ಹೈದರಾಬಾದ್ : ಕೊರೋನಾ ಸೋಂಕಿನಿಂದಾಗಿ ಇಡೀ ದೇಶಕ್ಕೆ ದೇಶವೇ ಲಾಕ್ಡೌನ್ ಆಗಿದೆ. ಇದರಿಂದ ಭಾರತ ಆರ್ಥಿಕ ಸಂಕಷ್ಟವನ್ನು ಎದುರಿಸಲಾರಂಭಿಸಿದೆ. ಬಡ ಮತ್ತು ಮಧ್ಯಮ ವರ್ಗದ ಜನರು ಅಗತ್ಯವಿರುವ ಆಹಾರ ವಸ್ತುಗಳನ್ನು ಸಂಗ್ರಹಿಸುವುದಕ್ಕೂ ಕಷ್ಟ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದೇಶದ ಪ್ರಧಾನಿ ಮೋದಿ ಅವರೇ ಬಡ ಜನರಿಗೆ ಕೈಲಾದಷ್ಟರ ಮಟ್ಟಿಗೆ ಸಹಾಯ ಮಾಡುವಂತೆಯೂ ದೇಶವಾಸಿಗಳನ್ನು ಕೇಳಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಹೈದರಾಬಾದ್ನ 6 ನೇ ತರಗತಿಯ 11 ವರ್ಷದ ಬಾಲಕಿಯೊಬ್ಬಳು ಸುಮಾರು 9.4 ಲಕ್ಷ ರೂ. ಗಳನ್ನು ಸಂಗ್ರಹಿಸಿ ಬಡ ವರ್ಗಕ್ಕೆ ಆಹಾರ ನೀಡುತ್ತಿದ್ದಾಳೆ.
ಅಂದ ಹಾಗೆ ಅವಳ ಹೆಸರು ರಿಧಿ. ಕೊರೋನದ ಲಾಕ್ಡೌನ್ ಜಾರಿಯಾದ ಆರಂಭದ ದಿನಗಳಲ್ಲಿ ತನಗೆ ಬೇಕಾದ ವಸ್ತುಗಳನ್ನು ಹೇಗೆ ಸಂಗ್ರಹಿಸುವುದು ಎಂದು ಚಿಂತಿಸುತ್ತಿದ್ದವಳು. ಆದರೆ ಕ್ರಮೇಣ ಮಾಧ್ಯಮಗಳಲ್ಲಿ ಭಾರತೀಯರ ಸಂಕಷ್ಟ ನೋಡಿ, ಬಡ ಜನರಿಗೆ ಏನಾದರೂ ಸಹಾಯ ಮಾಡಬೇಕೆಂಬ ಆಶಯವನ್ನು ಮೈಗೂಡಿಸಿಕೊಂಡವಳು. ಮೊದಲು ತನ್ನ ಪಾಕೆಟ್ ಮನಿಯನ್ನು ಬಳಸಿ ಅದರಿಂದ ಆಹಾರ ವಸ್ತುಗಳನ್ನು ಖರೀದಿಸಿ, ಕಿಟ್ ಗಳನ್ನಾಗಿಸಿ ಬಡವರಿಗೆ ನೀಡುತ್ತಾಳೆ. ಹೀಗೆ ಆರಂಭವಾದ ಇವಳ ಮಾದರಿ ಕಾರ್ಯ ಇಂದು ತಾನು ಬೇರೆ ಬೇರೆ ಮಾಧ್ಯಮಗಳನ್ನು ಬಳಸಿ 9.4 ಲಕ್ಷ ರೂ. ಸಂಗ್ರಹಿಸಿ, ಅದನ್ನು ಬಡವರ ಸೇವೆಗೆ ಬಳಕೆ ಮಾಡುವಲ್ಲಿಯವರೆಗೆ ಮುಂದುವರೆದಿದೆ.
ತನ್ನ ಕೈಲಿದ್ದ ಹಣ, ತನ್ನ ಹೆತ್ತವರು ನೀಡಿದ ಹಣದ ಜೊತೆಗೆ ಸಾಮಾಜಿಕ ಮಾಧ್ಯಮಗಳಾದ ಮಿಲಾಪ್ನಂತಹ ವೇದಿಕೆಗಳನ್ನು ಬಳಸಿ ಹಣ ಸಂಗ್ರಹಿಸುತ್ತಾಳೆ. ಆ ಮೂಲಕ ಈ ವರೆಗೆ ಸುಮಾರು 725 ಕಿಟ್ (ಅಕ್ಕಿ, ಮೆಣಸು, ಉಪ್ಪು, ಸಾಬೂನು, ಅಡುಗೆ ಎಣ್ಣೆ , ದಾಲ್) ಗಳನ್ನು ಹೈದರಾಬಾದ್ ನ ಬಡವರ್ಗಕ್ಕೆ ಹಂಚಿದ್ದಾಳೆ. ಸುಮಾರು 1000 ಆಹಾರದ ಕಿಟ್ಗಳನ್ನು ಬಡವರಿಗೆ ತಲುಪಿಸಿ ಅವರ ಹೊಟ್ಟೆ ತುಂಬಿಸುವ ಆಶಯವನ್ನು ರಿಧಿ ಹೊಂದಿದ್ದಾಗಿ ಆಕೆಯ ತಾಯಿ ಶಿಲ್ಪ ತಿಳಿಸುತ್ತಾರೆ.
ಹೆಚ್ಚಿನವರಿಗೆ ನಮ್ಮ ಹೊಟ್ಟೆ ತುಂಬಿದರೆ ಸಾಕು. ಬೇರೆಯವರ ಚಿಂತೆ ನಮಗೇಕೆ ಎಂಬ ಭಾವನೆ ಇರುತ್ತದೆ. ಆದರೆ 11 ವರ್ಷದ ರಿಧಿ ಮಾತ್ರ ಇದಕ್ಕೆ ಭಿನ್ನ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಬಡವರ ಬಗ್ಗೆ ಕಾಳಜಿ ಹೊಂದಿರುವ ಈಕೆಯ ಮಾತೃ ಹೃದಯಕ್ಕೆ ಹ್ಯಾಟ್ಸಾಪ್ ಹೇಳಲೇ ಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.