ಬೆಂಗಳೂರು : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 15 ಶಾಸಕರು ಹಾಗೂ ಸಚಿವರು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯ ಉಸ್ತುವಾರಿ ಪಿ. ಮುರಳೀಧರ್ ರಾವ್ ಹಾಗೂ ಪಕ್ಷದ ಹಿರಿಯರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ರಾಜೀನಾಮೆ ನೀಡಿದ್ದ ಶಾಸಕರಾದ ರಮೇಶ್ ಜಾರಕಿಹೊಳಿ (ಗೋಕಾಕ್), ಆನಂದ್ಸಿಂಗ್ (ವಿಜಯನಗರ), ನಾರಾಯಣಗೌಡ (ಕೆ.ಆರ್.ಪೇಟೆ). ಮಹೇಶ್ ಕುಮಟಳ್ಳಿ (ಅಥಣಿ), ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್), ಶಿವರಾಂ ಹೆಬ್ಬಾರ್ (ಯಲ್ಲಾಪುರ), ಬಿ.ಸಿ.ಪಾಟೀಲ್ (ಹಿರೇಕೆರೂರು), ಎಸ್.ಟಿ.ಸೋಮಶೇಖರ್
(ಯಶವಂತಪುರ), ಡಾ.ಸುಧಾಕರ್ (ಚಿಕ್ಕಬಳ್ಳಾಪುರ), ಬೈರತಿ ಬಸವರಾಜ್ (ಕೆ.ಆರ್.ಪುರ), ಎಚ್.ವಿಶ್ವನಾಥ್ (ಹುಣಸೂರು), ಶ್ರೀಮಂತ ಪಾಟೀಲ್ (ಕಾಗವಾಡ), ಮುನಿರತ್ನ ನಾಯ್ಡು (ರಾಜರಾಜೇಶ್ವರಿ ನಗರ), ಪ್ರತಾಪಗೌಡ ಪಾಟೀಲ್ (ಮಸ್ಕಿ), ಆರ್.ಶಂಕರ್ (ರಾಣೆಬೆನ್ನೂರು) ಅವರನ್ನು ಬಿ.ಎಸ್.ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್ ಅವರು ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಇದೇ ವೇಳೆ ಬಿಬಿಎಂಪಿ ಮಾಜಿ ಮೇಯರ್ ನಾರಾಯಣಸ್ವಾಮಿ, ಶಿವಾಜಿ ನಗರ ಕ್ಷೇತ್ರದ ಸರವಣ, ಮಹಾಲಕ್ಷ್ಮಿ ಲೇಔಟ್ನ ನಾಮನಿರ್ದೇಶಿತ ಸದಸ್ಯ ಜಯರಾಮ್, ಕೆ.ಆರ್.ಪುರ ಬಿಬಿಎಂಪಿ ಸದಸ್ಯ ಎಸ್.ಸಿ.ನಾಗರಾಜ್ ಮಾಜಿ ಬಿಬಿಎಂಪಿ ಸದಸ್ಯೆ ಪದ್ಮಾವತಿ ಶ್ರೀನಿವಾಸ್, ಕೆಪಿಜೆಪಿಯ ಮಂಜಯ್ಯ ಚಾವಡಿ ಸೇರಿದಂತೆ ವಿವಿಧ ಪಕ್ಷಗಳ ಅನೇಕ ಮುಖಂಡರು ಬಿಜೆಪಿ ಸೇರ್ಪಡೆಯಾದರು.
15 ಶಾಸಕರನ್ನೂ ಗೆಲ್ಲಿಸಲು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು: ಬಿ.ಎಸ್.ಯಡಿಯೂರಪ್ಪ
ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, ಹಿಂದಿನ ಸರ್ಕಾರ ಒಳ್ಳೆಯ ಆಡಳಿತ ನೀಡಲಿಲ್ಲ. ಕೇತ್ರಗಳ ಅಭಿವೃದ್ಧಿಯನ್ನು ಕಡೆಗಣಿಸಿತ್ತು ಎಂಬ ಕಾರಣದಿಂದ ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದಾರೆ. ಇದೀಗ ಇವರೆಲ್ಲ ಉಪ ಚುನಾವಣೆಗೆ ಸ್ಪರ್ಧಿಸಲು ಸುಪ್ರೀಂಕೋರ್ಟ್ ಅವಕಾಶ ಮಾಡಿಕೊಟ್ಟಿದೆ. 17 ಮಂದಿ ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಮೂಲಕ ನಮಗಾಗಿ ಎಲ್ಲ ರೀತಿಯ ತ್ಯಾಗ ಮಾಡಿದ್ದಾರೆ. ಇದೀಗ ಬಿಜೆಪಿ ಸದಸ್ಯತ್ವ ತೆಗೆದುಕೊಂಡು ಪಕ್ಷ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.
