ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಸಂಸತ್ತಿನಲ್ಲಿ ಕಾಂಗ್ರೆಸ್ನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಪ್ರತಿಪಕ್ಷಗಳ ಮಹಾಘಟ್ಬಂಧನ್ನನ್ನು ಮಹಾಕಲಬೆರಕೆ ಮತ್ತು ಜನರಿಗೆ ಇದರ ಬಗ್ಗೆ ಸಂಪೂರ್ಣ ಅರಿವಿದೆ ಎಂದು ಜರೆದಿದ್ದಾರೆ. ಅಲ್ಲದೇ ಹಿಂದಿಯ ಖ್ಯಾತ ಗಾದೆ ’ಕಳ್ಳ ಕಾವಲುಗಾರನನ್ನು ಬೈಯುತ್ತಿದ್ದಾನೆ’ ಎನ್ನುವ ಮೂಲಕ ವಿರೋಧಿಗಳಿಗೆ ಛಾಟಿ ಬೀಸಿದ್ದಾರೆ.
ಲೋಕಾಸಭಾದಲ್ಲಿ ವಂದನಾ ನಿರ್ಣಯಕ್ಕೆ ಪ್ರತಿಕ್ರಿಯೆ ನೀಡಿದ ಮಾತನಾಡಿದ ಅವರು, ‘2014ರಲ್ಲಿ 30 ವರ್ಷಗಳ ಬಳಿಕ ದೇಶದ ಜನರು ಸರ್ಕಾರಕ್ಕೆ ಸಂಪೂರ್ಣ ಬಹುಮತವನ್ನು ನೀಡಿದರು. ಈಗ ಮಹಾಕಲಬೆರಕೆ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ’ ಎಂದರು.
‘ಕಲಬೆರಕೆಯ ಸರ್ಕಾರ ಬಂದರೆ ಏನಾಗಬಹುದು ಎಂಬ ಅರಿವು ದೇಶದ ಜನರಿಗಿದೆ. ಕಲಬೆರಕೆ ಸರ್ಕಾರ ಎಷ್ಟು ಹಾನಿಕಾರಕ ಎಂಬುದು ಮತದಾರರಿಗೆ ತಿಳಿದಿದೆ. ಸಂಪೂರ್ಣ ಬಹುಮತದ ಸರ್ಕಾರದ ಆಡಳಿತ ವೈಖರಿ ವಿಭಿನ್ನವಾಗಿರುತ್ತದೆ’ ಎಂದಿದ್ದಾರೆ.
ಅಲ್ಲದೇ, ಕಾಂಗ್ರೆಸ್ ಸರ್ಕಾರ ಮಧ್ಯವರ್ತಿಗಳಿಲ್ಲದೆ ಒಂದೇ ಒಂದು ರಕ್ಷಣಾ ಒಪ್ಪಂದವನ್ನು ಮಾಡಿಕೊಂಡಿಲ್ಲ. ರಫೆಲ್ ಒಪ್ಪಂದದ ಮಧ್ಯಸ್ಥಿತಿಕೆಯನ್ನೂ ಅವರು ಯಾರಿಗೋ ನೀಡಬೇಕೆಂದಿದ್ದರು, ಅದು ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ರಫೆಲ್ ಹಗರಣದ ಆರೋಪ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಅಲ್ಲದೇ, 50 ಬಾರಿ ಚಾಚಾ, ಮಾಮಾ, ಬೇನಾಮಿ ಆಸ್ತಿಗಳ ಮೂಲಕ ರಕ್ಷಣಾ ಒಪ್ಪಂದಗಳು ನಡೆದಿವೆ ಎನ್ನುವ ಮೂಲಕ ರಾಬರ್ಟ್ ವಾದ್ರಾರಿಗೆ ಪರೋಕ್ಷ ಟಾಂಗ್ ನೀಡಿದರು.
