ನವದೆಹಲಿ: ಬಾಲಿವುಡ್ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಸಂದರ್ಶನ ನಡೆಸಿದ್ದು, ಈ ವೇಳೆ ಮೋದಿಯವರು ತಮ್ಮ ಜೀವನ ಹಲವಾರು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಸಂಪೂರ್ಣ ರಾಜಕಿಯೇತರ ಸಂದರ್ಶನ ಇದಾಗಿತ್ತು.
ನೀವು ನೋಡಿದ ಕೊನೆಯ ಸಿನಿಮಾ ಯಾವುದು ಎಂದು ಮೋದಿಯವರನ್ನು ಅಕ್ಷಯ್ ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿದ ಮೋದಿಯವರು, ಗುಜರಾತಿನ ಸಿಎಂ ಆಗಿದ್ದ ವೇಳೆ ಅಮಿತಾಭ್ ಬಚ್ಚನ್ ಅವರ ಕೋರಿಕೆಯ ಮೇಲೆ ‘ಪಾ’ ಸಿನಿಮಾವನ್ನು ವೀಕ್ಷಿಸಿದ್ದೆ. ಅದೇ ರೀತಿ ಅನುಪಮ್ ಖೇರ್ ಅವರ ಮನವಿಯ ಮೇರೆಗೆ ‘ವೆಡ್ನಸ್ಡೇ; ಮೂವಿ ಅನ್ನು ವೀಕ್ಷಣೆ ಮಾಡಿದ್ದೆ. ಪಿಎಂ ಆದ ಮೇಲೆ ಯಾವ ಸಿನಿಮಾವನ್ನೂ ನೋಡಿಲ್ಲ ಎಂದಿದ್ದಾರೆ.
ನಾನು ಪ್ರಧಾನಿಯಾಗಿದ್ದರೂ ನನ್ನ ಕುಟುಂಬದ ಸದಸ್ಯರು ವೈದ್ಯಕೀಯ ಸೇರಿದಂತೆ ಇನ್ನಿತರ ಯಾವುದೇ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಅಕ್ಷಯ್ ಅವರು ಮೀಮ್ಸ್ಗಳ ಬಗ್ಗೆ ಪ್ರಶ್ನಿಸಿದಾಗ, ”ಮೀಮ್ಸ್ಗಳನ್ನು ನೋಡಿ ನಾನು ಆನಂದಿಸುತ್ತೇನೆ. ಅಲ್ಲಿ ಅವರ ಸೃಜನಶೀಲತೆ, ಪ್ರತಿಭೆ ಕಾಣುತ್ತದೆ. ಸಾಮಾನ್ಯ ಜನರಿಗೆ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಸಾಮಾಜಿಕ ಜಾಲತಾಣಗಳು ಹೆಚ್ಚು ಸಹಕಾರಿಯಾಗಿದೆ” ಎಂದಿದ್ದಾರೆ.
‘ನಾನು ಸಾಮಾಜಿಕ ಜಾಲತಾಣಗಳನ್ನು ನೋಡುತ್ತೇನೆ, ಹೀಗಾಗಿ ಹೊರಗಡೆ ಏನಾಗುತ್ತದೆ ಎಂದು ನನಗೆ ಗೊತ್ತಾಗುತ್ತದೆ. ನಿಮ್ಮ ಮತ್ತು ನಿಮ್ಮ ಪತ್ನಿ (ಟ್ವಿಂಕಲ್ ಖನ್ನಾ) ಅವರ ಟ್ವಿಟರ್ಗಳನ್ನೂ ನೋಡುತ್ತೇನೆ. ನನ್ನ ಬಗ್ಗೆ ಅವರು ಕೋಪಗೊಳ್ಳುವುದನ್ನೂ ನೋಡುತ್ತೇನೆ’ ಎಂದಿದ್ದಾರೆ.
