ಅಯೋಧ್ಯಾ: ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಅಯೋಧ್ಯಾದಲ್ಲಿ ಚುನಾವಣಾ ಪ್ರಚಾರ ಸಮಾವೇಶವನ್ನು ನಡೆಸಿದ್ದು, ಕಾಂಗ್ರೆಸ್, ಬಹುಜನ ಸಮಾಜವಾದಿ ಮತ್ತು ಸಮಾಜವಾದಿ ಪಕ್ಷಗಳ ತೋರಿಕೆಯ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದಾರೆ.
‘ಕಾಂಗ್ರೆಸ್, ಬಿಎಸ್ಪಿ, ಎಸ್ಪಿ ಪಕ್ಷಗಳ ನಿಜ ಮುಖವನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಮಾಯಾವತಿಯವರು ಸದಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಪ್ರಸ್ತಾಪಿಸುತ್ತಾರೆ ಆದರೆ ಇನ್ನೊಂದೆಡೆ, ಅವರ ತತ್ವವನ್ನು ವಿರೋಧಿಸುವ ಎಲ್ಲಾ ಕಾರ್ಯವನ್ನೂ ಮಾಡುತ್ತಾರೆ. ಸಮಾಜವಾದಿ ಪಕ್ಷ, ಲೋಹಿಯಾ ಅವರ ಹೆಸರನ್ನು ಹೇಳುತ್ತದೆ ಆದರೆ ಉತ್ತರಪ್ರದೇಶದ ಕಾನೂನು ಸುವ್ಯವಸ್ಥೆಯನ್ನು ಅವರು ಹಾಳು ಗೆಡವುತ್ತಾರೆ’ ಎಂದಿದ್ದಾರೆ.
‘ಕಾಂಗ್ರೆಸ್ ಪಕ್ಷಕ್ಕೆ ದೇಶದ ಬಡವರ ಬಗ್ಗೆ ಕಾಳಜಿ ಇಲ್ಲ. ಅವರಿಗೆ ಕೇವಲ ಅವರ ಹಿತಾಸಕ್ತಿಯಷ್ಟೇ ಮುಖ್ಯ, ಒಂದು ಕುಟುಂಬದ ಹಿತಾಸಕ್ತಿಯಷ್ಟೇ ಮುಖ್ಯ. ನಮ್ಮ ಸರ್ಕಾರ ಕಾರ್ಮಿಕರ ಬದುಕನ್ನು ಸುಲಭವಾಗಿಸಿದೆ” ಎಂದಿದ್ದಾರೆ.
ಬಲಿಷ್ಠ ಸರ್ಕಾರದ ಅಗತ್ಯತೆಯನ್ನು ಪ್ರತಿಪಾದಿಸಿದ ಅವರು, ಭಯೋತ್ಪಾದನೆಯ ಬೆದರಿಕೆಯ ಬಗ್ಗೆ ಎಚ್ಚರಿಕೆಯಿಂದಿರುವುದು ಕೂಡ ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ. ”ಕಾಂಗ್ರೆಸ್, ಸಮಾಜವಾದಿ ಮತ್ತು ಬಿಎಸ್ಪಿಯಂತಹ ಪಕ್ಷಗಳು ಭಯೋತ್ಪಾದನೆಯ ಬಗ್ಗೆ ಮೃದುವಾಗಿವೆ, ಅದುವೇ ನಮ್ಮ ನೆರೆಯ ರಾಷ್ಟ್ರಕ್ಕೂ ಬೇಕಾಗಿರುವುದು, ಭಯೋತ್ಪಾದನೆ ನಮ್ಮ ಪದ್ಧತಿ, ನಂಬಿಕೆಗಳಿಗೆ ದೊಡ್ಡ ಹೊಡೆತ. ಶಾಂತಿ ಮತ್ತು ಭದ್ರತೆಯನ್ನು ನೀಡುವ ಬಲಿಷ್ಠ ಸರ್ಕಾರದ ಅಗತ್ಯ ಭಾರತಕ್ಕಿದೆ” ಎಂದರು.
ಸಮಾವೇಶದಲ್ಲಿ ಅಪಾರ ಪ್ರಮಾಣದ ಸಾಧುಗಳು ಭಾಗಿಯಾಗಿದ್ದರು, ಅಯೋಧ್ಯಾ ರಾಮಮಂದಿರದ ವಿಷಯದ ಬಗ್ಗೆ ಅಲ್ಲಿ ಮೋದಿ ಪ್ರಸ್ತಾಪ ಮಾಡಬಹುದು ಎಂಬ ನಿರೀಕ್ಷೆಗಳೂ ಇದ್ದವು. ಆದರೆ ಐದು ವರ್ಷಗಳ ಸರ್ಕಾರದ ಸಾಧನೆಯ ಮೇಲೆಯೇ ಮೋದಿ ಹೆಚ್ಚು ಗಮನವನ್ನು ಕೇಂದ್ರೀಕರಿಸಿದರು. ರಾಮಮಂದಿರ ವಿಷಯ ನ್ಯಾಯಾಲಯದಲ್ಲಿರುವ ಕಾರಣ ಸಮಾವೇಶದಲ್ಲಿ ಆ ಬಗ್ಗೆ ಪ್ರಸ್ತಾಪಿಸದಿರುವ ನಿರ್ಧಾರ ತೆಗೆದುಕೊಂಡಿರಬಹುದು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.