ವಿದೇಶಿ ನೇರ ಬಂಡವಾಳ ಹೂಡಿಕೆಯ ಹೆಚ್ಚಳದಿಂದಾಗಿ ಸೆನ್ಸೆಕ್ಸ್ ಸಾರ್ವಕಾಲಿಕ ಏರಿಕೆಯನ್ನು ಕಂಡು 41,000ದ ಗಡಿಯನ್ನು ದಾಟಿದೆ. ನಿನ್ನೆ ಬುಧವಾರ ಮುಂಬಯಿ ಸ್ಟಾಕ್ ಎಕ್ಸ್ಚೇಂಜ್ 41,000 ಅಂಕಕ್ಕೇರಿ 199 ಪಾಯಿಂಟ್ ಗಳಿಕೆಯನ್ನು ದಾಖಲಿಸಿತ್ತು.
ಈ ತಿಂಗಳು ವಿದೇಶಿ ಹೂಡಿಕೆದಾರರು 2.27 ಬಿಲಿಯನ್ ಡಾಲರ್ ಅನ್ನು ಭಾರತೀಯ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಈ ವರ್ಷದ ಮಾರ್ಚ್ ತಿಂಗಳ ಬಳಿಕ ಕಂಡ ಅತಿ ಹೆಚ್ಚು ಹೂಡಿಕೆ ಇದಾಗಿದೆ. ಬೇಡಿಕೆಯನ್ನು ಹೊತ್ತಿಸಲು ಸರಕಾರ ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂಬ ಆಶಾವಾದದೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಮಾಡಲು ಹೂಡಿಕೆದಾರರು ಹೆಚ್ಚು ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಮುಂದಿನ ಬಜೆಟ್ನಲ್ಲಿ ನರೇಂದ್ರ ಮೋದಿ ಸರ್ಕಾರ ಇನ್ನಷ್ಟು ಸಮಗ್ರ ಆರ್ಥಿಕ ಸುಧಾರಣೆಗಳನ್ನು ತರುವ ನಿರೀಕ್ಷೆಯಿದೆ.
ಈಗಾಗಲೇ ಮೋದಿ ಸರ್ಕಾರ ರಿಯಲ್ ಎಸ್ಟೇಟ್ ಮತ್ತು ಆಟೋ ಸೆಕ್ಟರ್ನಲ್ಲಿ ಹಲವು ಸುಧಾರಣೆಗಳನ್ನು ಘೋಷಿಸಿದೆ. ಇನ್ನಷ್ಟು ವಲಯಗಳಲ್ಲಿ ಇದೇ ರೀತಿಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬ ನಿರೀಕ್ಷೆಯನ್ನು ಹೂಡಿಕೆದಾರರು ಹೊಂದಿದ್ದಾರೆ. ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಹೂಡಿಕೆದಾರರ ಈ ನಿರೀಕ್ಷೆಯೂ ವರ್ಷಾಂತ್ಯದವರೆಗೂ ಸಕಾರಾತ್ಮಕವಾಗಿರಲಿದೆ. “ವಿದೇಶಿ ಹೂಡಿಕೆದಾರರಿಂದ ದ್ರವ್ಯತೆಯು ಹರಿದು ಬಂದಾಗ ಸುನಾಮಿ ಉಂಟಾಗುತ್ತದೆ ಮತ್ತು ನಾವು ಇದನ್ನು ಆಸ್ವಾದಿಸಬೇಕು” ಎಂದು ಐಡಿಬಿಐ ಕ್ಯಾಪಿಟಲ್ ಮಾರ್ಕೆಟ್ ಸರ್ವಿಸಸ್ ಲಿಮಿಟೆಡ್ನ ಸಂಶೋಧನಾ ಮುಖ್ಯಸ್ಥ ಎ. ಕೆ. ಪ್ರಭಾಕರ್ ಅವರು ಹೇಳಿದ್ದಾರೆ. ” ಹೂಡಿಕೆದಾರರ ಆಶಾವಾದವು ಈ ವರ್ಷಾಂತ್ಯದವರೆಗೂ ಮುಂದುವರೆಯಲಿದೆ” ಎಂದು ಅವರು ಹೇಳಿದ್ದಾರೆ.
