ಮಂಗಳೂರು: ಮಾನವೀಯತೆ ಎಲ್ಲದಕ್ಕಿಂತಲೂ ಮಿಗಿಲಾದುದು. ಹೊಡೆದಾಟ ಬಡಿದಾಟಗಳೇ ಹೆಚ್ಚಾಗಿ ಸುದ್ದಿಯಾಗುವ ಈ ಕಾಲದಲ್ಲಿ ಮಾನವೀಯ ಕಾರ್ಯಗಳೂ ಆಗಾಗ ಸದ್ದು ಮಾಡುತ್ತವೆ. ಇದಕ್ಕೆ ಉದಾಹರಣೆ, 15 ದಿನಗಳ ಪುಟಾಣಿ ಕಂದಮ್ಮನನ್ನು ಬದುಕಿಸಲು ಮಂಗಳೂರಿನಿಂದ ಕೇರಳದ ಕೊಚ್ಚಿಗೆ ಗ್ರೀನ್ ಕಾರಿಡಾರ್ ಅನ್ನು ನಿರ್ಮಿಸಿ ಅಂಬ್ಯುಲೆನ್ಸ್ನ ಸುಗಮ ಸಂಚಾರಕ್ಕೆ ಶ್ರಮಿಸಿದ ಜನರು.
ಕಾಸರಗೋಡಿನ ಮಿಥಾ ಮತ್ತು ಸಾನಿಯಾ ದಂಪತಿಗಳಿಗೆ 15 ದಿನಗಳ ಹಿಂದೆಯಷ್ಟೇ ಮಂಗಳೂರಿನಲ್ಲಿ ಮಗು ಜನಿಸಿತ್ತು. ಆದರೆ ಸೋಮವಾರ ರಾತ್ರಿ ಆ ಮಗುವಿನ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಾ ಬಂದಿದೆ. ತಕ್ಷಣವೇ ಅದಕ್ಕೆ ಹೃದಯ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಕೊಚ್ಚಿಯಲ್ಲಿನ ಅಮೃತ ವೈದ್ಯಕೀಯ ಕಾಲೇಜಿಗೆ ಅದನ್ನು ದಾಖಲು ಮಾಡಲೇ ಬೇಕಿತ್ತು. ಆದರೆ ವಾಯುಮಾರ್ಗ ಮಗುವಿಗೆ ಅಪಾಯಕಾರಿಯಾಗಬಲ್ಲದು, ರಸ್ತೆ ಮೂಲಕವೇ ಕೊಂಡೊಯ್ಯಿರಿ ಎಂದು ವೈದ್ಯರು ಸೂಚನೆ ನೀಡಿದ್ದರು.
16 ಗಂಟೆಗಳ ಹಾದಿಯನ್ನು ಆದಷ್ಟು ವೇಗದಲ್ಲಿ ಕ್ರಮಿಸಬೇಕಾದ ಅನಿವಾರ್ಯತೆ ಅಂಬ್ಯುಲೆನ್ಸ್ನದ್ದಾಗಿತ್ತು. ಇದಕ್ಕಾಗಿ ಅಂಬ್ಯುಲೆನ್ಸ್ ಪ್ರಯಾಣವನ್ನು ಫೇಸ್ಬುಕ್ನಲ್ಲಿ ಲೈವ್ ವೆಬ್ಕಾಸ್ಟ್ ಮಾಡಲಾಯಿತು. ಜನರಲ್ಲಿ ಹಾದಿಯನ್ನು ಸುಗಮಗೊಳಿಸುವಂತೆ ಮನವಿ ಮಾಡಲಾಯಿತು. ಸುದ್ದಿ ತಿಳಿದ ತಕ್ಷಣ ಜನರು ರಸ್ತೆಗೆ ಆಗಮಿಸಿ ಅಂಬ್ಯುಲೆನ್ಸ್ ಬರುವ ಹಾದಿಯಲ್ಲಿ ಸಂಚಾರ ದಟ್ಟಣೆ ಇಲ್ಲದಂತೆ ನೋಡಿಕೊಂಡರು. ‘ಚೈಲ್ಡ್ ಪ್ರೊಟೆಕ್ಟ್ ಟೀಮ್’ ಇದಕ್ಕೆ ಕೈಜೋಡಿಸಿತು. 600 ಕಿಮೀ ಪ್ರಯಾಣವನ್ನು ಅಂಬುಲೆನ್ಸ್ 10 ಗಂಟೆಯಲ್ಲಿ ಮುಟ್ಟಿತು.
ಮಗುವಿನ ಚಿಕಿತ್ಸೆಗೆ ತಗಲುವ ಎಲ್ಲಾ ವೆಚ್ಚವನ್ನು ಭರಿಸುವುದಾಗಿ ಕೇರಳ ಸಿಎಂ ಘೋಷಣೆ ಮಾಡಿದ್ದಾರೆ. ಮಗುವಿನ ಪ್ರಾಣ ಉಳಿಯಲಿ ಎಂದು ಕೇರಳದಾದ್ಯಂತ ಪ್ರಾರ್ಥನೆಗಳನ್ನು ನಡೆಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.