ನವದೆಹಲಿ: ಕೊರೋನಾ ವೈರಸ್ ತಡೆಯುವ ನಿಟ್ಟಿನಲ್ಲಿ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಆರೋಗ್ಯ ರಕ್ಷಕರ ಸುರಕ್ಷತೆ ಕಾಪಾಡುವ ದೃಷ್ಟಿಯಿಂದ, ಕೇಂದ್ರ ಆರೋಗ್ಯ ಸಚಿವಾಲಯದ ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ತಿದ್ದುಪಡಿಗೆ ಒಪ್ಪಿಗೆ ಸೂಚಿಸಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಆ ಮೂಲಕ ಆರೋಗ್ಯ ರಕ್ಷಣಾ ಸಿಬ್ಬಂದಿಗಳ ಮೇಲೆ ನಡೆಯುವ ದೌರ್ಜನ್ಯಕ್ಕೆ ಶಿಕ್ಷೆ ನೀಡಲು ಸಿದ್ಧಪಡಿಸಿದ ಸುಗ್ರೀವಾಜ್ಞೆ ಜಾರಿಗೆ ಅನುಮತಿ ನೀಡಿದ್ದಾರೆ. ಆ ಮೂಲಕ ಅವರ ಮೇಲಿನ ಹಲ್ಲೆ ಜಾಮೀನು ರಹಿತ ಅಪರಾಧ ಎಂದು ಘೋಷಿಸಲು ಕೋವಿಂದ್ ಅನುಮತಿ ನೀಡಿದ್ದಾರೆ.
ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಯಾವುದೇ ಆರೋಗ್ಯ ರಕ್ಷಕ ಸಿಬ್ಬಂದಿಯ ಮೇಲೆ ಹಲ್ಲೆ ಅಥವಾ ಇನ್ಯಾವುದೇ ರೀತಿಯ ದೌರ್ಜನ್ಯ ನಡೆಸುವುದು, ಆಸ್ತಿ ಪಾಸ್ತಿ ಹಾನಿ ಮೊದಲಾದವುಗಳಿಗೆ ಶಿಕ್ಷೆ ಮತ್ತು ಪರಿಹಾರ ಒದಗಿಸಿಕೊಡುವ ನಿಟ್ಟಿನಲ್ಲಿ ಈ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ಹಿಂಸಾಚಾರ, ಹಿಂಸೆಗೆ ಪ್ರಚೋದನೆ ನೀಡಿದವರಿಗೆ ಮೂರು ತಿಂಗಳಿನಿಂದ ಐದು ವರ್ಷಗಳ ಜೈಲುವಾಸ, 50 ಸಾವಿರ ರೂ. ಗಳಿಂದ 2ಲಕ್ಷ ರೂ. ಗಳ ವರೆಗೆ ದಂಡ ವಿಧಿಸಬಹುದಾಗಿದೆ. ಅಲ್ಲದೆ, ತೀವ್ರ ಹಿಂಸಾಚಾರದ ಸಂದರ್ಭದಲ್ಲಿ ಆರು ತಿಂಗಳಿನಿಂದ ಏಳು ವರ್ಷಗಳ ಜೈಲುವಾಸ, 1 ಲಕ್ಷ ದಿಂದ 5 ಲಕ್ಷ ರೂ. ಗಳ ವರೆಗೆ ದಂಡ ವಿಧಿಸುವ ಅನುಮತಿಯನ್ನು ಈ ತಿದ್ದುಪಡಿಯ ಮೂಲಕ ನೀಡಲಾಗಿದೆ.
