ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಮೇಲಾಟ ಕೊನೆಗೂ ಅಂತಿಮ ಹಂತ ತಲುಪಿದೆ. ಆದರೆ ಇದುವೆ ಕ್ಲೈಮ್ಯಾಕ್ಸ್ ಎಂದು ಹೇಳಲು ಸಾಧ್ಯವಿಲ್ಲ. ಮುಂಬರುವ ದಿನಗಳಲ್ಲಿ ಅಲ್ಲಿ ಏನು ಬೇಕಾದರೂ ನಡೆಯುವ ಸಂಭವಗಳಿವೆ. ಆದರೆ ಅಲ್ಲಿನ ಒಟ್ಟಾರೆ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯು ಅತ್ಯಂತ ಜಾಣ್ಮೆಯಿಂದ ನಡೆದುಕೊಂಡಿದೆ. ದೇವೇಂದ್ರ ಫಡ್ನವಿಸ್ ಅವರನ್ನು ಹೊರತುಪಡಿಸಿ ಬೇರೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಸರ್ಕಾರ ರಚನೆಗೆ ಬೆಂಬಲವನ್ನು ನೀಡುವುದಾಗಿ ಎನ್ಸಿಪಿ ಮುಖಂಡ ಶರದ್ ಪವರ್ ಬಿಜೆಪಿಗೆ ಮಾತುಕೊಟ್ಟಿದ್ದರು ಎಂಬುದೀಗ ಬಹಿರಂಗಗೊಂಡ ಸತ್ಯವಾಗಿದೆ. ಆದರೆ ಬಿಜೆಪಿಯು ಇದನ್ನು ಸಾರಾಸಗಟಾಗಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷಗಳ ಮೈತ್ರಿ ಸರಕಾರ ರಚನೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಭೆ ನಡೆಸಿದ್ದ ಶರದ್ ಪವಾರ್ ಅವರು ಎನ್ಸಿಪಿ ಬೆಂಬಲವನ್ನು ನೀಡುತ್ತದೆ ಆದರೆ ಅದಕ್ಕೆ ಪ್ರತಿಯಾಗಿ ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಹೇಳಿದ್ದರು. ಅವರ ಮೊದಲ ಬೇಡಿಕೆ, ಕೇಂದ್ರ ಕೃಷಿ ಖಾತೆಯನ್ನು ತನ್ನ ಮಗಳು ಸುಪ್ರಿಯ ಸುಳೆ ಅವರಿಗೆ ನೀಡಬೇಕು ಎಂಬುದಾಗಿತ್ತು. ದೇವೇಂದ್ರ ಫಡ್ನವಿಸ್ ಅವರನ್ನು ಹೊರತುಪಡಿಸಿ ಇನ್ನೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ಅವರ ಎರಡನೆಯ ಬೇಡಿಕೆಯಾಗಿತ್ತು. ಆದರೆ ಮೋದಿಯವರು ಈ ಎರಡು ಬೇಡಿಕೆಯನ್ನು ತಿರಸ್ಕರಿಸಿದರು. ಹೀಗಾಗಿ ವಿಧಿ ಇಲ್ಲದೆ ಎನ್ಸಿಪಿ ಶಿವಸೇನೆ ಮತ್ತೆ ಕಾಂಗ್ರೆಸ್ನೊಂದಿಗೆ ಸೇರಿ ಸರ್ಕಾರವನ್ನು ರಚನೆ ಮಾಡಿತು.
ಯುಪಿಎ ಎರಡನೇ ಅವಧಿಯಲ್ಲಿ ಶರದ್ ಪವಾರ್ ಅವರು ಕೇಂದ್ರ ಕೃಷಿ ಸಚಿವರಾಗಿದ್ದರು. ಅವರ ಅವಧಿಯುದ್ದಕ್ಕೂ ಭ್ರಷ್ಟಾಚಾರಗಳ ಸರಣಿಯೇ ನಡೆದಿತ್ತು. ವಿವಾದಾತ್ಮಕ ಲಾವಸ ಹಿಲ್ ಸಿಟಿ ಪ್ರಾಜೆಕ್ಟ್ ಅಡಿಯಲ್ಲಿ ಅವರು ಕಿಕ್ ಬ್ಯಾಕ್ ಪಡೆದ ಆರೋಪವನ್ನು ಹೊಂದಿದ್ದಾರೆ. ಮಹಾರಾಷ್ಟ್ರದಲ್ಲಿ ಕೃಷಿ ಸಮಸ್ಯೆ ತುಂಬಾ ಆಳವಾಗಿದೆ, ಇದಕ್ಕೆ ಎನ್ಸಿಪಿ ಪಕ್ಷ ಕೋ-ಅಪರೇಟಿವ್ಸ್ಗಳ ಮೇಲೆ ಪ್ರಭಾವ ಹೊಂದಿರುವುದೇ ಕಾರಣ. ಒಂದು ವೇಳೆ ಸುಪ್ರಿಯ ಸುಳೆ ಅವರಿಗೆ ಕೇಂದ್ರ ಕೃಷಿ ಸಚಿವಾಲಯವನ್ನು ನೀಡಿದ್ದರೆ ಬಿಜೆಪಿ ತನ್ನ ಗುಂಡಿಯನ್ನು ತಾನೇ ತೋಡಿಕೊಂಡಂತೆ ಆಗುತ್ತಿತ್ತು. ಭ್ರಷ್ಟಾಚಾರಗಳ ಸರಣಿಯೇ ನಡೆದುಹೋಗುತ್ತಿತ್ತು. ಮಾತ್ರವಲ್ಲ ಈ ನಿರ್ಧಾರ ಮಹಾರಾಷ್ಟ್ರದಲ್ಲಿ ಎನ್ಸಿಪಿ ಪಕ್ಷವನ್ನು ಇನ್ನಷ್ಟು ಬಲಗೊಳಿಸುತ್ತಿತ್ತು.
