ರಾಜಮುಂಡ್ರಿ: ಗೋದಾವರಿ ತಟದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಆಚರಿಸಲಾಗುವ ಗೋದಾವರಿ ಪುಷ್ಕರಂ ಈ ವರ್ಷ ನಡೆಯಲಿದೆ. ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಜುಲೈ 14ರಿಂದ ಇದು ಆರಂಭಗೊಳ್ಳಲಿದೆ. ಕಳೆದ ಬಾರಿ 2003 ರಲ್ಲಿ ನಡೆದಿತ್ತು, ಈ ಬಾರಿಯ ಗೋದಾವರಿ ಪುಷ್ಕರಂ ಅನ್ನು ಮಹಾ ಕುಂಭಮೇಳ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತಿದ್ದು, ಇದು 144 ವರ್ಷಕ್ಕೊಮ್ಮೆ ನಡೆಯುತ್ತದೆ.
ಒಟ್ಟು 24 ದಿನಗಳ ಕಾಲ ನಡೆಯುವ ಗೋದಾವರಿ ಪುಷ್ಕರಮ್ನ ಮೊದಲ 12 ದಿನಗಳನ್ನು ಆದಿ ಪುಷ್ಕರಂ ಹಾಗೂ ಕೊನೆಯ 12 ದಿನಗಳನ್ನು ಅಂತ್ಯ ಪುಷ್ಕರಂ ಎಂದು ಕರೆಯಲಾಗುತ್ತದೆ. ಪುಷ್ಕರಂ ಸಂದರ್ಭದಲ್ಲಿ ಗೋದಾವರಿ ನದಿಯಲ್ಲಿ ಸ್ನಾನ ಮಾಡುವುದರಿಂದ ಭಕ್ತರು ತಮ್ಮ ಪಾಪಗಳಿಂದ ಬಿಡುಗಡೆ ಹೊಂದುತ್ತಾರೆ ಎಂಬ ನಂಬಿಕೆ ಇದೆ. ಪೂರ್ವಜರ ನೆನಪಿನಲ್ಲಿ ಹಲವು ಧರ್ಮಾಚರಣೆಗಳನ್ನೂ ಮಾಡಲಾಗುತ್ತದೆ.
ಭಾರತದ 12 ನದಿಗಳಿಗೆ ಪ್ರತಿ 12 ವರ್ಷಕ್ಕೊಮ್ಮೆ ಪುಷ್ಕರಂ ಹಬ್ಬ ಆಚರಿಸಲಾಗುತ್ತಿದೆ. ಸರ್ಕಾರ ಈ ಹಬ್ಬದ ಪ್ರಯುಕ್ತ ಭಕ್ತಾದಿಗಳಿಗೆ ಸಕಲ ಸೌಕರ್ಯಗಳನ್ನು ಮಾಡಿದೆ. ಕಳೆದ ಬಾರಿ 2003ರಲ್ಲಿ ನಡೆದ ಪುಷ್ಕರಂನಲ್ಲಿ 2 ಕೋಟಿಗೂ ಅಧಿಕ ಭಕ್ತರು ಪಾಲ್ಗೊಂಡಿದ್ದರು.
ಜುಲೈ 14 ರಂದು ಬೆಳಿಗ್ಗೆ 6.26 ಗಂಟೆಗೆ ಕಂಚಿ ಮತ್ತು ಶೃಂಗೇರಿಯ ತ್ರಿಕಾಲಜ್ಞರು ರಾಜಮುಂಡ್ರಿ ಮತ್ತು ಕೊವ್ವೂರಿನಲ್ಲಿ ಔಪಚಾರಿಕವಾಗಿ ಸ್ನಾನ ಮಾಡುವ ಮೂಲಕ ಪುಷ್ಕರಂ ಆರಂಭಿಸಲ್ಪಡುತ್ತದೆ.
ಈ ಬಾರಿ ಸುಮಾರು 7 ಕೋಟಿ ಜನರು ಭಾಗವಹಿಸುವ ಅಂದಾಜಿದ್ದು, ಆಂಧ್ರಪ್ರದೇಶ ಇದಕ್ಕಾಗಿ ಎಲ್ಲಾ ತಯಾರಿಯನ್ನೂ ನಡೆಸಿದೆ. ಸುಮಾರು 1500 ಕೋಟಿ ರೂ.ಗಳನ್ನು ವ್ಯಯಿಸಲಿದೆ. 10 ಕೇಂದ್ರ ಸಚಿವರು, ಇನ್ನಿತರ ಗಣ್ಯರು ಪುಷ್ಕರಂನಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ಜೀ ಭಾಗವತ್ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ ಎಂದು ಮೂಲಗಳಿಂದ ತಿಳಿದಿದೆ.
ರೈಲ್ವೆ ಇಲಾಖೆಯು ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಹೆಚ್ಚಿನ ರೈಲು ಸೇವೆ ಒದಗಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.