ನವದೆಹಲಿ: ಭಾರತದ ಅತಿದೊಡ್ಡ ಜಲವಿದ್ಯುತ್ ಯೋಜನೆಯಾಗಿರುವ 278 ಮೀಟರ್ ಉದ್ದದ ದಿಬಾಂಗ್ ಅಣೆಕಟ್ಟುಗೆ ಕೇಂದ್ರವು ಹಸಿರು ನಿಶಾನೆಯನ್ನು ನೀಡಿದೆ. ಪರಿಸರದ ಕಾರಣವನ್ನೊಡ್ಡಿ ಯುಪಿಎ ಸರ್ಕಾರದ ಅವಧಿಯಲ್ಲಿ ಈ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು.
ಅರುಣಾಚಲ ಪ್ರದೇಶದ ಈ ದಿಬಾಂಗ್ ವಿವಿಧೋದ್ದೇಶ ಯೋಜನೆಗೆ ಹೂಡಿಕೆ ಪೂರ್ವ ಕಾರ್ಯಗಳು ಮತ್ತು ಕ್ಲಿಯರೆನ್ಸ್ಗಳಿಗಾಗಿ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಬುಧವಾರ 1,600 ಕೋಟಿ ರೂ.ಗಳನ್ನು ಅನುಮೋದಿಸಿದೆ. ಈ ಅಣೆಕಟ್ಟನ್ನು ನಿರ್ಮಿಸಲು 28,080.35 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಮತ್ತು ಈ ಯೋಜನೆ ಪೂರ್ಣಗೊಂಡ ಬಳಿಕ 2880 ಮೆಗಾವ್ಯಾಟ್ ಶಕ್ತಿ ಉತ್ಪಾದನೆಯಾಗುವ ನಿರೀಕ್ಷೆ ಇದೆ.
ಈ ಜಲವಿದ್ಯುತ್ ವಿವಿಧೋದ್ದೇಶ ಯೋಜನೆಯು ಹವಾಮಾನ ಬದಲಾವಣೆಯೊಂದಿಗೆ ಹೋರಾಡುತ್ತಿರುವ ಜಗತ್ತಿಗೆ “ಭಾರತದ ಪ್ರಮುಖ ಕೊಡುಗೆ” ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಬಣ್ಣಿಸಿದ್ದಾರೆ. “ಈ ಯೋಜನೆಯು ಯಾವುದೇ ಕಲ್ಲಿದ್ದಲನ್ನು ಬಳಸದೆ 2880 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಿದೆ” ಎಂದಿದ್ದಾರೆ.
ದಿಬಾಂಗ್ ನದಿಯಲ್ಲಿ ನಿರ್ಮಾಣವಾಗುವ ಈ ಯೋಜನೆಗಾಗಿ ಸುಮಾರು 350,000 ಮರಗಳನ್ನು ಕಡಿಯಬೇಕಾಗಿದೆ ಎಂದು ತಿಳಿದುಕೊಂಡ ನಂತರ 2013 ರಲ್ಲಿ, ಪರಿಸರ ಮತ್ತು ಅರಣ್ಯ ಸಚಿವಾಲಯದ ಅರಣ್ಯ ಸಲಹಾ ಸಮಿತಿಯು ಯೋಜನೆಯನ್ನು ಸ್ಥಗಿತಗೊಳಿಸಿತ್ತು.
ಈ ಯೋಜನೆ ಪೂರ್ಣಗೊಂಡ ನಂತರ, ಅರುಣಾಚಲಪ್ರದೇಶ ಸರ್ಕಾರವು ಯೋಜನೆಯಿಂದ ಶೇ.12ರಷ್ಟು ಅಥವಾ 1346.76 MU ಉಚಿತ ವಿದ್ಯುತ್ ಪಡೆಯಲಿದೆ. ಅರುಣಾಚಲ ಪ್ರದೇಶಕ್ಕೆ ಆಗುವ ಲಾಭದ ಒಟ್ಟು ಮೌಲ್ಯವು 40 ವರ್ಷಗಳ ಅವಧಿಯಲ್ಲಿ 26,785 ಕೋಟಿ ರೂ.ಗಳಾಗಿರುತ್ತದೆ ”ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎನ್ವಿರಾನ್ಮೆಂಟ್ ಕ್ಲಿಯರೆನ್ಸ್, ಫಾರೆಸ್ಟ್ ಕ್ಲಿಯರೆನ್ಸ್ ಮತ್ತು ರಕ್ಷಣಾ ಅನುಮತಿ ಸೇರಿದಂತೆ ಯೋಜನೆಗೆ ಕಾನೂನುಬದ್ಧ ಅನುಮತಿ ದೊರೆತಿದೆ. ಕೇಂದ್ರದಿಂದ ಹೂಡಿಕೆಗೆ ಅನುಮತಿಯನ್ನು ಪಡೆಯಲು ಫಾರೆಸ್ಟ್ ಕ್ಲಿಯರೆನ್ಸ್ ಮಾತ್ರ ಬಾಕಿ ಉಳಿದಿದೆ.
ಈ ಯೋಜನೆಯ 241 ಕೋಟಿ ರೂ.ಗಳನ್ನು ಸಮುದಾಯ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.