ನವದೆಹಲಿ: ಕಳೆದ ಫೆಬ್ರವರಿಯಲ್ಲಿ ಭಾರತದ ವೈಮಾನಿಕ ದಾಳಿಗೆ ಗುರಿಯಾಗಿದ್ದ ಜೈಶೇ-ಇ-ಮೊಹಮ್ಮದ್ ಉಗ್ರ ಸಂಘಟನೆಯ ಬಾಲಕೋಟ್ ಶಿಬಿರವು ಮತ್ತೆ ಸಕ್ರಿಯವಾಗಿದೆ ಮತ್ತು ಅಲ್ಲಿ ಪ್ರಸ್ತುತ 27 ಭಯೋತ್ಪಾದಕರಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಉದ್ದೇಶದಿಂದಲೇ ಅಲ್ಲಿ ತರಬೇತಿಯನ್ನು ಆರಂಭಿಸಲಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಜೈಶೇ ಭಯೋತ್ಪಾದಕರು ಪುಲ್ವಾಮಾದಲ್ಲಿ ನಡೆಸಿದ ಆತ್ಮಾಹುತಿ ಬಾಂಬ್ ಸ್ಫೋಟಕ್ಕೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಜೈಶೇ ಶಿಬಿರಗಳನ್ನು ಗುರಿಯಿಟ್ಟುಕೊಂಡು ಬಾಲಕೋಟ್ ಮೇಲೆ ವೈಮಾನಿಕ ದಾಳಿಯನ್ನು ನಡೆಸಿತ್ತು. ಇದೀಗ ಈ ಜೈಶೇ ಸಂಘಟನೆಯ ನೇತೃತ್ವವನ್ನು ಮೌಲಾನಾ ಮಸೂದ್ ಅಜರ್ ರಕ್ತಸಂಬಂಧಿ ಯೂಸುಫ್ ಅಜರ್ ವಹಿಸಿದ್ದಾನೆ. ಪ್ರಸ್ತುತ ಭಾರತದ ವಿರುದ್ಧ ದಾಳಿ ನಡೆಸಲು 27 ಉಗ್ರರಿಗೆ ಭಯೋತ್ಪಾದಕ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
ಗುಪ್ತಚರ ಮಾಹಿತಿ ಪ್ರಕಾರ, 27 ರಲ್ಲಿ ಎಂಟು ಮಂದಿ ಭಯೋತ್ಪಾದಕರು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದವರು. ಅವರಿಗೆ ಪಾಕಿಸ್ಥಾನದ ಪಂಜಾಬ್ನ ಇಬ್ಬರು ಬೋಧಕರು ಮತ್ತು ಅಫ್ಘಾನಿಸ್ಥಾನದ ಮೂವರು ಬೋಧಕರು ತರಬೇತಿ ನೀಡುತ್ತಿದ್ದಾರೆ. ಈ ವಾರದಲ್ಲಿ ಅವರ ತರಬೇತಿ ಪೂರ್ಣಗೊಳ್ಳಲಿದೆ, ನಂತರ ಭಯೋತ್ಪಾದಕರು ಭಾರತಕ್ಕೆ ನುಸುಳಲು ಸಿದ್ಧರಾಗಲಿದ್ದಾರೆ.
ಭಾರತವು ಬಾಲಕೋಟ್ ಮೇಲೆ ವೈಮಾನಿಕ ದಾಳಿಯನ್ನು ನಡೆಸಿದ್ದ ಸಮಯದಲ್ಲಿ ಅಲ್ಲಿ ಸುಮಾರು 300 ಭಯೋತ್ಪಾದಕರಿಗೆ ತರಬೇತಿ ನೀಡಲಾಗುತ್ತಿತ್ತು ಎಂದು ಹೇಳಲಾಗಿದೆ.
ಫಿನಾನ್ಶಿಯಲ್ ಟಾಸ್ಕ್ ಫೋರ್ಸ್ ಎಚ್ಚರಿಕೆಯ ನಡುವೆಯೂ ಪಾಕಿಸ್ಥಾನದಲ್ಲಿ ಭಯೋತ್ಪಾದಕ ಸಂಘಟನೆಗಳು ಇನ್ನೂ ಸಕ್ರಿಯವಾಗಿ ಕಾರ್ಯಾಚರಿಸುತ್ತಿವೆ. ಭಾರತದ ವಿರುದ್ಧ ಪಿತೂರಿ ನಡೆಸಲೆಂದೇ ಪಾಕಿಸ್ಥಾನಿ ಸರ್ಕಾರ ಮತ್ತು ಸೇನೆ ವ್ಯವಸ್ಥಿತವಾಗಿ ಉಗ್ರ ತರಬೇತಿ ಕಾರ್ಯಗಳನ್ನು ಆಯೋಜಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.