ನವದೆಹಲಿ: ರಕ್ಷಣಾ ರಾಜತಾಂತ್ರಿಕತೆಯಲ್ಲಿ ಭಾರತದ ಬಲವನ್ನು ಹೆಚ್ಚಿಸಲು ಕೇಂದ್ರ ರಕ್ಷಣಾ ಸಚಿವಾಲಯ ಮುಂದಾಗಿದೆ. ಇದಕ್ಕಾಗಿ ಇನ್ನೂ 10 ಡಿಫೆನ್ಸ್ ಅಟ್ಯಾಚ್ಸ್ (ಡಿಎ) ಹುದ್ದೆಗಳನ್ನು ರಚಿಸುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಘೋಷಿಸಿದ್ದಾರೆ.
“ಭಾರತದಂತಹ ದೊಡ್ಡ ದೇಶವು ತನ್ನ ರಕ್ಷಣಾ ಸಹಕಾರವನ್ನು ಕೇವಲ ಕೆಲವು ದೇಶಗಳಿಗೆ ಮಾತ್ರ ಮೀಸಲುಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಅದನ್ನು ನಿರಂತರವಾಗಿ ವಿಸ್ತರಿಸಲು ಪ್ರಯತ್ನಿಸುತ್ತದೆ. ಇದು ಭಾರತದ ರಕ್ಷಣಾ ರಾಜತಾಂತ್ರಿಕತೆಯನ್ನು ಮತ್ತಷ್ಟು ಬಲಪಡಿಸುತ್ತದೆ” ಎಂದು ಸಿಂಗ್ 10 ಹೊಸ ಡಿಫೆನ್ಸ್ ಅಟ್ಯಾಚ್ಗಳನ್ನು ರಚಿಸುವುದಾಗಿ ಘೋಷಿಸಿದ ಸಂದರ್ಭದಲ್ಲಿ ಹೇಳಿದರು.
ಆಯಾ ದೇಶಗಳಿಗೆ ಡಿಎ ಮೂಲಕ ರಕ್ಷಣಾ ರಫ್ತು ಉತ್ತೇಜಿಸಲು ಸರ್ಕಾರ ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಡಿ 34 ದೇಶಗಳಿಗೆ ರಫ್ತು ಉತ್ತೇಜನಕ್ಕಾಗಿ ಹಣವನ್ನು ಮೀಸಲಿಡಲಾಗಿದೆ. ರಕ್ಷಣಾ ರಫ್ತು ಉತ್ತೇಜಿಸಲು ಡಿಎಗಳು ಈ ನಿಧಿಯನ್ನು ನ್ಯಾಯಯುತವಾಗಿ ಬಳಸುತ್ತಾರೆ ಎಂದು ರಾಜನಾಥ್ ಸಿಂಗ್ ಆಶಿಸಿದ್ದಾರೆ.
“ನೆರೆಯ ದೇಶದಲ್ಲಿ ಭಯೋತ್ಪಾದಕ ಮೂಲಸೌಕರ್ಯ ಮತ್ತು ಭಯೋತ್ಪಾದಕರಿಗೆ ರಾಜ್ಯ ಬೆಂಬಲ ನಿರಂತರವಾಗಿ ಇರುವುದು ಭಾರತದ ತಾಳ್ಮೆಯನ್ನು ಪರೀಕ್ಷಿಸಿದೆ. ಆದರೂ, ಜವಾಬ್ದಾರಿಯುತ ಮತ್ತು ಶಕ್ತಿಯುತ ರಾಷ್ಟ್ರವಾಗಿ ಭಯೋತ್ಪಾದಕ ಗುಂಪುಗಳು ಮತ್ತು ಅವರ ಪೋಷಕರ ಚಟುವಟಿಕೆಗಳನ್ನು ಅಡ್ಡಿಪಡಿಸಲು ಮತ್ತು ತಡೆಯಲು ಭಾರತವು ಸಮರ್ಥವಾಗಿದೆ ಎಂದು ತೋರಿಸಿಕೊಟ್ಟಿದೆ” ಎಂದು ನವದೆಹಲಿಯಲ್ಲಿ ನಡೆದ ಮೂರನೇ ಡಿಫೆನ್ಸ್ ಅಟ್ಯಾಚ್ ಸಮಾವೇಶವನ್ನು ಉದ್ದೇಶಿಸಿ ಸಿಂಗ್ ಹೇಳಿದ್ದರು.
ಹಿಂದೂ ಮಹಾಸಾಗರ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಬೆದರಿಕೆಗಳ ಕುರಿತು ಮಾತನಾಡಿದ ಕೇಂದ್ರ ಸಚಿವರು, “ನಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ನಾವು ಹೆಚ್ಚು ಗಮನಹರಿಸಬೇಕಾಗಿದೆ. ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸಲು ನಾವು ಸಕ್ರಿಯ ಕ್ರಮಗಳನ್ನು ಅಳವಡಿಸಿಕೊಂಡಿದ್ದೇವೆ. ಸ್ಥಿರ ಸಾಗರ ಪರಿಸರವನ್ನು ಸೃಷ್ಟಿಸಲು ಹಿಂದೂ ಮಹಾಸಾಗರದ ರಿಮ್ ಸಂಘಟನೆಯ ದೇಶವಾದ ಇಂಡೋನೇಷಿಯಾದೊಂದಿಗೆ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಹೆಚ್ಚಿಸುತ್ತಿದ್ದೇವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.