ರಾಯ್ಪುರ: ದೇಶದಲ್ಲೇ ಅತೀಹೆಚ್ಚು ನಕ್ಸಲ್ ಪೀಡಿತ ಜಿಲ್ಲೆ ಎನಿಸಿಕೊಂಡಿರುವ ಛತ್ತೀಸ್ಗಢ ದಂತೇವಾಡ ಜಿಲ್ಲೆಯ ಯುವತಿಯೊಬ್ಬಳು, ಇತ್ತೀಚಿಗೆ ಫಲಿತಾಂಶ ಘೋಷಣೆಯಾದ ನಾಗರಿಕ ಸೇವಾ ಪರೀಕ್ಷೆಯಲ್ಲಿ 12ನೇ ರ್ಯಾಂಕ್ ಪಡೆದುಕೊಳ್ಳುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ. ನಕ್ಸಲರ ಆರ್ಭಟ ತನ್ನ ಜಿಲ್ಲೆಯ ಜನರನ್ನು ಸಾಧನೆಯಿಂದ ವಿಮುಖರಾಗುವಂತೆ ಮಾಡಿಲ್ಲ ಎಂಬುದನ್ನು ಆಕೆ ತೋರಿಸಿಕೊಟ್ಟಿದ್ದಾಳೆ.
ದಂತೇವಾಡದ ಗೀದಂ ನಗರದವರಾದ ನಮೃತಾ ಜೈನ್ ಅವರು, ನಾಗರಿಕ ಸೇವಾ ಪರೀಕ್ಷೆಯಲ್ಲಿ 12ನೇ ಸ್ಥಾನ ಪಡೆದುಕೊಂಡ ಸಾಧಕಿಯಾಗಿದ್ದಾರೆ. ಆಕೆ ಇಂಡಿಯನ್ ಪೊಲೀಸ್ ಸರ್ವಿಸ್ಗೆ ಆಯ್ಕೆಯಾಗಿದ್ದು, ಸರ್ದಾರ್ ವಲ್ಲಭಭಾಯ್ ಪಟೇಲ್ ನ್ಯಾಷನಲ್ ಪೊಲೀಸ್ ಅಕಾಡಮಿ ಹೈದರಾಬಾದಿನಲ್ಲಿ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ. 2016ರಲ್ಲಿ ಇವರು 99ನೇ ಸ್ಥಾನವನ್ನು ಪಡೆದುಕೊಂಡಿದ್ದರು. ಈ ಬಾರಿ 12ನೇ ಸ್ಥಾನಕ್ಕೆ ತಮ್ಮ ರ್ಯಾಂಕ್ ಅನ್ನು ಏರಿಸಿಕೊಂಡಿದ್ದಾರೆ.
‘ನಾನು ಬಾಲ್ಯದಿಂದಲೇ ಕಲೆಕ್ಟರ್ ಆಗಬೇಕೆಂದು ಆಸೆಯಿಟ್ಟುಕೊಂಡಿದ್ದೆ. 8ನೇ ತರಗತಿಯಲ್ಲಿರುವಾಗ ಮಹಿಳಾ ಅಧಿಕಾರಿಯೊಬ್ಬರು ನಮ್ಮ ಶಾಲೆಗೆ ಬಂದಿದ್ದರು. ಬಳಿಕ ನನಗೆ ಗೊತ್ತಾಯಿತು ಅವರು ಕಲೆಕ್ಟರ್ ಎಂದು. ಅಲ್ಲಿಂದಲೇ ನಾನು ಕಲೆಕ್ಟರ್ ಆಗಬೇಕು ಎಂಬ ಕನಸನ್ನು ಕಾಣಲಾರಂಭಿಸಿದೆ’ ಎಂದು ನಮೃತಾ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ನಕ್ಸಲರು ಪೊಲೀಸ್ ಠಾಣೆಯನ್ನು ಸುಟ್ಟು ಹಾಕಿದ್ದನ್ನು ಕಂಡ ಬಳಿಕ ಸಿವಿಲ್ ಸರ್ವಿಸ್ ಮಾಡಬೇಕು ಎಂಬ ನನ್ನ ಗುರಿ ಮತ್ತಷ್ಟು ನಿಖರಗೊಂಡಿತು ಎಂದಿದ್ದಾರೆ.
‘ನಾನು ವಾಸವಿರುವ ಪ್ರದೇಶ ಅತ್ಯಂತ ನಕ್ಸಲ್ ಪೀಡಿತವಾಗಿದೆ. ಅಲ್ಲಿ ಮೂಲಸೌಕರ್ಯಗಳೇ ಇಲ್ಲ, ಶಿಕ್ಷಣ ವ್ಯವಸ್ಥೆಯೂ ಇಲ್ಲ. ನನ್ನ ರಾಜ್ಯದ ಜನರಿಗೆ ಸೇವೆ ಸಲ್ಲಿಸಲು ನಾನು ಬಯಸುತ್ತೇನೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.