ಶರದ್ ಪವರ್ ಅವರೊಂದಿಗೆ ಕೈಜೋಡಿಸಿದ ಇರುವುದಕ್ಕೆ ಬಿಜೆಪಿಗೆ ಮತ್ತೊಂದು ಕಾರಣವೂ ಇದೆ. ಅದುವೇ ದೇವೇಂದ್ರ ಫಡ್ನವಿಸ್. ದೇವೇಂದ್ರ ಫಡ್ನವಿಸ್ ಹೊರತುಪಡಿಸಿ ಬೇರೆಯವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಕೊಡುವುದೇ ಆದರೆ ನಾವು ನಿಮ್ಮನ್ನು ಬೆಂಬಲಿಸುತ್ತೇವೆ ಎಂದು ಅವರು ಮೋದಿಯವರ ಬಳಿ ಹೇಳಿಕೊಂಡಿದ್ದರು. ತಮ್ಮೊಳಗಿನ ಅಭದ್ರತೆಯ ಭಾವದಿಂದಲೇ ಅವರು ಈ ಬೇಡಿಕೆಯನ್ನು ಮುಂದಿಟ್ಟಿದ್ದರು. ಆದರೆ ಪಡ್ನವಿಸ್ ಅವರನ್ನು ಹೊರತುಪಡಿಸಿ ಬೇರೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಕ್ಕೆ ಬಿಜೆಪಿಗೆ ಯಾವುದೇ ಕಾರಣಗಳು ಇರಲಿಲ್ಲ.
ಮಹಾರಾಷ್ಟ್ರವನ್ನು ಸ್ಥಿರ ಮತ್ತು ಭ್ರಷ್ಟಾಚಾರಮುಕ್ತಗೊಳಿಸುವಲ್ಲಿ ದೇವೇಂದ್ರ ಫಡ್ನವಿಸ್ ಅವರು ಸಾಕಷ್ಟು ಶ್ರಮಿಸಿದ್ದಾರೆ. ಐದು ವರ್ಷಗಳ ಕಾಲ ಅವರು ವಿವಾದ ಮುಕ್ತ ಆಡಳಿತವನ್ನು ನೀಡಿದ್ದಾರೆ. ಹೀಗಾಗಿ ಅಲ್ಲಿನ ಜನ ಅವರನ್ನು ವಿಕಾಸ ಪುರುಷ ಎಂದೇ ನೋಡುತ್ತಾರೆ. ಆದರೆ ಫಡ್ನವಿಸ್ ಅವರ ಈ ಗುಣ ಶರತ್ ಪವಾರ್ ಅವರಿಗೆ ದೊಡ್ಡ ಬೆದರಿಕೆಯಾಗಿತ್ತು. ಮುಂದಿನ ಐದು ವರ್ಷಗಳ ಕಾಲ ಫಡ್ನವಿಸ್ ಅವರೇ ಆಡಳಿತವನ್ನು ಮುನ್ನಡೆಸಿದರೆ ಮಹಾರಾಷ್ಟ್ರ ಉತ್ತುಂಗಕ್ಕೇರುತ್ತದೆ, ಆಗ ಫಡ್ನವಿಸ್ ಒಬ್ಬ ಧೀಮಂತ ರಾಜಕಾರಣಿಯಾಗಿ ಎಂಬ ಭಯ ಪವಾರ್ ಅವರನ್ನು ಕಾಡುತ್ತಿತ್ತು.