ತನ್ನ ವಿಭಿನ್ನ ಸ್ಟೈಲ್ ಬಗ್ಗೆ ಹೇಳಿದ ಮೋದಿ, ”ಪ್ರತಿ ಪ್ರಯಾಣದಲ್ಲೂ ಸಣ್ಣ ಬ್ಯಾಗ್ ಅನ್ನು ಇಟ್ಟುಕೊಂಡಿರುತ್ತೇನೆ. ಸಿಎಂ ಆಗುವವರೆಗೂ ನನ್ನ ಬಟ್ಟೆ ನಾನೇ ಒಗೆಯುತ್ತಿದ್ದೆ. ಹೀಗಾಗಿ ಸಣ್ಣ ತೋಳಿನ ಬಟ್ಟೆ ಸಮಯವನ್ನು ಉಳಿಸುತ್ತದೆ ಎಂದು ನನಗನಿಸುತ್ತಿತ್ತು. ನಾನು ನನ್ನ ಅಪಿಯರೆನ್ಸ್ ಬಗ್ಗೆ ತುಂಬಾ ಕಾಳಜಿವಹಿಸುತ್ತೇನೆ. ಬಡತನದಲ್ಲಿ ಬೆಳೆದುದ್ದರಿಂದ ಬಂದ ಮಾನಸಿಕತೆ ಅಥವಾ ಕೀಳರಿಮೆಯ ಕಾರಣ ಇದಕ್ಕಿರಬಹುದು” ಎಂದಿದ್ದಾರೆ.
ಶೀತವಾದಾಗ ಬಿಸಿ ನೀರು ಕುಡಿಯುತ್ತೇನೆ, ಎರಡು ದಿನ ಉಪವಾಸ ಕೂರುತ್ತೇನೆ. ಮೂಗಿಗೆ ಸಾಸಿವೆ ಎಣ್ಣೆ ಬಿಡುತ್ತೇನೆ. ಇದರಿಂದ ರಿಲಾಕ್ಸ್ ಆಗುತ್ತದೆ ಎಂದಿದ್ದಾರೆ.
ನನ್ನ ನಿದ್ರೆಯ ಅವಧಿ 3-4 ಗಂಟೆಯೊಳಗೆ ಮುಗಿದು ಹೋಗುತ್ತದೆ. ಅಮೇಲೆ ಎದ್ದು ನಾನು ರೆಡಿಯಾಗುತ್ತೇನೆ ಎಂದಿದ್ದಾರೆ. ಸಿಎಂ ಆಗಿದ್ದಾಗಿನ ಅನುಭವ ನನಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ ಎಂದಿದ್ದಾರೆ.
ನನ್ನ ಮಾತುಗಳನ್ನು ಟಿಆರ್ಪಿಗಾಗಿ ತಿರುಚುವ ಭಯ ಇರುವ ಕಾರಣ ಇತ್ತೀಚಿನ ದಿನಗಳಲ್ಲಿ ನಾನು ಹಾಸ್ಯ ಮಾಡುವುದನ್ನು ಬಿಟ್ಟು ಬಿಟ್ಟಿದ್ದೇನೆ ಎಂದಿದ್ದಾರೆ.
ನಿವೃತ್ತಿ ಜೀವನದ ಬಗ್ಗೆ ಮಾತನಾಡಿದಾಗ, ನನ್ನ ಜವಾಬ್ದಾರಿಗಳೇ ನನಗೆ ಬದುಕು ಎಂದಿದ್ದಾರೆ.
ಸಿಎಂ ಆಗುವವರೆಗೆ ನನ್ನ ಬಳಿ ಬ್ಯಾಂಕ್ ಖಾತೆ ಇರಲಿಲ್ಲ, ಆಮೇಲೆ ಮಾಡಿಸಿದೆ, ಪ್ರಧಾನಿಯಾದ ಬಳಿಕ ನನ್ನ ಅಧಿಕಾರಿಗಳು ಹಣವನ್ನು ಹೇಗೆ ನಿರ್ವಹಿಸುತ್ತೀರಾ ಎಂದು ಕೇಳಿದರು. ನನ್ನ ಹಣದ ಭಾಗವನ್ನು ಡ್ರೈವರ್ಗಳ ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸುತ್ತೇನೆ ಎಂದಿದ್ದಾರೆ.
ಪ್ರತಿವರ್ಷ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ನನಗೆ ಒಂದು-ಎರಡು ಕುರ್ತಾಗಳನ್ನು ಕಳುಹಿಸಿಕೊಡುತ್ತಾರೆ. ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಸಿಹಿ ತಿಂಡಿಯನ್ನು ಕಳುಹಿಸಿಕೊಡುತ್ತಾರೆ ಎಂದಿದ್ದಾರೆ.
ನನಗೆ ಕೋಪ ಬರುವುದಿಲ್ಲ, ನಾನು ಶಿಸ್ತಿನಿಂದ ನಡೆದುಕೊಂಡು, ಕೋಪವನ್ನು ಕಂಟ್ರೋಲ್ ಮಾಡಿಕೊಳ್ಳುತ್ತೇನೆ. ಬೇರೆಯವರನ್ನು ಅವಮಾನಿಸುವುದರಲ್ಲಿ ನನಗೆ ನಂಬಿಕೆ ಇಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.