ಭಾರತದಂತಹ ಮುಂದುವರಿಯುತ್ತಿರುವ ದೇಶಕ್ಕೆ ಅಗ್ಗದ ಕಾರ್ಮಿಕ, ಬಂಡವಾಳ ಮತ್ತು ಕ್ರಿಯಾಶೀಲ ಸರಕಾರದ ಅವಶ್ಯಕತೆ ಇದೆ. ಹೀಗಿದ್ದಾಗ ಮಾತ್ರ ಅದು ಉತ್ಪಾದನಾ ಕೇಂದ್ರವಾಗಿ ಮಾರ್ಪಡಲಿದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರವಹಿಸಿಕೊಂಡಾಗಿನಿಂದ ಭಾರತಕ್ಕೆ ಕ್ರಿಯಾಶೀಲ ಸರಕಾರ ದೊರೆತಿದೆ, ಆದರೆ ಅಗ್ಗದ ಬಂಡವಾಳ ಕೊರತೆಯಿಂದಾಗಿ ಭಾರತಕ್ಕೆ ಡಬಲ್ ಡಿಜಿಟ್ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಿಲ್ಲ.
ಕೇಂದ್ರ ಸರಕಾರವು ಈ ಸಮಸ್ಯೆಯನ್ನು ವಿದೇಶಿ ನೇರ ಬಂಡವಾಳ ಹೂಡಿಕೆ ನಿಯಮಗಳಲ್ಲಿ ಸುಧಾರಣೆಗಳನ್ನು ತರುವ ಮೂಲಕ ಸರಿಪಡಿಸಿದೆ ಮತ್ತು ಪ್ರಧಾನಿ ಮೋದಿಯವರು ಬಂಡವಾಳ ಶ್ರೀಮಂತ ಪಾಶ್ಚಾತ್ಯ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಉತ್ತಮಪಡಿಸಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ವೈಯಕ್ತಿಕವಾಗಿ ಸಾಕಷ್ಟು ಶ್ರಮಿಸಿದ್ದಾರೆ.
ಜಿಡಿಪಿಯೊಂದಿಗೆ ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಗತಿಯನ್ನು ತುಲನೆ ಮಾಡಿದರೆ ವಿದೇಶಿ ನೇರ ಹೂಡಿಕೆಯಲ್ಲಿ ಶೇಕಡ ಒಂದರಷ್ಟು ಹೆಚ್ಚಳವಾಗಿರುವುದು ಕಂಡುಬರುತ್ತದೆ. ಇದರಿಂದ ಜಿಡಿಪಿ ಶೇ.0.4-0.5ರಷ್ಟು ಹೆಚ್ಚಳವನ್ನು ಕಂಡಿದೆ. ಇದು ಭಾರತದ ಅಭಿವೃದ್ಧಿ ವೇದಿಕೆಯನ್ನು ಹೆಚ್ಚಾಗಿ ಅವಲಂಬಿಸಿದೆ. ಹೀಗಾಗಿ ಡಬಲ್ ಡಿಜಿಟ್ ಪ್ರಗತಿಯನ್ನು ಸಾಧಿಸಲು ಬಂಡವಾಳ ಶ್ರೀಮಂತ ರಾಷ್ಟ್ರಗಳಿಂದ ಹೂಡಿಕೆ ಹರಿದು ಬರುವುದು ಅತ್ಯಂತ ಅವಶ್ಯಕವಾಗಿದೆ.
ಮೋದಿ ಸರ್ಕಾರದ ಪ್ರಯತ್ನಗಳು ಫಲವನ್ನು ನೀಡುತ್ತಿದ್ದು ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಹೆಚ್ಚಳವಾಗುತ್ತಿದೆ. ಆದರೆ ಇತರ ಏಷ್ಯಾ ರಾಷ್ಟ್ರಗಳಲ್ಲಿ ಬಂಡವಾಳ ಹೂಡಿಕೆ ಕಡಿಮೆಯಾಗುತ್ತಿದೆ.
ಕಳೆದ ವರ್ಷ 40 ಬಿಲಿಯನ್ ಡಾಲರ್ ಇದ್ದ ಭಾರತದ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹೋಲಿಸಿದರೆ ಈ ಬಾರಿ ಹೂಡಿಕೆಯ ಪ್ರಮಾಣ 42 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ಅಂದರೆ ಶೇಕಡಾ 6ರಷ್ಟು ಪ್ರಗತಿಯನ್ನು ಕಂಡಿದೆ ಎಂದು ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಅನ್ ಟ್ರೇಡ್ ಅಂಡ್ ಡೆವಲಪ್ಮೆಂಟ್ ವರ್ಲ್ಡ್ ಇನ್ವೆಸ್ಟ್ಮೆಂಟ್ ರಿಪೋರ್ಟ್ 2019 ಹೇಳಿದೆ. ಫ್ಲಿಫ್ಕಾರ್ಟ್, ವಾಲ್ ಮಾರ್ಟ್ನ 16 ಬಿಲಿಯನ್ ಡಾಲರ್ ಒಪ್ಪಂದವು ಹೂಡಿಕೆಯನ್ನು ಹೆಚ್ಚಿಸಿದೆ.
