ನಾಸಿಕ್: ಯುದ್ಧ ಮಾಡಿ ಪಾಕಿಸ್ಥಾನವನ್ನು ಉಡಾಯಿಸಿ ಬಿಡಿ ಎಂದು ಮನೆಯಲ್ಲಿ ಕೂತು ಸಾಮಾಜಿಕ ಜಾಲತಾಣಗಳಲ್ಲಿ ಶೌರ್ಯ ಪ್ರದರ್ಶಿಸುವ ಕೆಲ ಜನರಿಗೆ ವಾಯುಸೇನೆಯ ಹುತಾತ್ಮ ಸ್ಕ್ವಾಡ್ರನ್ ಲೀಡರ್ ನಿನಾದ್ ಮಂದವಗ್ನೆ ಅವರ ಪತ್ನಿ ವಿಜೇತ ಮಂದವಗ್ನೆ ಅವರು ದಿಟ್ಟ ಸಂದೇಶವೊಂದನ್ನು ರವಾನಿಸಿದ್ದಾರೆ. ಅವರು ಇಂತಹ ಜನರಿಗೆ ಸಂದೇಶ ನೀಡುವ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘’ನಿನಾದ್ ಕೇವಲ ಯೋಧನಾಗಿರಲಿಲ್ಲ, ಶ್ರೇಷ್ಠ ವ್ಯಕ್ತಿಯೂ ಆಗಿದ್ದರು. ಒಂದು ವೇಳೆ ಜನರು ಪ್ರತಿಕಾರ ಬಯಸುತ್ತಿದ್ದರೆ ಅಥವಾ ದೇಶಕ್ಕಾಗಿ ಏನಾದರು ಮಾಡಬೇಕು ಎಂದು ನಿಜವಾಗಿಯೂ ಬಯಸಿದ್ದರೆ, ಅವರು ಮೊದಲು ಶಸ್ತ್ರಾಸ್ತ್ರ ಪಡೆಗಳನ್ನು ಸೇರಬೇಕು ಅಥವಾ ತಮ್ಮ ಕುಟುಂಬ ಸದಸ್ಯರನ್ನು ಸೇನೆಯಲ್ಲಿ ಸೇರ್ಪಡೆಗೊಳಿಸಬೇಕು. ಸೋಶಿಯಲ್ ಮೀಡಿಯಾದಲ್ಲಿ ಜಗಳವಾಡುವುದರಿಂದ ಏನೂ ಸಾಧಿಸಲು ಸಾಧ್ಯವಿಲ್ಲ. ನಿಮಗೆ ಒಂದಿಷ್ಟು ಶೌರ್ಯವಿದ್ದರೆ ಗಡಿಗೆ ಹೋಗಿ ಹೋರಾಡಿ. ವಾಟ್ಸಾಪ್ ಮತ್ತು ಫೇಸ್ಬುಕ್ನಲ್ಲಿ ಸಂದೇಶ ಹಾಕುವುದರಿಂದ ಏನೂ ಸಾಧಿಸಲು ಸಾಧ್ಯವಿಲ್ಲ’.
ನೀವು ದೇಶದ ಬದಲಾವಣೆಗೆ ಶ್ರಮಿಸಿ, ಎಲ್ಲರೂ ಸೈನ್ಯಕ್ಕೆ ಹೋಗಿ ಸೇರಲಾಗುವುದಿಲ್ಲ, ಅದರ ಬದಲು ನಾವು ನಮ್ಮ ಪರಿಸರವನ್ನು ಸ್ವಚ್ಛಗೊಳಿಸುವುದು, ಕಾರಿನಲ್ಲಿ ಓಡಾಡುವಾಗ ಎಲ್ಲೆಂದರಲ್ಲಿ ಕಸವನ್ನು ಒಗೆಯದಿರುವುದು, ಹೆಣ್ಣು ಮಕ್ಕಳನ್ನು ಚುಡಾಯಿಸದಿರುವುದು, ಕೋಮು ದ್ವೇಷವನ್ನು ಹೆಚ್ಚಿಸದಿರುವುದು, ಇವೆಲ್ಲ ಚಿಕ್ಕ ಚಿಕ್ಕ ಕೆಲಸಗಳೂ ಎಂದೆನಿಸಿದರೂ ಇಂತಹ ಒಳ್ಳೆಯ ಕೆಲಸಗಳನ್ನು ಮಾಡಿ ದೇಶದ ಏಳ್ಗೆಗೆ ಶ್ರಮಿಸಿ, ಇದರಿಂದ ದೇಶದ ವಾತಾವರಣ ಬದಲಾಗುತ್ತದೆ. ಗಡಿಯಲ್ಲಿ ನಮ್ಮ ಸೈನಿಕರು ಹೆಮ್ಮೆ ಪಡುತ್ತಾರೆ. ಅವರು ತಮ್ಮ ಮನೆ-ಕುಟುಂಬದವರನ್ನು ಬಿಟ್ಟು ನಮಗಾಗಿ ತಮ್ಮ ಜೀವವನ್ನು ಪಣಕ್ಕಿಡುತ್ತಾರೆ. ನಾವು ಅವರಿಗಾಗಿ ನಮ್ಮ ಕೈಲಾದಷ್ಟು ಸಹಾಯ ಮಾಡಿ ನಮ್ಮ ದೇಶದ ಏಳ್ಗೆಗೆ ಶ್ರಮಿಸುವುದು ಕೂಡಾ ಒಂದು ಒಳ್ಳೆಯ ಕೆಲಸ ಎಂದು ಮನವಿ ಮಾಡಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ಹಾಕುವ ಜಿಂದಾಬಾದ್, ಮುರ್ದಾಬಾದ್ ಘೋಷಣೆಗಳನ್ನು ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರುಗಳು ನೋಡುವುದಿಲ್ಲ, ಸೋಶಿಯಲ್ ಮೀಡಿಯಾಗಳಲ್ಲಿ ಈ ಕೆಲಸ ಮಾಡುವುದನ್ನು ಬಿಟ್ಟು ಒಳ್ಳೆಯ ಕೆಲಸಗಳನ್ನು ಮಾಡಿ ಎಂದಿದ್ದಾರೆ.
ಫೆ.27 ರಂದು ಜಮ್ಮು ಕಾಶ್ಮೀರದ ಬುದ್ಗಾಂನಲ್ಲಿ ಪತನಕ್ಕೀಡಾದ MI-17 ಯುದ್ಧ ವಿಮಾನದಲ್ಲಿ ನಿನಾದ್ ಮೃತಪಟ್ಟಿದ್ದರು. ಅವರಿಗೆ 33 ವರ್ಷ ವಯಸ್ಸಾಗಿತ್ತು. ಪತ್ನಿ ಮತ್ತು 2 ವರ್ಷದ ಮಗಳು ನಿಯಾಳನ್ನು ಅವರು ಅಗಲಿದ್ದಾರೆ.
ನಾಸಿಕ್ನ ಅಮರ್ಧಾಮ್ನಲ್ಲಿ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಜರುಗಿದ್ದು, ನಿನಾದ್ ಅಮರ್ ರಹೇ ಎಂಬ ಘೋಷಣೆಗಳು ಮೊಳಗಿದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.