ಜೊತೆಗೆ ಸಂತ್ರಸ್ತರಿಗೆ ಆರೋಪಿಯೇ ಪರಿಹಾರ ನೀಡುವಂತೆ, ಆಸ್ತಿ ಪಾಸ್ತಿ ಹಾನಿಯಾದಲ್ಲಿ, ಹಾನಿಯ ಮೌಲ್ಯಕ್ಕಿಂತ ದುಪ್ಪಟ್ಟು ಮೌಲ್ಯಗಳನ್ನು ಆರೋಪಿಯಿಂದ ಪಡೆದುಕೊಳ್ಳುವಂತೆಯೂ ಈ ಸುಗ್ರೀವಾಜ್ಞೆ ಯಲ್ಲಿ ತಿಳಿಸಲಾಗಿದೆ. ಯಾವುದೇ ಸಾಂಕ್ರಾಮಿಕ ರೋಗಗಳ ಕಠಿಣ ಸ್ಥಿತಿಯಲ್ಲಿ ಇಂತಹ ದೌರ್ಜನ್ಯಗಳು ನಡೆಯಬಾರದು ಎಂಬ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿರುವುದಾಗಿ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಅಲ್ಲದೆ ದೇಶದಲ್ಲಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂತಹ ಕ್ರಮ ತೀರಾ ಅಗತ್ಯ ಎಂದೂ ಸಚಿವಾಲಯ ಅಭಿಪ್ರಾಯ ಪಟ್ಟಿದೆ. ವೈದ್ಯಕೀಯ ಸಿಬ್ಬಂದಿ ತಮ್ಮ ಜೀವವನ್ನೂ ಲೆಕ್ಕಿಸದೆ ಹಗಲು ರಾತ್ರಿ ಎನ್ನದೆ ಕಾರ್ಯ ನಿರ್ವಹಿಸುತ್ತಿದ್ದು, ಅವರ ಭದ್ರತೆಯ ಹಿತದೃಷ್ಟಿಯಿಂದ ಈ ಕಾನೂನು ಜಾರಿಗೊಳಿಸಿರುವುದಾಗಿಯೂ ಸಚಿವಾಲಯ ಹೇಳಿಕೆ ನೀಡಿದೆ.
ಇಂತಹ ಅಪರಾಧದ ಸಂದರ್ಭದಲ್ಲಿ ಅದರ ತನಿಖೆಗಳನ್ನು ಮೂವತ್ತು ದಿನಗಳೊಳಗೆ ಮಾಡಿ, ಲಿಖಿತ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಮತ್ತು ಒಂದು ವರ್ಷದ ಒಳಗಾಗಿ ನ್ಯಾಯಾಲಯದಲ್ಲಿ ಇಂತಹ ಅಪರಾಧಗಳ ಸಂದರ್ಭದಲ್ಲಿ ವಿಚಾರಣೆ ಮುಗಿಸುವಂತೆಯೂ ಈ ಸುಗ್ರೀವಾಜ್ಞೆ ಯಲ್ಲಿ ತಿಳಿಸಲಾಗಿದೆ. ಆ ಮೂಲಕ ಜನರ ಜೀವ ಉಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವ ಜನರ ಮೇಲಿನ ದೌರ್ಜನ್ಯಕ್ಕೆ ಶೀಘ್ರ ಶಿಕ್ಷೆ ನೀಡುವ ಮೂಲಕ ಅವರ ಹಿತಾಸಕ್ತಿ ಕಾಪಾಡಲಾಗುವುದು ಎಂದೂ ಸಚಿವಾಲಯ ಹೇಳಿಕೆ ನೀಡಿದೆ.
ಆರೋಗ್ಯ ರಕ್ಷಕರ ಕೆಲಸಕ್ಕೆ ಸಹಕಾರ ನೀಡುವ ಮೂಲಕ ಅವರನ್ನು ಬೆಂಬಲಿಸುವ ಮತ್ತು ಅವರಲ್ಲಿ ಉತ್ಸಾಹ ತುಂಬುವ ನಿಟ್ಟಿನಲ್ಲಿ ಇದನ್ನು ಜಾರಿಗೊಳಿಸಲಾಗಿದೆ. ಅಲ್ಲದೆ ಸಮಾಜವನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಮಾಡುವ ಜನರ ವಿರುದ್ಧ ದೌರ್ಜನ್ಯ ನಡೆಸುವವರಿಗೆ ಸರಿಯಾದ ಪಾಠ ಕಲಿಸುವ ನಿಟ್ಟಿನಲ್ಲಿ ಸರ್ಕಾರ ಈ ಸುಗ್ರೀವಾಜ್ಞೆ ಜಾರಿಗೆ ತಂದಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.