ನವದೆಹಲಿ: ಲಾಕ್ಡೌನ್ನಿಂದಾಗಿ ಕೃಷಿ ಸರಕುಗಳನ್ನು ಸಾಗಿಸಲಾಗುತ್ತಿಲ್ಲ. ಕೃಷಿ ಉತ್ಪನ್ನಗಳು ಹಾಳಾಗುವ ಭೀತಿಯನ್ನು ಕೃಷಿಕರು ಎದುರಿಸುವ ಜೊತೆಗೆ ಈ ಬಾರಿಯ ಕೃಷಿ ಚಟುವಟಿಕೆಗಳಿಗೆ ಬೇಕಾದ ಬೀಜ, ಗೊಬ್ಬರ ಸೇರಿದಂತೆ ಇನ್ನಿತರ ಉಪಯುಕ್ತ ವಸ್ತುಗಳನ್ನು ಪಡೆದುಕೊಳ್ಳುವುದು ಹೇಗೆ ಎಂಬ ಚಿಂತೆ ಕೃಷಿಕರದ್ದು. ಈ ಗೊಂದಲ ನಿವಾರಣೆಗೆ, ಕೃಷಿಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮತ್ತು ಹಾಳಾಗುವ ಕೃಷಿ ಉತ್ಪನ್ನಗಳನ್ನು ಅಗತ್ಯವಿದ್ದೆಡೆಗೆ ರವಾನಿಸಲು ಅಂತರಾಜ್ಯ ಸಂಚಾರ ವ್ಯವಸ್ಥೆ ಮೊದಲಾದವುಗಳ ಸಂಬಂಧ ಮಾಹಿತಿಗಾಗಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸಹಾಯವಾಣಿಗೆ ಚಾಲನೆ ನೀಡಿದ್ದಾರೆ. 18001804200 ಮತ್ತು 14488 ಈ ಸಂಖ್ಯೆಗೆ ನಮ್ಮ ಮೊಬೈಲ್ ಅಥವಾ ಲ್ಯಾಂಡ್ ಫೋನ್ ಸಹಾಯದಿಂದ ದಿನ ಅಥವಾ ರಾತ್ರಿ, ಯಾವ ವೇಳೆಯಲ್ಲಿ ಬೇಕಾದರೂ ಮಾಹಿತಿ ಪಡೆಯಬಹುದು ಎಂದು ಕೃಷಿ ಸಚಿವಾಲಯ ತಿಳಿಸಿದೆ.
ಭಾರತದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ, ಆಲ್ ಇಂಡಿಯಾ ಅಗ್ರಿ ಟ್ರಾನ್ಸ್ಪೋರ್ಟ್ ಕಾಲ್ ಸೆಂಟರ್ ಮತ್ತು ಕೇಂದ್ರ ಸರ್ಕಾರದ ಸಮನ್ವಯದೊಂದಿಗೆ ಈ ಸಹಾಯವಾಣಿ ಆರಂಭವಾಗಿದೆ. ರಾಜ್ಯ ರಾಜ್ಯಗಳ ನಡುವೆ ವಸ್ತುಗಳನ್ನು ಸಾಗಿಸುವ ಅಂತರಾಜ್ಯ ಸೇವೆಗಳ ಹಿತದೃಷ್ಟಿಯಿಂದ ಇದನ್ನು ಆರಂಭಿಸಲಾಗಿದೆ. ದಿನದ 24 ಗಂಟೆಗಳೂ ಈ ಸಹಾಯವಾಣಿ ಕಾರ್ಯ ನಿರ್ವಹಿಸಲಿರುವುದಾಗಿಯೂ ಇಲಾಖೆ ತಿಳಿಸಿದೆ. ಹರಿಯಾಣದ ಫರೀದಾಬಾದ್ನ ಕಛೇರಿಯ ಸುಮಾರು 10 ಅಧಿಕಾರಿಗಳು 8 ಗಂಟೆಗಳಂತೆ ಮೂರು ಪಾಳಿಗಳಲ್ಲಿ ಈ ಕಾಲ್ ಸೆಂಟರ್ನಲ್ಲಿ ಕಾರ್ಯ ನಿರ್ವಹಿಸಲಿದ್ದು, ರೈತರಿಗೆ ಬೇಕಾದ ಕೃಷಿ ಮಾಹಿತಿ ಒದಗಿಸಲಿದ್ದಾರೆ.
ಕೃಷಿಕರು, ಸಾಗಾಟದಲ್ಲಿ ನೆರವಾಗುವ ಟ್ರಕ್ ಚಾಲಕರು, ಸಾಗಾಣೆದಾರರು, ವ್ಯಾಪಾರಿಗಳು ಸಹ ಈ ಸೇವೆ ಬಳಸಿಕೊಳ್ಳಬಹುದು. ಇನ್ನು ರೈತರು ತಮ್ಮಲ್ಲಿರುವ ಹಾಳಾಗುವ ಕೃಷಿ ವಸ್ತುಗಳ ಬಗ್ಗೆ ಈ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದಲ್ಲಿ ಆಯಾ ರಾಜ್ಯ ಸರ್ಕಾರಗಳಿಗೆ ತಿಳಿಸಿ ಅವುಗಳ ಸಾಗಾಟಕ್ಕೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿಯೂ ಈ ಸಹಾಯ ವಾಣಿ ನೆರವಾಗಲಿದೆ. ಈ ಕಾಲ್ ಸೆಂಟರ್ನ ಅಧಿಕಾರಿಗಳು ಸಮಸ್ಯೆ ಆಲಿಸುವ ಮತ್ತು ಅದಕ್ಕೆ ಸರಿಯಾದ ಪರಿಹಾರ ಕ್ರಮಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಲಿರುವುದಾಗಿಯೂ ಮಾಹಿತಿ ನೀಡಿದೆ.
ದೇಶ ಲಾಕ್ಡೌನ್ ಆಗಿರುವ ಈ ಸ್ಥಿತಿಯಲ್ಲಿ ಬೇಕಾದ ಆಹಾರ ವಸ್ತುಗಳಿದ್ದರೂ, ಅದನ್ನು ಅಗತ್ಯವಿದ್ದ ಸ್ಥಳಗಳಿಗೆ ತಲುಪಿಸುವುದು ಕಷ್ಟವಾಗಿತ್ತು. ಹೀಗಿರುವಾಗ ಕೇಂದ್ರ ಸರ್ಕಾರ ಇಂತಹ ಒಂದು ಉಪಯೋಗಕಾರಿ ಕ್ರಮದ ಮೂಲಕ ಜನರ ಆಹಾರ ಅವಶ್ಯಕತೆಗಳನ್ನು ಪೂರೈಸಲು ಮತ್ತು ಬೇಗನೆ ಕೆಟ್ಟು ಹೋಗುವ ವಸ್ತುಗಳನ್ನು ಸಮರ್ಪಕವಾಗಿ ಬಳಕೆ ಮಾಡುವಂತೆ ಕ್ರಮಕ್ಕೆ ಮುಂದಾಗಿರುವುದು ಮಾದರಿಯೇ ಸರಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.