ಕೊಲಂಬೋ : ಭಾರತ ನಮಗೆ ಭಯೋತ್ಪಾದನಾ ದಾಳಿ ಸಾಧ್ಯತೆಯ ಬಗ್ಗೆ ಗುಪ್ತಚರ ಮಾಹಿತಿಯನ್ನು ಮೊದಲೇ ನೀಡಿತ್ತು, ಆದರೆ ನಮ್ಮ ಕಡೆಯಿಂದಲೇ ಲೋಪವಾಯಿತು ಎಂಬುದನ್ನು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಒಪ್ಪಿಕೊಂಡಿದ್ದಾರೆ. ಸರಣಿ ಬಾಂಬ್ ಸ್ಪೋಟ ನಡೆದ ಮೂರು ದಿನಗಳ ಬಳಿಕ ಎನ್ಡಿಟಿವಿ ಮಾಧ್ಯಮಕ್ಕೆ ಕೊಲಂಬೋದಲ್ಲಿ ನೀಡಿದ ಸಂದರ್ಶನದ ವೇಳೆ ಅವರು ಈ ಮಾತನ್ನು ಹೇಳಿದ್ದಾರೆ. ಭಯೋತ್ಪಾದನಾ ದಾಳಿಗೆ ಲಂಕಾದಲ್ಲಿ 300ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಮತ್ತು ಸುಮಾರು 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
‘ಭಾರತ ನಮಗೆ ಮಾಹಿತಿಯನ್ನು ನೀಡಿತ್ತು, ಆದರೆ ಅದನ್ನು ನಿರ್ವಹಿಸುವಲ್ಲಿ ನಮ್ಮಿಂದಲೇ ಲೋಪವಾಯಿತು. ಗುಪ್ತಚರವನ್ನು ಸರಿಯಾದ ಮಾರ್ಗದಲ್ಲಿ ನಾವು ಬಳಕೆ ಮಾಡಿಕೊಂಡಿಲ್ಲ’ ಎಂದು ವಿಕ್ರಮಸಿಂಘೆ ಹೇಳಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸುತ್ತಿರುವ ಶ್ರೀಲಂಕಾ ತನಿಖಾಧಿಕಾರಿಗಳು ಚೀನಾ, ಪಾಕಿಸ್ಥಾನ ಸೇರಿದಂತೆ ಹಲವಾರು ದೇಶಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಶ್ರೀಲಂಕಾ ಸರಣಿ ಬಾಂಬ್ ದಾಳಿಯ ಹೊಣೆಯನ್ನು ಇಸಿಸ್ ಹೊತ್ತುಕೊಂಡಿದ್ದು, ನ್ಯೂಜಿಲ್ಯಾಂಡ್ನ ಕ್ರೈಸ್ಟ್ ಚರ್ಚ್ ಮಸೀದಿಗಳಲ್ಲಿ ನಡೆದಿದ್ದ ಗುಂಡಿನ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಿದ್ದಾಗಿ ಹೇಳಿಕೊಂಡಿದೆ. ಈ ನಿಟ್ಟಿನಲ್ಲಿ ತನಿಖೆಯನ್ನು ಮುಂದುವರೆಸಲಾಗುತ್ತಿದೆ.
ಭಾನುವಾರ ಕ್ರಿಶ್ಚಿಯನ್ನರ ಈಸ್ಟರ್ ಹಬ್ಬದ ದಿನ ಚರ್ಚ್, ಹೋಟೆಲ್ ಸೇರಿದಂತೆ ಹಲವಾರು ಕಡೆಗಳಲ್ಲಿ ಬಾಂಬ್ ಅನ್ನು ಸ್ಪೋಟಿಸಲಾಗಿತ್ತು. ಘಟನೆಯಲ್ಲಿ 300ಕ್ಕೂ ಮಂದಿ ಅಸುನೀಗಿದರು. ನಾಗರಿಕ ಯುದ್ಧ ಮುಕ್ತಾಯವಾದ ಬಳಿಕ ದಶಕಗಳಿಂದ ಶಾಂತಿಯ ನೆರಳಲ್ಲಿ ಇದ್ದ ಶ್ರೀಲಂಕಾ ಜನತೆಗೆ ಈ ಘಟನೆ ಬರಸಿಡಿಲಿನಂತೆ ಎರಗಿತ್ತು. ಅಂತಾರಾಷ್ಟ್ರೀಯ ಸಮುದಾಯದಿಂದ ಈ ಘಟನೆಗೆ ತೀವ್ರ ಸಂತಾಪಗಳು, ಖಂಡನೆಗಳು ವ್ಯಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.