ನವದೆಹಲಿ: ಪಾಕಿಸ್ಥಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರೊಂದಿಗೆ ಸೇರಿಕೊಂಡು ಕಾಂಗ್ರೆಸ್ ಕುತಂತ್ರ ಮಾಡುತ್ತಿದೆ ಎಂಬ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅನಿಸಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು, ಭಾರತದ ಚುನಾವಣಾ ವಿಷಯದಿಂದ ಇಮ್ರಾನ್ ಖಾನ್ ಅವರು ದೂರವಿದ್ದರೆ ಆದಷ್ಟು ಒಳ್ಳೆಯದು ಎಂದಿದ್ದಾರೆ.
ಎಎನ್ಐಗೆ ಸಂದರ್ಶನ ನೀಡಿದ ಅವರು, ”ಭಾರತದ ಪ್ರಧಾನಿ ಯಾರಾಗಬೇಕೆಂದು ಭಾರತದ ಜನರೇ ನಿರ್ಧರಿಸುತ್ತಾರೆ. ನಮಗೆ ಬುದ್ಧಿ ಇದೆ, ಗಡಿಯಾಚೆಯಿಂದ ನಮಗೆ ಯಾವುದೇ ಸಲಹೆಗಳ ಅಗತ್ಯವಿಲ್ಲ. ಅಧಿಕಾರಕ್ಕೆ ಬಂದ ಮೇಲೆ ನೆರೆಯ ರಾಷ್ಟ್ರಗಳನ್ನು ಹೇಗೆ ನಿರ್ವಹಿಸಬೇಕು ಎಂಬುದು ನಮಗೆ ತಿಳಿದಿದೆ. ಗಡಿಯಾಚೆಯಿಂದ ನಮಗೆ ಸಲಹೆ ಅಥವಾ ನಿರ್ದೇಶನಗಳ ಅಗತ್ಯವಿಲ್ಲ” ಎಂದಿದ್ದಾರೆ.
ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ಮಾತ್ರ ಭಾರತ ಮತ್ತು ಪಾಕಿಸ್ಥಾನದ ನಡುವೆ ಶಾಂತಿ ಮಾತುಕತೆ ನಡೆಯಲು ಸಾಧ್ಯ ಎಂದು ಇತ್ತೀಚಿಗೆ ಇಮ್ರಾನ್ ಖಾನ್ ಹೇಳಿದ್ದರು, ಆದರೆ ಮೋದಿ ಸರ್ಕಾರಕ್ಕೆ ಮುಜುಗರವನ್ನು ತರಿಸಲು ಕಾಂಗ್ರೆಸ್ ಅವರ ಬಾಯಿಯಿಂದ ಹಾಗೆ ಹೇಳಿಸಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಸೀತಾರಾಮನ್ ಹೇಳಿಕೆಗೆ ರಾಮ್ ಮಾಧವ್ ಸಹಮತವನ್ನು ವ್ಯಕ್ತಪಡಿಸಿದ್ದಾರೆ.
‘ಬಾಲಾಕೋಟ್ ವಿಷಯವನ್ನು ಕೆದಕಿ ಮತ್ತು ಶಸ್ತ್ರಾಸ್ತ್ರ ಪಡೆಗಳ ಕಾರ್ಯಾಚರಣೆಗಳ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುವ ಮೂಲಕ ಪ್ರತಿಪಕ್ಷಗಳೇ ಸೇನೆಯನ್ನು ರಾಜಕೀಯಗೊಳಿಸುತ್ತಿದೆ. ಅವರು ಭಾರತ ಸರ್ಕಾರವನ್ನು ಪ್ರಶ್ನಿಸುತ್ತಿಲ್ಲ, ಬದಲಾಗಿ ಸೇನಾಪಡೆಗಳ ಶೌರ್ಯವನ್ನೇ ಪ್ರಶ್ನೆ ಮಾಡುತ್ತಿದ್ದಾರೆ” ಎಂದರು.
ಸಾಧ್ವಿ ಪ್ರಗ್ಯಾ ಸಿಂಗ್ ಅವರನ್ನು ಭೋಪಾಲಿನಿಂದ ಕಣಕ್ಕಿಳಿಸಿದ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಅವರು, ”ಪ್ರತಿಪಕ್ಷಗಳು ಭಯೋತ್ಪಾದಕರ ಬಗ್ಗೆ ಕಳವಳ ವ್ಯಕ್ತಪಡಿಸಬೇಕೇ ಹೊರತು ದೇಶದ ನಾಗರಿಕರ ಬಗ್ಗೆ ಅಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.