ನವದೆಹಲಿ: ಇಂದು ಕೊರೋನಾ ಒಂದನೇ ಹಂತದ ಲಾಕ್ಡೌನ್ನ ಕೊನೆಯ ದಿನವಾಗಿದ್ದು, ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಕೊರೋನಾ ನಿಯಂತ್ರಣಕ್ಕೆ ಲಾಕ್ಡೌನ್ ಅವಧಿ ವಿಸ್ತರಣೆ ಮಾಡಲಾಗಿದ್ದು ಮೇ. 3 ರ ವರೆಗೆ ಲಾಕ್ಡೌನ್ ಅವಧಿಯನ್ನು ವಿಸ್ತರಿಸಿರುವುದಾಗಿ ತಿಳಿಸಿದ್ದಾರೆ. ಸಾಂಕ್ರಾಮಿಕ ಸೋಂಕು ನಿಯಂತ್ರಿಸುವ ಸಲುವಾಗಿ ಈ ಕ್ರಮದ ಅನಿವಾರ್ಯತೆ ಇರುವುದಾಗಿ ತಿಳಿಸಿದ್ದಾರೆ. ಎಲ್ಲಾ ರಾಜ್ಯ ಸರ್ಕಾರಗಳ ಜೊತೆಗೆ ಈ ಬಗ್ಗೆ ನಿರಂತರವಾಗಿ ಚರ್ಚಿಸಲಾಗಿದ್ದು, ರಾಜ್ಯ ಸರ್ಕಾರಗಳ ಸಲಹೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಃದು ತಿಳಿಸಿದ್ದಾರೆ.
ಇನ್ನು ಈ ವರೆಗಿನ ಲಾಕ್ಡೌನ್ ಆದೇಶವನ್ನು ಜನರು ಅತ್ಯಂತ ಕಟ್ಟುನಿಟ್ಟಾಗಿ ಮತ್ತು ಶಿಸ್ತಿನಿಂದ ಪಾಲನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಸರ್ಕಾರದ ಆದೇಶವನ್ನು ಕಟ್ಟಾಗಿ ಪಾಲನೆ ಮಾಡುವ ಮೂಲಕ ಸರ್ಕಾರದ ಜೊತೆ ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಸೋಂಕು ತಡೆಗೆ ಸರ್ಕಾರ , ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಇತರ ಇಲಾಖೆಗಳು ನೀಡುವ ನಿರ್ದೇಶನಗಳನ್ನು ಪಾಲಿಸುವ ಮೂಲಕ ಲಾಕ್ಡೌನ್ ಯಶಸ್ವಿಯಾಗುವಂತೆ ಮಾಡುವಂತೆ ತಿಳಿಸಿದ್ದಾರೆ.
ಇನ್ನು ಈ ಬಾರಿ ಲಾಕ್ಡೌನ್ ಕೊಂಚ ಭಿನ್ನವಾಗಿದ್ದು ಹಾಟ್ಸ್ಪಾಟ್ ಗಳಾಗಿ ಗುರುತಿಸಲ್ಪಟ್ಟ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಇತರೆಡೆಗಳಲ್ಲಿ ಕೊಂಚ ಸಡಿಲ ಮಾಡುವ ಸೂಚನೆ ನೀಡಿದ್ದಾರೆ. ಈ ಬಾರಿಯ ಲಾಕ್ಡೌನ್ ಆದೇಶದ ಮಾರ್ಗಸೂಚಿಗಳನ್ನು ಈಗಾಗಲೇ ಎಲ್ಲಾ ರಾಜ್ಯಗಳಿಗೂ ನೀಡಲಾಗಿದ್ದು, ಅದರಂತೆ ಪ್ರಕ್ರಿಯೆ ನಡೆಯಲಿದೆ ಎಂಬ ಮಾಹಿತಿ ನೀಡಿದ್ದಾರೆ. ಅಲ್ಲದೆ ಗರೀಬ್ ಕಲ್ಯಾಣ ಯೋಜನೆಯಂತೆ ದಿನಗೂಲಿ ನೌಕರರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಬೇಸಾಯ, ಕೃಷಿ ಚಟುವಟಿಕೆಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ಪ್ರಧಾನಿ ಮಾಹಿತಿ ನೀಡಿದ್ದಾರೆ.
ಇನ್ನು ದೇಶಕ್ಕೆ ಬೇಕಾದಷ್ಟು ಆಹಾರ ವಸ್ತುಗಳು ದಾಸ್ತಾನಿದ್ದು, ಪೂರೈಕೆ ಮಾಡುವುದಾಗಿಯೂ ತಿಳಿಸಿದ್ದಾರೆ. ಮನೆಲ್ಲಿಯೇ ತಯಾರಿಸಿದ ಮಾಸ್ಕ್ ಗಳನ್ನು ಬಳಸುವುದು, ಬಿಸಿ ನೀರು ಕುಡಿಯುವುದರ ಜೊತೆಗೆ ಆರೋಗ್ಯ ವೃದ್ಧಿಗೆ ಪೃರಕವಾದ ಅಗತ್ಯ ಕ್ರಮಗಳನ್ನು ಅನುಸರಿಸಿ ಮನೆಯಲ್ಲಿಯೇ ಇರುವಂತೆ ಜನತೆಗೆ ಮೋದಿ ತಿಳಿಸಿದ್ದಾರೆ.
ಇನ್ನು ಆರೋಗ್ಯ ಸೇತು ಆಪ್ ನ ಬಗ್ಗೆ ಮಾತನಾಡಿದ ಮೋದಿ ದೇಶವಾಸಿಗಳು ಈ ಆಪ್ ಅನ್ನು ಡೌನ್ಲೋಡ್ ಮಾಡುವ ಮೂಲಕವೂ ತಮ್ಮ ಆರೋಗ್ಯ ಕಾಪಿಟ್ಟುಕೊಳ್ಳುವುದಕ್ಕೆ ಬೇಕಾದ ಮಾಹಿತಿಗಳನ್ನು ಪಡೆಯುವಂತೆ ತಿಳಿಸಿದ್ದಾರೆ. ಅಲ್ಲದೆ ಸೋಂಕಿನ ವಿರುದ್ಧ ಜೀವ ಪಣಕ್ಕಿಟ್ಟು ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸರು ಸೇರಿದಂತೆ ಇನ್ನಿತರ ಇಲಾಖೆಗಳು ನೀಡುವ ಸೂಚನೆಗಳನ್ನು ಪಾಲಿಸುವ ಮೂಲಕ ದೇಶದ ಆರೋಗ್ಯ ಕಾಪಾಡಲು, ಸೋಂಕು ಹೊಡೆದೋಡಿಸಲು ಸಹಕರಿಸುವಂತೆ ಕೋರಿಕೊಂಡಿದ್ದಾರೆ.
ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಕೊರೋನಾದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವಂತೆಯೂ ಮೋದಿ ಭಾರತೀಯರಿಗೆ ಕಿವಿಮಾತು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.