ನವದೆಹಲಿ : ರಾಷ್ಟ್ರೀಯ ತನಿಖಾ ಸಂಸ್ಥೆಯು ಸೋಮವಾರ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಬೆಂಬಲಿಗ ಮತ್ತು ಶ್ರೀಲಂಕಾ ಬಾಂಬ್ ದಾಳಿಯ ಮಾಸ್ಟರ್ ಮೈಂಡ್ ಝಹ್ರನ್ ಹಸಿಂ ಅನುಯಾಯಿ ಒಬ್ಬನನ್ನು ಬಂಧನಕ್ಕೊಳಪಡಿಸಿದೆ.
ಎನ್ಐಎ ಪ್ರಕಟಣೆಯ ಪ್ರಕಾರ, ಶ್ರೀಲಂಕಾ ಬಾಂಬ್ ಸ್ಫೋಟದ ಹಿಂದಿನ ಮಾಸ್ಟರ್ ಮೈಂಡ್, ಮೂಲಭೂತವಾದಿ ತಮಿಳು ಭಾಷಿಕ ಇಸ್ಲಾಂ ಬೋಧಕ ಹಸಿಂ ಭಾಷಣಗಳನ್ನು ಮತ್ತು ವಿಡಿಯೋಗಳನ್ನು ನಿರಂತರವಾಗಿ ಅನುಸರಿಸುತ್ತಿದ್ದ ಕೇರಳದ ರಿಯಾಜ್ ಅಬೂಬಕ್ಕರ್ ಎಂಬಾತನನ್ನು ಬಂಧಿಸಲಾಗಿದೆ. ಈತ ಕಳೆದ ಒಂದು ವರ್ಷಗಳಿಂದ ಮತ್ತೋರ್ವ ಇಸ್ಲಾಮಿಕ್ ಬೋಧಕ ಜಾಕಿರ್ ನಾಯ್ಕ್ ಭಾಷಣಗಳನ್ನು ಕೇಳಿ ಅದರಿಂದ ಪ್ರಭಾವಿತಗೊಂಡಿರುವುದಾಗಿಯೂ ತಿಳಿದು ಬಂದಿದೆ. ಜಾಕಿರ್ ನಾಯ್ಕ್, ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಸಂಸ್ಥಾಪಕನಾಗಿದ್ದು, ಪ್ರಸ್ತುತ ಆತ ಭಾರತದಿಂದ ತಲೆ ಮರೆಸಿಕೊಂಡಿದ್ದಾನೆ.
ಬಂಧಿತ ಅಬೂಬಕ್ಕರ್ ತಾನು ಕೇರಳದಲ್ಲಿ ಆತ್ಮಾಹುತಿ ಬಾಂಬ್ ದಾಳಿಗಳನ್ನು ನಡೆಸಲು ಯೋಜಿಸುತ್ತಿದ್ದಾಗಿ ಹೇಳಿಕೊಂಡಿದ್ದಾನೆ.
ಎಎನ್ಐ ಭಾನುವಾರದಿಂದ ಈತನನ್ನು ವಿಚಾರಣೆಗೊಳಪಡಿಸುತ್ತಿದೆ. ಕೇರಳದ ಒಟ್ಟು ಮೂರು ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿದ್ದು, ಈ ವೇಳೆ ಕಾಸರಗೋಡಿನಲ್ಲಿ ಭಯೋತ್ಪಾದನಾ ಸಂಘಟನೆಯೊಂದು ಕಾರ್ಯಾಚರಿಸುತ್ತಿರುವ ಬಗ್ಗೆ ಪತ್ತೆಯಾಗಿದೆ. ಅಬೂಬಕ್ಕರ್ ಅಲಿಯಾಸ್ ಅಬು ದುಜಾನ ಕೇರಳದ ಪಲಕ್ಕಾಡ್ ನಿವಾಸಿಯಾಗಿದ್ದು, ಈತನನ್ನು ಸದ್ಯ ಭಯೋತ್ಪಾದನಾ ಕೃತ್ಯ ಎಸಗಲು ಪ್ರಯತ್ನ ಆರೋಪದಡಿ ಬಂಧಿಸಲಾಗಿದೆ.
ಈತ ತಲೆಮರೆಸಿಕೊಂಡಿರುವ ಉಗ್ರ ಅಬ್ದುಲ್ ರಶೀದ್ ಅಬ್ದುಲ್ಲಾನೊಂದಿಗೆ ದೀರ್ಘಕಾಲದಿಂದ ಆನ್ಲೈನ್ ಮೂಲಕ ಸಂಪರ್ಕದಲ್ಲಿದ್ದ ಮತ್ತು ಆತನ ವಿಡಿಯೋಗಳನ್ನು ಚಾಚೂ ತಪ್ಪದೆ ವೀಕ್ಷಿಸುತ್ತಿದ್ದ ಎಂದು ತಿಳಿದು ಬಂದಿದೆ. ಭಯೋತ್ಪಾದನಾ ದಾಳಿಗಳನ್ನು ನಡೆಸುವಂತೆ ಈ ವಿಡಿಯೋಗಳಲ್ಲಿ ಪ್ರೇರಣೆ ನೀಡಲಾಗುತ್ತಿತ್ತು ಎನ್ನಲಾಗಿದೆ.
ಭಾನುವಾರ ರಾಷ್ಟ್ರೀಯ ತನಿಖಾ ತಂಡ ಕಾಸರಗೋಡಿನ ಮೂರು ಕಡೆಗಳಲ್ಲಿ ಮತ್ತು ಪಲಕ್ಕಾಡ್ನಲ್ಲಿ ದಾಳಿ ನಡೆಸಿ ಶ್ರೀಲಂಕಾ ಬಾಂಬ್ ದಾಳಿಗೆ ಸಂಬಂಧಿಸಿದ ತನಿಖೆಯನ್ನು ಚುರುಕುಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.