ನವದೆಹಲಿ : ಭಾರತೀಯ ನಗರಗಳನ್ನು ಮಹಿಳೆಯರಿಗೆ ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ನಿರ್ಭಯಾ ಫಂಡ್ ಅಡಿಯಲ್ಲಿ ಮಹಿಳಾ ಸುರಕ್ಷತಾ ಯೋಜನೆಗಳಿಗಾಗಿ 4000 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸಿದೆ. ಅತ್ಯಾಚಾರ ಸಂತ್ರಸ್ತರಿಗೆ, ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಹಣಕಾಸು ನೆರವನ್ನು ನೀಡಲು, ಮಹಿಳಾ ಮತ್ತು ಮಕ್ಕಳ ಸುರಕ್ಷತೆಗಾಗಿ ವಿಶೇಷ ಪೊಲೀಸ್ ಪಡೆಗಳನ್ನು ಸ್ಥಾಪಿಸಲು ಈ ಹಣವನ್ನು ವಿನಿಯೋಗ ಮಾಡಲಾಗುತ್ತಿದೆ.
ಸುರಕ್ಷಿತ ನಗರ ಯೋಜನೆಯಡಿ 2,919.55 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದ್ದು, ದೆಹಲಿ, ಕೋಲ್ಕತ್ತಾ, ಮುಂಬೈ ಚೆನ್ನೈ, ಹೈದರಾಬಾದ್, ಬೆಂಗಳೂರು, ಅಹಮದಾಬಾದ್ ಮತ್ತು ಲಕ್ನೋಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆಯನ್ನು ಬಲಿಷ್ಠಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ರುಪಾಯಿ 321.69 ಕೋಟಿಗಳನ್ನು ತುರ್ತು ಸ್ಪಂದನಾ ಸಹಾಯ ವ್ಯವಸ್ಥೆಗೆ ಬಿಡುಗಡೆಗೊಳಿಸಲಾಗಿದೆ. ದೇಶಾದ್ಯಂತ ತುರ್ತು ಸ್ಪಂದನಾ ಸಂಖ್ಯೆ 112 ಅನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿದೆ. ಈ ಯೋಜನೆ ಈಗಾಗಲೇ 20 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿದೆ.
ರೂ. 200 ಕೋಟಿ ರೂಪಾಯಿಗಳನ್ನು ಕೇಂದ್ರ ಸಂತ್ರಸ್ತ ಪರಿಹಾರ ನಿಧಿಗೆ ಬಿಡುಗಡೆಗೊಳಿಸಲಾಗಿದೆ. ಅತ್ಯಾಚಾರ ಸಂತ್ರಸ್ತರು, ಆ್ಯಸಿಡ್ ದಾಳಿ ಸಂತ್ರಸ್ಥರು, ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ಮಾನವ ಕಳ್ಳಸಾಗಣೆಯ ಸಂತ್ರಸ್ತರು ಮುಂತಾದವರಿಗೆ ನೆರವು ನೀಡುವುದು ಇದರ ಉದ್ದೇಶವಾಗಿದೆ.
ರೂ 23.53 ಕೋಟಿ ರೂಪಾಯಿಗಳನ್ನು ಮಹಿಳಾ ಮತ್ತು ಮಕ್ಕಳಿಗಾಗಿ ವಿಶೇಷ ಪಡೆ ಮತ್ತು ದೆಹಲಿಯ ನಾನಕ್ಪುರದಲ್ಲಿ ಈಶಾನ್ಯ ಭಾಗಕ್ಕಾಗಿ ವಿಶೇಷ ಪಡೆ ರಚನೆಗೆ ಬಳಕೆ ಮಾಡಲಾಗಿದೆ. ಈಗಾಗಲೇ ಉಭಯ ಪಡೆಗಳು ಕಾರ್ಯಾಚರಣೆಯಲ್ಲಿವೆ.
99.76 ಕೋಟಿ ರೂ ಮೊತ್ತದಲ್ಲಿ ಛಂಡೀಗಢದ ಸೆಂಟ್ರಲ್ ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿಯಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಡಿಎನ್ಎ ಲ್ಯಾಬೋರೇಟರಿ ಸ್ಥಾಪನೆ ಮಾಡಲಾಗಿದೆ. ದೇಶದ ಇತರ 12 ರಾಜ್ಯಗಳಲ್ಲಿ ಡಿಎನ್ಎ ಸೌಲಭ್ಯಗಳು ಇರುವ ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ ಅನ್ನು ಬಲಗೊಳಿಸಲು 131.09 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.
ರೂ. 7.09 ಕೋಟಿ ರೂಪಾಯಿಗಳನ್ನು ತನಿಖೆ, ವಿಚಾರಣೆ ಮತ್ತು ವೈದ್ಯಕೀಯ ಅಧಿಕಾರಿಗಳ ತರಬೇತಿಗಾಗಿ ವಿನಿಯೋಗಿಸಲಾಗುತ್ತಿದೆ ಮತ್ತು ರೂಪಾಯಿ 5.07 ಕೋಟಿಗಳನ್ನು ದೆಹಲಿಯ ಜಿಲ್ಲಾ ಮತ್ತು ಸಬ್ ಡಿವಿಷನಲ್ ಪೊಲೀಸ್ ಸ್ಟೇಷನ್ಗಳಲ್ಲಿ ಸಾಮಾಜಿಕ ಕಾರ್ಯಕರ್ತರಿಗೆ, ಕೌನ್ಸಿಲರ್ಗಳಿಗೆ ಸೌಲಭ್ಯಗಳನ್ನು ಒದಗಿಸಲು ವಿನಿಯೋಗಿಸಲಾಗುತ್ತಿದೆ.
2012ರಲ್ಲಿ ದೆಹಲಿಯಲ್ಲಿ ಚಲಿಸುವ ಬಸ್ನಲ್ಲಿ ನಡೆದ ಭೀಕರ ಗ್ಯಾಂಗ್ ರೇಪ್ನ ತರುವಾಯ ಕೇಂದ್ರ ಸರಕಾರ ನಿರ್ಭಯಾ ಫಂಡ್ ಅನ್ನು ರಚನೆ ಮಾಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.