ಆದರೆ ಬಿಜೆಪಿಯು ಫಡ್ನವಿಸ್ ಅವರನ್ನು ಒಬ್ಬ ನಿಷ್ಠಾವಂತ ಕಾರ್ಯಕರ್ತ ಮತ್ತು ಉನ್ನತ ನಾಯಕ ಎಂದು ಪರಿಗಣಿಸುತ್ತದೆ. ಫಡ್ನವಿಸ್ ಅವರ ಮೌಲ್ಯಗಳನ್ನು ಬಿಜೆಪಿ ರಕ್ಷಿಸಲು ಮುಂದಾಯಿತು, ಅವರ ಮೇಲೆ ನಂಬಿಕೆ ಮತ್ತು ವಿಶ್ವಾಸವನ್ನು ದೃಢವಾಗಿ ವ್ಯಕ್ತಪಡಿಸಿತು. ಫಡ್ನವಿಸ್ ಅವರು ಐದು ವರ್ಷಗಳನ್ನು ಪೂರೈಸಿದ ಮಹಾರಾಷ್ಟ್ರದ ಎರಡನೇ ನಾಯಕ ಎಂಬುದು ಕೂಡ ಅತ್ಯಂತ ಪ್ರಮುಖವಾದ ವಿಷಯವಾಗಿದೆ. ಯಾವುದೇ ವಿವಾದ, ಗೊಂದಲಗಳಿಲ್ಲದೆ ಅವರು ಐದು ವರ್ಷಗಳ ಕಾಲ ಆಡಳಿತವನ್ನು ಸಮರ್ಪಕವಾಗಿ ಮುನ್ನಡೆಸಿದ್ದರು.
ಕಳೆದ ಬಾರಿ ಮೋದಿ ಅಲೆಯ ಕಾರಣದಿಂದಾಗಿ ಬಿಜೆಪಿಯು ಮಹಾರಾಷ್ಟ್ರ ಚುನಾವಣೆಯನ್ನು ಗೆದ್ದಿತ್ತು, ಆಗ ಫಡ್ನವಿಸ್ ಅವರು ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥರಾಗಿದ್ದರು. ಗೋಪಿನಾಥ್ ಮುಂಡೆ ಅವರ ನಿಧನದಿಂದಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಸಮರ್ಥ ನಾಯಕತ್ವದ ಕೊರತೆ ಎದುರಾಗಿತ್ತು. ಆ ವೇಳೆ ಪ್ರಧಾನಿ ಮೋದಿಯವರ ಸ್ವತಃ ಫಡ್ನವಿಸ್ ಅವರನ್ನು ಆಯ್ಕೆ ಮಾಡಿ ಮಹಾರಾಷ್ಟ್ರ ಬಿಜೆಪಿಯ ಜವಾಬ್ದಾರಿಯನ್ನು ಅವರಿಗೆ ವಹಿಸಿದರು. ಮೋದಿಯವರ ಹೆಜ್ಜೆಗುರುತುಗಳನ್ನು ಅನುಸರಿಸುತ್ತಾ ಮಹಾರಾಷ್ಟ್ರಕ್ಕಾಗಿ ಅವಿರತವಾಗಿ ಶ್ರಮಿಸಿದರು ಫಡ್ನವಿಸ್. ಫಡ್ನವಿಸ್ ಒಬ್ಬ ನಿಷ್ಠಾವಂತ ಕಾರ್ಯಕರ್ತ, ಮಹಾರಾಷ್ಟ್ರದ ಗ್ರಾಮೀಣ ಭಾಗದಲ್ಲಿ ಬಿಜೆಪಿಗೆ ನೆಲೆ ಸಿಕ್ಕುವಂತೆ ಮಾಡುವಲ್ಲಿ ಅವರು ಸಾಕಷ್ಟು ಶ್ರಮಿಸಿದ್ದಾರೆ. ಹೀಗಿರುವಾಗ ಮೋದಿಯವರು ಹೇಗೆ ತಾನೆ ಶರತ್ ಪವಾರ್ ಅವರ ಬೇಡಿಕೆಯನ್ನು ಒಪ್ಪಿಕೊಂಡಾರು?
ಆದರೆ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಅವರು ಬಿಜೆಪಿಯ ಮಾದರಿಯಲ್ಲಿ ಯಾವುದೇ ತ್ಯಾಗವನ್ನು ಮಾಡಲು ಸಿದ್ಧರಿರಲಿಲ್ಲ. ಅಧಿಕಾರದ ಲಾಲಸೆಯಿಂದ ಅವರು ತಮ್ಮ ಸಿದ್ಧಾಂತವನ್ನು ತೊರೆದರು. ತಮ್ಮ ಬದ್ಧವೈರಿ ಕಾಂಗ್ರೆಸ್ ಜೊತೆ ಕೈ ಜೋಡಿಸಿದರು. ಈ ಮೂಲಕ ತಮ್ಮನ್ನು ನಂಬಿದ ಜನರಿಗೆ ವಂಚನೆ ಮಾಡಿದರು. ಮುಂದಿನ ದಿನಗಳಲ್ಲಿ ಜನರು ಅವರಿಗೆ ಪಾಠವನ್ನು ಕಲಿಸುವುದು ಶತಸಿದ್ಧ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.