ರಾಜೀನಾಮೆ ನೀಡಿದ್ದ ಶಾಸಕರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಲಾಗುವುದು. ಯಾವುದೇ ಕಾರಣಕ್ಕೂ ವಿಶ್ವಾಸ ದ್ರೋಹ ಮಾಡುವುದಿಲ್ಲ. ಎಲ್ಲ ಸಂಸದರು, ಶಾಸಕರು, ಕಾರ್ಯಕರ್ತರು ಹಾಗೂ ಕೇಂದ್ರ ನಾಯಕತ್ವ ರಾಜೀನಾಮೆ ನೀಡಿದ ಶಾಸಕರ ಬೆಂಬಲಕ್ಕಿರುವುದರಿಂದ ಯಾರೂ ಆತಂಕ ಪಡಬೇಕಿಲ್ಲ. ಎಲ್ಲರನ್ನೂ ಗೆಲ್ಲಿಸಲು ಆತ್ಮಸಾಕ್ಷಿಯಾಗಿ ಶ್ರಮಿಸಲಾಗುವುದು. ಎಲ್ಲ ಶಾಸಕರನ್ನು ಗೆಲ್ಲಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ಯಾವುದೇ ಒಡಕಿಲ್ಲದೆ, ಹೊಂದಿಕೊಂಡು ಹೋಗುವುದರ ಮೂಲಕ ಕಾರ್ಯಕರ್ತರು ಒಗ್ಗಟ್ಟಿನಿಂದ ಎಲ್ಲ ರೀತಿಯಲ್ಲೂ ಅವರ ಗೆಲುವಿಗೆ ಕಾರಣರಾಗಬೇಕು. ಉಪಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು ಶತಃಸಿದ್ಧ. ಚುನಾವಣಾ ಫಲಿತಾಂಶ ನಂತರ ಬೆಂಗಳೂರಿನಲ್ಲಿ ಬೃಹತ್ ಸಮಾರಂಭ ಏರ್ಪಡಿಸಿ ಈ ಎಲ್ಲ ಶಾಸಕರನ್ನು ಸನ್ಮಾನಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
ಉಪ ಚುನಾವಣೆಗೆ ಕಾಗವಾಡ ಕ್ಷೇತ್ರದ ಪಕ್ಷದ ಉಸ್ತುವಾರಿಗಳಲ್ಲಿ ಒಬ್ಬರಾಗಿ ಉಮೇಶ್ ಕತ್ತಿ, ಶಿವಾಜಿನಗರ ಕ್ಷೇತ್ರದ ಉಸ್ತುವಾರಿಗಳಲ್ಲಿ ಒಬ್ಬರಾಗಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಹಿಂದಿನ ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತಕ್ಕೆ ಬೇಸತ್ತು ಶಾಸಕರು ರಾಜೀನಾಮೆ ನೀಡಿದ್ದು, ಇದೀಗ ಬಿಜೆಪಿ ಸೇರಿ ಉಪ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇವರೆಲ್ಲ ಒಳ್ಳೆಯ ಕಾಲಘಟ್ಟದಲ್ಲಿ ಬಿಜೆಪಿ ಸೇರುತ್ತಿದ್ದಾರೆ. ಎಲ್ಲ 15 ಕ್ಷೇತ್ರಗಳಲ್ಲೂ ಬಿಜೆಪಿ ಕಾರ್ಯಕರ್ತರು ಈ ಶಾಸಕರ ಗೆಲುವಿಗೆ ಶ್ರಮಿಸಲಿದ್ದಾರೆ. ಎಲ್ಲ 15 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಈಗಾಗಲೇ ಉಪಚುನಾವಣೆಯ ಸೋಲು ಒಪ್ಪಿಕೊಂಡಿದೆ. ಕಾಂಗ್ರೆಸ್ಗೆ ಕೈಕಾಲು ಹಿಡಿದು ಅಭ್ಯರ್ಥಿಗಳನ್ನು ನಿಲ್ಲಿಸಬೇಕಾದ ಪರಿಸ್ಥಿತಿ ಇದೆ. ಕಾಂಗ್ರೆಸ್ ಸಭೆಗಳಲ್ಲಿ ಸಿದ್ದರಾಮಯ್ಯ ಅವರನ್ನು ಬಹಿಷ್ಕರಿಸಲಾಗುತ್ತಿದೆ. ಸಭೆಗಳಲ್ಲಿ ಗಲಾಟೆಗಳು, ಹೊಡೆದಾಟಗಳು ನಡೆಯುತ್ತಿವೆ. ಇನ್ನು, ಜೆಡಿಎಸ್ ಅಸ್ತಿತ್ವದಲ್ಲೇ ಇಲ್ಲ. ಬಿಜೆಪಿ ಸೇರಿರುವ ಶಾಸಕರು ಉಪ ಚುನಾವಣೆಗೆ ನಾಮಪತ್ರರ ಸಲ್ಲಿಸುವ ವೇಳೆ ಇನ್ನೂ ನೂರಾರು ಕಾಂಗ್ರೆಸ್-ಜೆಡಿಎಸ್ ಮುಖಂಡರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದರು.
