News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲೊಬ್ಬರು  ’ಜನಮೆಚ್ಚುಗೆ’ಯ ವೈದ್ಯ ಡಾ. ಜಗದೀಶ್

ಪುತ್ತೂರು : ವೈದ್ಯರು ಜನರ ಮೆಚ್ಚುಗೆ ಗಳಿಸಬೇಕಾದರೆ ಹರಸಾಹಸ ಪಡಬೇಕು. ಅದರಲ್ಲೂ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಜನರ ಪ್ರೀತಿಯ ಮಟ್ಟಕ್ಕೆ ಬೆಳೆಯಬೇಕಾದರೆ ಅವರಿಗೆ ಅತ್ಯಂತ ಹೆಚ್ಚು ತಾಳ್ಮೆ ಬೇಕು. ಮಾನವೀಯ ಗುಣಗಳಿರಬೇಕು. ವೈದ್ಯಕೀಯ ಪ್ರವೀಣರಾಗಿರಬೇಕು. ಇಂತಹ ಗುಣಗಳನ್ನು ಪಡೆದ ವೈದ್ಯರೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಮಾಡುತ್ತಾ ಜನ ಮೆಚ್ಚುಗೆಯ ವೈದ್ಯರಾಗಿ ಮೂಡಿಬಂದಿದ್ದಾರೆ. ಅವರು ಪುತ್ತೂರು ತಾಲೂಕು ಸರ್ಕಾರಿ ಆಸ್ಪತ್ರೆಯ ಡಾ. ಜಗದೀಶ್.

ದಿನವೊಂದಕ್ಕೆ 150 ರಿಂದ 200 ಮಂದಿ ರೋಗಿಗಳನ್ನು ಚಿಕಿತ್ಸೆ ಮಾಡುವ ಡಾ. ಜಗದೀಶ್ ಎಷ್ಟೇ ಒತ್ತಡದ ಪರಿಸ್ಥಿತಿಯಲ್ಲೂ ತಮ್ಮ ತಾಳ್ಮೆ ಕಳೆದುಕೊಳ್ಳುವುದಿಲ್ಲ. ಬೆಳಿಗ್ಗೆ 9 ಗಂಟೆ ಬದಲಿಗೆ 8.15 ಕ್ಕೆ ಆಸ್ಪತ್ರೆಗೆ ಹಾಜರಾಗುವ ಇವರ ಕೊಠಡಿಯ ಮುಂದೆ ಸಾಲು ಸಾಲು ರೋಗಿಗಳ ಸರದಿ. ’ಡಾ. ಜಗದೀಶ್ ಉಲ್ಲೆರಾ..!’ ಎಂದು ಕೇಳಿಯೇ ಸರದಿ ಸಾಲಿನಲ್ಲಿ ನಿಲ್ಲುವ ರೋಗಿಗಳ ಸಂಖ್ಯೆ ಅಪಾರ.

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 3 ವರ್ಷಗಳಿಂದ ಸೀನಿಯರ್ ಮೆಡಿಕಲ್ ಆಫೀಸರ್ ಹುದ್ದೆಯಲ್ಲಿ ಹಿರಿಯ ವೈದ್ಯಾಧಿಕಾರಿಯಾಗಿ ಸೇವೆ ಮಾಡುತ್ತಿರುವ ಇವರು ಕೆಲವು ಸಮಯದಿಂದ ನಿಯೋಜನೆಯಡಿಯಲ್ಲಿ ಉಪ್ಪಿನಂಗಡಿ ಸರ್ಕಾರಿ ಆಸ್ಪತ್ರೆಯಲ್ಲೂ ವಾರದಲ್ಲಿ 2 ದಿನ ರೋಗಿಗಳ ಆರೋಗ್ಯ ತಪಾಸಣೆಗೆ ಲಭ್ಯವಾಗುತ್ತಿದ್ದಾರೆ.

ಮೂಡುಶೆಡ್ಡೆಯ ಟಿ.ಬಿ ಆಸ್ಪತ್ರೆಯಲ್ಲಿ ಮೊದಲು ವೃತ್ತಿ ಆರಂಭಿಸಿದ ಡಾ.ಜಗದೀಶ್ ಅವರು ಸರಳ ಸಜ್ಜನಿಕೆ ವ್ಯಕ್ತಿ. ರೋಗಿಗಳ ಜತೆ ಆತ್ಮೀಯತೆಯಿಂದ ಬೆರೆಯುವ ಇವರ ಗುಣ ರೋಗಿಗಳ ಪ್ರೀತಿ ಗಳಿಸಲು ಅತೀ ಮುಖ್ಯ ಕಾರಣ. ಎಲ್ಲಾ ಜನರಲ್ ಕಾಯಿಲೆಗಳಿಗೆ ಔಷಧಿ ನೀಡುವ ಅವರು ರೋಗಿಗಳ ಒತ್ತಡದ ಹಿನ್ನಲೆಯಲ್ಲಿ ಎಷ್ಟೋ ದಿನಗಳು ಮಧ್ಯಾಹ್ನ ಊಟವೇ ಮಾಡುವುದಿಲ್ಲ. ಕೇವಲ 2 ಬಿಸ್ಕತ್ತು ತಿಂದು ನೀರು ಕುಡಿದು ರೋಗಿಗಳ ಆರೋಗ್ಯ ತಪಾಸಣೆ ಮಾಡುವ ಈ ವೈದ್ಯರು ಸೇವೆಗೆ ಮತ್ತೊಂದು ಪರ್ಯಾಯ ಹೆಸರು.

ದಿನದ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ತಮ್ಮಲ್ಲಿ ಬರುವ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡುವ ಡಾ.ಜಗದೀಶ್ ಕರ್ತವ್ಯಕ್ಕಿಂತಲೂ ಸೇವೆ ದೊಡ್ಡದೆಂದು ನಂಬಿದವರು. ದಿನವೊಂದರಲ್ಲಿ 270 ಮಂದಿ ರೋಗಿಗಳ ತಪಾಸಣೆ ಮಾಡಿದ ದಾಖಲೆಯೂ ಇವರದ್ದಾಗಿದೆ. ಮಮತೆ ಪ್ರೀತಿ ವಾತ್ಸಲ್ಯ ರೋಗಿಗಳ ಸಮಸ್ಯೆಯನ್ನು ಅರ್ಧದಷ್ಟು ಪರಿಹಾರ ಮಾಡುತ್ತದೆ ಎಂಬ ಮಾತಿನಂತೆ ನಡೆದುಕೊಳ್ಳುತ್ತಿರುವ ಡಾ. ಜಗದೀಶ್ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿಯೇ ಪೂರ್ಣಕಾಲಿಕ ವೈದ್ಯರಾಗಿರಬೇಕು ಎಂಬುವುದು ಇವರ ಬಳಿ ಚಿಕಿತ್ಸೆ ಪಡೆದ, ಪಡೆಯುತ್ತಿರುವ ಜನತೆಯ ಮಹದಾಸೆಯಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top