‘ರಫೆಲ್ ಬಗ್ಗೆ ಅಷ್ಟೊಂದು ವಿಶ್ವಾಸದಿಂದ ಇವರು ಯಾಕೆ ಸುಳ್ಳು ಹೇಳುತ್ತಿದ್ದಾರೆ ಎಂದು ನನಗೆ ಆಶ್ಚರ್ಯವಾಗಿತ್ತು. ಬಳಿಕ ವರದಿಗಳನ್ನು ತರಿಸಿ ಪರಿಶೀಲಿಸಿದಾಗ ಗೊತ್ತಾಯಿತು, ಅವರು ಅಧಿಕಾರದಲ್ಲಿದ್ದಾಗ ಒಂದೇ ಒಂದು ಪ್ರಾಮಾಣಿಕ ರಕ್ಷಣಾ ಒಪ್ಪಂದ ಜರುಗಿಲ್ಲವೆಂದು. ಯಾರೋ ಮಾಮಾ, ಚಾಚಾ ಒಪ್ಪಂದದ ಮಧ್ಯ ಪ್ರವೇಶಿಸುತ್ತಿದ್ದರು’ ಎಂದಿದ್ದಾರೆ. ಅಲ್ಲದೇ ಕಾಂಗ್ರೆಸ್ ಭಾರತೀಯ ಶಸ್ತ್ರಾಸ್ತ್ರ ಪಡೆಗಳು ಬಲಿಷ್ಠವಾಗಿರುವುದನ್ನು ನೋಡಲು ಇಷ್ಟಪಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
‘ಸೇನಾಪಡೆಗಳಿಗೆ ಸರ್ಜಿಕಲ್ ದಾಳಿ ನಡೆಸಬಲ್ಲಂತಹ ಬುಲೆಟ್ ಪ್ರೂಫ್ ಜಾಕೆಟ್ಗಳೂ ಇರಲಿಲ್ಲ, ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಮಹತ್ವದ ಕಾರ್ಯ ಮಾಡಿದೆ’ ಎಂದಿದ್ದಾರೆ.
ಕಾಂಗ್ರೆಸ್ ಮುಕ್ತ ಕನಸನ್ನು ನಾನು ಕಂಡಿದ್ದಲ್ಲ, ಅದು ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು ಎಂದಿದ್ದಾರೆ. ಅಲ್ಲದೇ ’ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದೆಂದರೆ ಅದು ಆತ್ಮಹತ್ಯೆಗೆ ಸಮ’ ಎಂಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತನ್ನು ಪುನರುಚ್ಚರಿಸಿದ್ದಾರೆ.
ನಾವು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇವೆ. ಜನರಿಗೆ ನೀಡಿರುವ ಆಶ್ವಾಸನೆಗಳನ್ನ ಈಡೇರಿಸಿದ್ದೇವೆ. ಯಾವುದೇ ಸವಾಲುಗಳಿಗೆ ಹೆದರಿ ಓಡಿ ಹೋಗಿಲ್ಲ. ನಮ್ಮ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಹೋರಾಡಿದೆ. ಈ ಐದು ವರ್ಷಗಳ ಆಡಳಿತದಲ್ಲಿ ದೇಶ ಸಾಕಷ್ಟು ಪ್ರಗತಿ ಸಾಧಿಸಿದೆ. ಈ ನಾಲ್ಕೂವರೆ ವರ್ಷದಲ್ಲಿ 10 ಕೋಟಿ ಶೌಚಾಲಯ ನಿರ್ಮಾಣವಾಗಿವೆ. ಕಬ್ಬಿಣ ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದೇವೆ. ಮೇಕ್ ಇನ್ ಇಂಡಿಯಾ ಭಾರತದ ಹೆಮ್ಮೆಯ ಪ್ರತೀಕ. ಕಡಿಮೆ ದರದಲ್ಲಿ ಇಂಟರ್ನೆಟ್ ನೀಡಿದ್ದೇವೆ ಎಂದರು.
ಈ ಕ್ಷಣ ನನ್ನ ಬದುಕಿನಲ್ಲಿ ಮರೆಯಲಾಗದ ಕ್ಷಣ. ಐದು ವರ್ಷಗಳ ಆಡಳಿತದಲ್ಲಿ ಕಳಂಕರಹಿತನಾಗಿದ್ದೇನೆ. ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ಪಣತೊಟ್ಟಿದ್ದೇನೆ. ಕೇಂದ್ರ ಸರ್ಕಾರ ಬಡವರ ಪರ ಕೆಲಸ ಮಾಡಿದೆ. ನಮ್ಮ ಸರ್ಕಾರದ ಸಾಧನೆ ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.