ಮುರಳೀಧರ ರಾವ್ ಮಾತನಾಡಿ, 2018 ನೇ ವಿಧಾನಸಭಾ ಚುನಾವಣೆಯಲ್ಲಿ ಜನಾದೇಶ, ಬಿಜೆಪಿ ಪರವಾಗಿದ್ದರೂ ಕಾಂಗ್ರೆಸ್-ಜೆಡಿಎಸ್ ಹಿಂಬಾಗಿನ ಮೂಲಕ ಸರ್ಕಾರ ರಚಿಸಿದವು. ಅಪವಿತ್ರ ಮೈತ್ರಿ ಸರ್ಕಾರದಿಂದ ಬೇಸತ್ತು 17 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದಾರೆ. ಚುನಾವಣೆ ಎದುರಿಸುತ್ತಿರುವ 15 ಅಭ್ಯರ್ಥಿಗಳ ಗೆಲುವಿನಿಂದ ಯಡಿಯೂರಪ್ಪ ಅವರ ಸರ್ಕಾರ ಬಲಗೊಳ್ಳುವುದರೊಂದಿಗೆ ಸ್ಥಿರ ಸರ್ಕಾರ ಸ್ಥಾಪನೆಯಾಗಲಿದೆ. ಪಕ್ಷದ ಕಾರ್ಯಕರ್ತರ ಈ ಎಲ್ಲರ ಗೆಲುವಿಗೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಲಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರ ಅಭಿವೃದ್ಧಿ ಪಕ್ಷದ ಮಂತ್ರವಾಗಿದೆ. ಈ ನಿಟ್ಟಿನಲ್ಲಿ ಪಕ್ಷಕ್ಕೆ ಸೇರ್ಪಡೆಯಾದವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ. ಇವರೆಲ್ಲರಿಗೂ ಪಕ್ಷದಲ್ಲಿ ಉತ್ತಮ ಭವಿಷ್ಯವಿದೆ ಎಂದು ಹೇಳಿದರು.
ಎಚ್. ವಿಶ್ವನಾಥ್ ಮಾತನಾಡಿ, ಹಿಂದಿನ ಮೈತ್ರಿ ಪಕ್ಷಗಳ ರಾಕ್ಷಸ ರಾಜಕಾರಣವನ್ನು ಕೊನೆಗಾಣಿಸುವ ಉದ್ದೇಶದಿಂದ 17 ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ನಮ್ಮದು ಪಕ್ಷಾಂತರವೂ ಅಲ್ಲ. ನಾವು ಅಧಿಕಾರಕ್ಕಾಗಿ ಅಧಿಕಾರ ತ್ಯಾಗ ಮಾಡಿದವರಲ್ಲ. ಪ್ರಧಾನಿ ನರೇಂದ್ರಮೋದಿ ಅವರೊಂದಿಗೆ ದೇಶದ ಅಭಿವೃದ್ಧಿಯಲ್ಲಿ ಕೈ ಜೋಡಿಸುವ ಸಲುವಾಗಿ ಬಿಜೆಪಿ ಸೇರುತ್ತಿದ್ದೇವೆ. ತಮ್ಮನ್ನು ಚುನಾವಣೆಗೆ ನಿಲ್ಲದಂತೆ ಮಾಡಿದ ಹುನ್ನಾರಕ್ಕೆ ಸುಪ್ರೀಂಕೋರ್ಟ್ ತಡೆ ಹಾಕಿ, ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ. ಇಡೀ ದೇಶದಲ್ಲಿ ಇಂದು ರಾಜಕೀಯ ಧ್ರುವೀಕರಣವಾಗುತ್ತಿದೆ ಎಂದು ಹೇಳಿದರು.
ಡಾ.ಸುಧಾಕರ್ ಮಾತನಾಡಿ, 14 ತಿಂಗಳು ಅಪವಿತ್ರ ಮೈತ್ರಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ನೊಂದಿದ್ದೇವೆ. ನಾವು ಯಾರ ಕೃಪಾಕಟಾಕ್ಷದಿಂದಲೂ ಗೆದ್ದು ಬಂದಿರಲಿಲ್ಲ. ಕಾರ್ಯಕರ್ತರ ಬೆಂಬಲದಿಂದ ಗೆದ್ದು ಬಂದಿದ್ದೆವು. ಶಿಸ್ತಿನ ಬಿಜೆಪಿ ಪಕ್ಷ ಸೇರುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್ ಅಶ್ವಥ್ ನಾರಾಯಣ್ ಪಕ್ಷದ ಮುಖಂಡರಾದ ಆರ್. ಅಶೋಕ್, ಅರವಿಂದ ಲಿಂಬಾವಳಿ, ಎನ್.ರವಿಕುಮಾರ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.