ನವದೆಹಲಿ: ಕೊರೋನಾ ವಿರುದ್ಧದ ಹೋರಾಟದಲ್ಲಿ ಬೇರೆ ಬೇರೆ ವಿಧಗಳಲ್ಲಿ ಸರ್ಕಾರಗಳ ಜೊತೆಗೆ ಕೈ ಜೋಡಿಸಿರುವ ಭಾರತೀಯ ರೈಲ್ವೇ ಇಲಾಖೆ, ಇದೀಗ ತನ್ನ ಅಂಗಸಂಸ್ಥೆ ಐಆರ್ಸಿಟಿಸಿಯಿಂದ “ನೀರ್” ಶುದ್ಧ ಕುಡಿಯುವ ಬಾಟಲ್ ನೀರು ತಯಾರಿಕೆಗೆ ಮುಂದಾಗಿದ್ದೂ, ದೇಶಾದ್ಯಂತ ಕೊರೋನಾ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್ಗೆ ಉಚಿತವಾಗಿ ನೀಡಲು ಆರಂಭಿಸಿದೆ.
ಕೊರೋನಾ ಲಾಕ್ಡೌನ್ ಸಮಯದಲ್ಲಿ ಆಹಾರವನ್ನು ನೀಡುವ ಕೆಲಸವನ್ನೂ ಮಾಡುತ್ತಿರುವ ಇಲಾಖೆ, ಸದ್ಯ ಕೊರೋನಾ ವಿರುದ್ಧ ತೊಡೆ ತಟ್ಟಿರುವ ಪೊಲೀಸರಿಗೆ ಕುಡಿಯುವ ಶುದ್ಧ ನೀರು ಒದಗಿಸುವಲ್ಲಿ ಕಾರ್ಯ ಪ್ರವೃತ್ತವಾಗಿದೆ. ದೆಹಲಿಯ ರಸ್ತೆ ರಸ್ತೆಗಳಲ್ಲಿ ಬಿರು ಬಿಸಿಲಿನ ನಡುವೆಯೂ ಕರ್ತವ್ಯ ಮೆರೆಯುತ್ತಿರುವ ಪೊಲೀಸರಿಗೆ ದಿನವೊಂದಕ್ಕೆ 10,000 ದಷ್ಟು ನೀರಿನ ಬಾಟಲಿಗಳನ್ನು ಪೂರೈಕೆ ಮಾಡುತ್ತಿದೆ. ಆ ಮೂಲಕ ಸವಾಲಿನ ಕೆಲಸ ಮಾಡುತ್ತಿರುವವರ ಬಾಯಾರಿಕೆ ನೀಗಿಸುವ ಸಲುವಾಗಿ ಇಲಾಖೆ ಕ್ರಮ ಕೈಗೊಂಡಿದೆ.
ಎಪ್ರಿಲ್ 16 ರಿಂದಲೇ ಉಚಿತ ನೀರಿನ ಬಾಟಲಿಗಳನ್ನು ನೀಡುವ ಕೆಲಸ ಆರಂಭಿಸಿದ್ದು, ಆ ಮೂಲಕ 24×7 ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಗೌರವ ಸಲ್ಲಿಸುವ ಕಾರ್ಯ ಮಾಡುತ್ತಿದೆ. ಈ ವರೆಗೆ ರಾಷ್ಟ್ರ ರಾಜಧಾನಿಯಲ್ಲಿ ಸುಮಾರು 50,000 ಬಾಟಲಿ ನೀರು ಪೂರೈಕೆ ಮಾಡಲಾಗಿದೆ. ದೇಶದಾದ್ಯಂತ ಸುಮಾರು 10 ಪ್ರದೇಶಗಳಲ್ಲಿ ಪ್ಯಾಕೇಜ್ಡ್ ವಾಟರ್ ಅನ್ನು ತಯಾರಿಸುವ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಅಲ್ಲದೆ ಎಲ್ಲಾ ರೈಲು ನಿಲ್ದಾಣಗಳಲ್ಲಿಯೂ ನೀರು ದೊರೆಯುವ ವ್ಯವಸ್ಥೆ ಮಾಡಲಾಗಿದೆ.
ಇನ್ನು, ಕೋವಿಡ್ ಕಾಟದಿಂದಾಗಿ ಭಾರತದ ಆರ್ಥಿಕತೆಯ ಮೇಲೂ ಕೆಟ್ಟ ಪರಿಣಾಮ ಉಂಟಾಗಿದೆ. ಕೈಗಾರಿಕೆಗಳು ಸಂಕಷ್ಟದಲ್ಲಿದ್ದು, ನೀರು ತಯಾರಿಕಾ ಕೇಂದ್ರಗಳು ಮುಚ್ಚುವ ಭೀತಿ ಇರುವುದಾಗಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆದರೂ, ಲಾಕ್ಡೌನ್ ಅವಧಿ ಮುಗಿಯುವ ವರೆಗೆ ಅಂದರೆ ಮೇ 3 ರ ವರೆಗೆ ಯಾವುದೇ ತೊಂದರೆಯಾಗದಂತೆ ಶುದ್ಧವಾದ ಕುಡಿಯುವ ನೀರಿನ ಬಾಟಲಿಗಳನ್ನು ಕೊರೋನಾ ವಾರಿಯರ್ಸ್ಗೆ ತಲುಪಿಸುವ ಭರವಸೆಯನ್ನು ಅವರು ನೀಡಿದ್ದಾರೆ.
ಕೊರೋನಾ ವಿರುದ್ಧದ ಹೋರಾಟದಲ್ಲಿ ರೈಲ್ವೇ ಇಲಾಖೆ, ರೈಲುಗಳನ್ನೇ ಐಸೋಲೇಷನ್ ವಾರ್ಡ್ ಗಳಾಗಿ ಪರಿವರ್ತಿಸಿತ್ತು. ಜೊತೆಗೆ ವೈದ್ಯಕೀಯ, ಅಹಾರ ವಸ್ತುಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವ, ನಿರ್ಗತಿಕರಿಗೆ ಆಹಾರ ತಯಾರಿಸಿ ಕೊಡುವ, ಪಿಪಿಇ ಕಿಟ್ ತಯಾರಿ ಮೊದಲಾದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಮಾದರಿಯಾಗಿದ್ದು, ಇದೀಗ ಪೊಲೀಸರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಮೂಲಕವೂ ಪ್ರಶಂಸೆಗೆ ಪಾತ್ರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.