ಒಟ್ಟಾರೆಯಾಗಿ ದಕ್ಷಿಣ ಏಷ್ಯಾ ಪ್ರದೇಶವು 54 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆಯನ್ನು ಸ್ವೀಕರಿಸಿದ್ದು, ಶೇ.3.5ರಷ್ಟು ಪ್ರಗತಿಯನ್ನು ಕಂಡಿದೆ. ಬಾಂಗ್ಲಾದೇಶ 3.6 ಬಿಲಿಯನ್ ಡಾಲರ್ ಮತ್ತು ಶ್ರೀಲಂಕಾ 1.6 ಬಿಲಿಯನ್ ಡಾಲರ್ ಒಳ ಹರಿಯುವಿಕೆಯನ್ನು ಕಂಡಿದೆ. ಸಾಲ ಪೀಡಿತ ಪಾಕಿಸ್ಥಾನ 2.4 ಬಿಲಿಯನ್ ಡಾಲರ್ ಹೂಡಿಕೆಯನ್ನು ಕಂಡಿದೆ. ಪಾಕಿಸ್ಥಾನಕ್ಕಿಂತ ಭಾರತ 18 ಪಟ್ಟು ಹೆಚ್ಚು ಹೂಡಿಕೆಯನ್ನು ಕಂಡಿದೆ. ದೆಹಲಿ ಮತ್ತು ಮಹಾರಾಷ್ಟ್ರದಲ್ಲಿನ ಹೂಡಿಕೆಗಳು ಪಾಕಿಸ್ಥಾನದ ವಿದೇಶಿ ನೇರ ಬಂಡವಾಳ ಹೂಡಿಕೆಗಿಂತ ಹೆಚ್ಚಾಗಿದೆ.
ಉತ್ಪಾದನೆ ವಲಯವು ಹೆಚ್ಚಿನ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಕಂಡಿದ್ದು, ಬಳಿಕದ ಸ್ಥಾನ ಮಾಹಿತಿ ಮತ್ತು ಸಂಪರ್ಕ ಸೇವೆಗಳು ಕಂಡಿದೆ. ನಂತರ ಹಣಕಾಸು ಮತ್ತು ವಿಮಾ ಚಟುವಟಿಕೆಗಳು ಹೆಚ್ಚಿನ ಹೂಡಿಕೆಯನ್ನು ಕಂಡಿವೆ.
ಮೋದಿ ಸರ್ಕಾರವು ಉತ್ಪಾದನಾ ವಲಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದೆ. ಉತ್ಪಾದನಾ ವಲಯಕ್ಕೆ ಉತ್ತೇಜನವನ್ನು ನೀಡುವ ಸಲುವಾಗಿ 2014ರ ಸೆಪ್ಟೆಂಬರ್ 25ರಂದು ಅಧಿಕಾರಕ್ಕೆ ಬಂದ ಕೇವಲ 4 ತಿಂಗಳಲ್ಲಿ ಮೇಕ್ ಇನ್ ಇಂಡಿಯಾ ಎಂಬ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಶೇಕಡ 100 ರಷ್ಟು ಉದಾರೀಕರಣಗೊಳಿಸಲಾಗಿದೆ ಮತ್ತೆ 25 ವಲಯಗಳಿಗೆ ಇದನ್ನು ವಿಸ್ತರಿಸಲಾಗಿದೆ. ಬಾಹ್ಯಾಕಾಶದಲ್ಲಿ ಶೇಕಡ 74ರಷ್ಟು, ರಕ್ಷಣೆಯಲ್ಲಿ ಶೇಕಡ 49ರಷ್ಟು, ಸುದ್ದಿಮಾಧ್ಯಮಗಳಲ್ಲಿ ಶೇಕಡಾ 26ರಷ್ಟು ಹೂಡಿಕೆಗೆ ಅವಕಾಶ ನೀಡಲಾಗಿದೆ. ಇದರ ಫಲವಾಗಿ 2015ರಲ್ಲಿ ಭಾರತವು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಜಾಗತಿಕ ಮಟ್ಟದ ಅತ್ಯುತ್ತಮ ತಾಣವಾಗಿ ಹೊರಹೊಮ್ಮಿತ್ತು. ಈ ಮೂಲಕ ಚೀನಾ ಮತ್ತು ಅಮೆರಿಕವನ್ನು ಹಿಂದಿಕ್ಕಿತ್ತು. ನರೇಂದ್ರ ಮೋದಿ ಸರಕಾರದ ಹೆಜ್ಜೆಗಳು ಭಾರತದ ಪ್ರಗತಿಯಲ್ಲಿ ಯಾವ ರೀತಿ ಸಹಕಾರಿಯಾಗಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಇದುವೇ ಸಾಕ್ಷಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.