ಬೆಳ್ತಂಗಡಿ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಂಘದ ಉದ್ಘಾಟನೆ ಹಾಗೂ ಕನ್ನಡ ಭಿತ್ತಿ ಪತ್ರಿಕೆ ‘ಸಿರಿಗನ್ನಡ’ ಅನಾವರಣ ಕಾರ್ಯಕ್ರಮವನ್ನು ಹಿರಿಯ ಕವಿ ಹಾಗೂ ರಾಷ್ಟ್ರ ಶಿಕ್ಷಕ ಪ್ರಶಸ್ತಿ ವಿಜೇತ ಶ್ರೀ ಶಿವರಾಮ ಶಿಶಿಲ ಈಚೆಗೆ ನೆರವೇರಿಸಿದರು.
‘ಪ್ರತಿ ವಿದ್ಯಾರ್ಥಿಯಲ್ಲೂ ಒಂದು ವಿಶಿಷ್ಟ ಪ್ರತಿಭೆ ಇದ್ದೇ ಇರುತ್ತದೆ. ಇವುಗಳನ್ನು ವಿದ್ಯಾರ್ಥಿಗಳು ತಮ್ಮೊಳಗೆ ಇಟ್ಟು ಕೊರಗುವುದಕ್ಕಿಂತ ಸಾಹಿತ್ಯ ರಚನೆಗಳ ಮೂಲಕ ವ್ಯಕ್ತಪಡಿಸಲು ಪ್ರಯತ್ನಿಸಬೇಕು. ವಿದ್ಯಾರ್ಥಿಗಳು ಅನುಕರಣೆ , ಹಿರಿಯರ ಮಾರ್ಗದರ್ಶನ ಹಾಗೂ ಇತರರ ವಿಮರ್ಶೆಗಳ ಸಹಾಯದಿಂದ ಸಾಹಿತ್ಯ ರಚನೆಗಳನ್ನು ಮಾಡುತ್ತಾ ಅವಕಾಶವಿರುವ ಕಡೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿದಲ್ಲಿ ತಮ್ಮ ಸಾಹಿತ್ಯ ಪ್ರತಿಭೆಯನ್ನು ಉತ್ತಮಗೊಳಿಸಲು ಸಾಧ್ಯ. ಸಾಹಿತ್ಯ ಎಂಬುದು ‘ಕಲಿಕೆ’ಗೆ ಪೂರಕ. ಇಂದಿನ ಆಂಗ್ಲ ಭಾಷಾ ವ್ಯಾಮೋಹದ ಸಂದರ್ಭದಲ್ಲಿ ನಮ್ಮ ಕನ್ನಡ ಭಾಷೆಯನ್ನು ಸಾಧ್ಯವಾಗುವ ಕಡೆಗಳಲ್ಲಿ ಬಳಸುತ್ತಾ ಉಳಿಸಿ ಬೆಳಸಬೇಕು’ ಎಂದು ಶಿಶಿಲ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪ್ರೊ. ಎನ್.ದಿನೇಶ್ ಚೌಟರವರು ವಹಿಸಿದ್ದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ರಾಧಾಕೃಷ್ಣ ಕೆದಿಲ್ಲಾಯರವರು ಸ್ವಾಗತಿಸಿದರು. ಕನ್ನಡ ಸಂಘದ ವಿದ್ಯಾರ್ಥಿ ಕಾರ್ಯದರ್ಶಿಯಾಗಿ ದ್ವಿತೀಯ ಪಿ.ಯು.ಸಿ. ಕಲಾ ವಿಭಾಗದ ವಿದ್ಯಾರ್ಥಿ ರಾಹುಲ್ ಅವರನ್ನು ನೇಮಿಸಲಾಯಿತು. ಕನ್ನಡ ಪ್ರಾಧ್ಯಾಪಕರಾದ ಸುಭಾಷ್ ರಾವ್ ಬೋಳೂರವರು ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.