐಮ್ಯಾಪ್9 ರೊಬೋಟ್ ಅನ್ನು ಮಾನವನ ಸಹಕಾರ ಇಲ್ಲದೇಯೇ ಶುಚಿತ್ವದ ಕೆಲಸ ಮಾಡುವಂತೆ ರೂಪಿಸಲಾಗಿದೆ. ಈ ರೊಬೋಟ್ನಲ್ಲಿ ಅಳವಡಿಸಲಾಗಿರುವ ಸೋಡಿಯಂ ಹಿಪೋಕ್ಲೋರೈಟ್ ನೆಲದಲ್ಲಿ ಅಥವಾ ಪರಿಸರದಲ್ಲಿರುವ ಕೊರೋನಾ ವೈರಸ್ ಅನ್ನು ನಾಶ ಮಾಡುತ್ತದೆ ಎಂದು ತಯಾರಕರು ತಿಳಿಸಿದ್ದಾರೆ.
ಕೇರಳ, ತಮಿಳುನಾಡು, ರಾಜಸ್ಥಾನ ಮೊದಲಾದೆಡೆಗಳಲ್ಲಿ ರೋಗಿಗಳ ಮೇಲೆ ನಿಗಾ ವಹಿಸಲು, ಆಹಾರ, ಔಷಧಗಳನ್ನು ತಲುಪಿಸಲು ರೊಬೋಟ್ ಬಳಕೆ ಮಾಡಲಾಗುತ್ತದೆ. ಕೊರೋನಾ ನಂತರದಲ್ಲಿ ಚೀನಾ, ಯುಎಸ್, ಇಟಲಿ ಮೊದಲಾದ ದೇಶಗಳೂ ವೈದ್ಯಕೀಯ ವಲಯದಲ್ಲಿ ರೊಬೋಟ್ ಬಳಕೆಯನ್ನು ಆರಂಭಿಸಿವೆ. ಇದೀಗ ಏಮ್ಸ್ ಸಹಾ ಇಂತಹ ಸಾಹಸಕ್ಕೆ ಕೈ ಹಾಕುವ ಮೂಲಕ ವೈದ್ಯಕೀಯ ಸಿಬ್ಬಂದಿಗಳನ್ನು ಸೋಂಕು ಹರಡಿಸಿಕೊಳ್ಳದಂತೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.