ಬೆಂಗಳೂರು: ಕೊರೋನಾ ಲಾಕ್ಡೌನ್ ವಿಚಾರವಾಗಿ ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಅಧಿಕೃತ ಮಾಹಿತಿ ನೀಡಿದ್ದು, ಮುಂದಿನ 15 ದಿನಗಳವರೆಗೂ ಲಾಕ್ಡೌನ್ ವಿಸ್ತರಿಸಿರುವುದಾಗಿ ತಿಳಿಸಿದ್ದಾರೆ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಸತತ ನಾಲ್ಕು ಗಂಟೆಗಳ ಕಾಲ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದರು. ಇದಾದ ಬಳಿಕ ಸಿಎಂ ಈ ಆದೇಶವನ್ನು ಪ್ರಕಟಿಸಿದ್ದಾರೆ.
ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಲಾಕ್ಡೌನ್ ಸಡಿಲಿಸಲಾಗುವುದು. ಸರ್ಕಾರಿ ನೌಕರರಿಗೆ ವಿನಾಯಿತಿ ನೀಡಿ ಕೆಲಸ ನಿರ್ವಹಿಸಲು ಅವಕಾಶ ನೀಡಲಾಗುವುದು. ಮುಂದಿನ ಎರಡು ದಿನಗಳಲ್ಲಿ ಲಾಕ್ಡೌನ್ ವಿಸ್ತರಣೆಯ ಸಂದರ್ಭದ ಮಾರ್ಗಸೂಚಿಯನ್ನು ನೀಡುವ ಬಗ್ಗೆ ಪ್ರಧಾನಿ ಮೋದಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಈ ಹಿಂದೆ ಅನುಸರಿಸಿದ ಲಾಕ್ಡೌನ್ಗಿಂತ ವಿಸ್ತರಣೆ ಮಾಡಲಾದ ಲಾಕ್ಡೌನ್ ಅವಧಿ ಭಿನ್ನವಾಗಿರುತ್ತದೆ. ಕೃಷಿ, ಕೈಗಾರಿಕೆ, ಕಾರ್ಮಿಕ ನೀತಿಗೆ ಅನುಗುಣವಾಗಿ, ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ 15 ದಿನಗಳ ಲಾಕ್ಡೌನ್ ಹೇಗಿರುತ್ತದೆ ಎಂದು ನಿರ್ಧರಿಸಲಾಗುವುದು. ಮುಂದಿನ 2-3 ವಾರಗಳು ಕೊರೋನಾ ನಿರ್ಣಾಯಕ ವಾರಗಳಾಗಿದ್ದು, ಅದನ್ನು ಯಶಸ್ವಿಯಾಗಿ ಎದುರಿಸಿದಲ್ಲಿ ಮಾತ್ರವೇ ಮುಂದೊದಗುವ ಆಪತ್ತಿನಿಂದ ಪಾರಾಗಬಹುದು ಎಂದು ಮೋದಿ ಅವರು ತಿಳಿಸಿದ್ದಾಗಿಯೂ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.
ಕೋವಿಡ್ ಪರಿಸ್ಥಿತಿಯ ಬಗ್ಗೆ ಮೋದಿ 12-13 ರಾಜ್ಯಗಳ ಮಾಹಿತಿ ಪಡೆದಿದ್ದಾರೆ. ಕರ್ನಾಟಕ ಈ ಹಿಂದೆ ದೇಶದಲ್ಲೇ ಅತೀ ಹೆಚ್ಚು ಕೋವಿಡ್ ಸೋಂಕಿತರಿರುವ ಮೂರನೇ ರಾಜ್ಯ ಎಂದು ಗುರುತಿಸಲ್ಪಟ್ಟಿತ್ತು. ಆದರೆ ಈಗ 11 ನೇ ಸ್ಥಾನಕ್ಕೆ ಇಳಿದಿದೆ. ಆದ್ದರಿಂದ ರಾಜ್ಯದ ಬಗ್ಗೆ ಮಾಹಿತಿ ತೆಗೆದುಕೊಂಡಿಲ್ಲ. ಇದಕ್ಕೆ ಕಾರಣೀಕರ್ತರಾದ ಅಧಿಕಾರಿಗಳ ಶ್ರಮಕ್ಕೂ ಮುಖ್ಯಮಂತ್ರಿ ಅಭಿನಂದನೆ ಸಲ್ಲಿಸಿದ್ದಾರೆ.
ಮುಂದಿನ 15 ದಿನಗಳ ಕಾಲ ಲಾಕ್ಡೌನ್ ತೀರಾ ಅನಿವಾರ್ಯ ಆಗಿದ್ದು, ಜನರಿಗೆ ಅಗತ್ಯ ವಸ್ತುಗಳನ್ನು ಕೊಳ್ಳಲು, ಅನಿವಾರ್ಯ ಸಂದರ್ಭದಲ್ಲಿ ಹೊರಬರಲು ಮತ್ತು ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವ ಭರವಸೆಯನ್ನು ಸಿಎಂ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.