ನವದೆಹಲಿ: ಮಧ್ಯಪ್ರಾಚ್ಯ ರಾಷ್ಟ್ರಗಳ ಪ್ರಯಾಣಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಸಲಹೆಗಳನ್ನು ಹೊರತಂದಿರುವ ವಿದೇಶಾಂಗ ಸಚಿವಾಲಯವು, ಇನ್ನು ಮುಂದೆ ಭಾರತೀಯರು ಇರಾಕ್ಗೆ ಪ್ರಯಾಣಿಸಬಹುದು ಎಂದು ತಿಳಿಸಿದೆ.
‘ಇರಾಕ್ನಲ್ಲಿ ಭದ್ರತಾ ಪರಿಸ್ಥಿತಿ ಸುಧಾರಣೆಯಾಗಿರುವ ಹಿನ್ನಲೆಯಲ್ಲಿ, ಇನ್ನು ಮುಂದೆ ಭಾರತೀಯರು ಆ ರಾಷ್ಟ್ರಕ್ಕೆ ಭೇಟಿಕೊಡುವ ಬಗ್ಗೆ ಯೋಚಿಸಬಹುದು. ಆದರೆ ಆ ದೇಶದ ಐದು ಪ್ರಾಂತ್ಯಗಳಾದ ನಿನ್ವೇಹ್, ಸಲಾಹುದ್ದೀನ್, ದಿಯಾಲ, ಅನ್ಬರ್, ಕಿರ್ಕುಕ್ಗಳಿಗೆ ಪ್ರಯಾಣಿಸಬಾರದು’ ಎಂದು ಹೊರಡಿಸಿರುವ ಸಲಹಾ ಪತ್ರದಲ್ಲಿ ವಿದೇಶಾಂಗ ಸಚಿವಾಲಯ ಹೇಳಿದೆ.
ಇರಾಕ್ಗೆ ಉದ್ಯೋಗಕ್ಕಾಗಿ ತೆರಳುವವರು, ಭಾರತ ಸರ್ಕಾರ ಇ-ಮೈಗ್ರೇಟ್ ಪೋರ್ಟಲ್ನಲ್ಲಿ ನೋಂದಾವಣೆಯನ್ನು ಮಾಡಿಕೊಳ್ಳಬೇಕು ಮತ್ತು ಬಾಗ್ದಾದ್ನಲ್ಲಿ ಭಾರತೀಯ ರಾಯಭಾರ ಕಛೇರಿಗೆ ತಮ್ಮ ಬಗ್ಗೆ ಮೊದಲೇ ಮಾಹಿತಿಯನ್ನು ಒದಗಿಸಬೇಕು ಎಂದು ಸೂಚಿಸಿದೆ.
2014ರಲ್ಲಿ ಇಸಿಸ್ ಉಗ್ರರು ಇರಾಕ್ನ ಕೆಲ ಭಾಗವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡ ಹಿನ್ನಲೆಯಲ್ಲಿ ಅಲ್ಲಿದ್ದ ಭಾರತೀಯ ಪ್ರಜೆಗಳನ್ನು ತಾಯ್ನಾಡಿಗೆ ವಾಪಾಸ್ ಕರೆತರಲಾಗಿತ್ತು. 2014ರ ಜೂನ್ 15ರಂದು ಪ್ರಯಾಣ ನಿರ್ದೇಶನ ಹೊರಡಿಸಿದ್ದ ಸಚಿವಾಲಯ, ಇರಾಕ್ನಲ್ಲಿ ಭಾರತೀಯರು ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಬೇಕು ಮತ್ತು ಭಾರತದಿಂದ ಅಲ್ಲಿಗೆ ತೆರಳಲು ಉದ್ದೇಶಿಸುವವರು ತಕ್ಷಣ ತಮ್ಮ ಯೋಚನೆಯನ್ನು ಕೈಬಿಡಬೇಕು ಎಂದಿತ್ತು.
ಇರಾಕ್ನ ಮೋಸುಲ್ನಲ್ಲಿ 2014ರಲ್ಲಿ 39 ಭಾರತೀಯರನ್ನು ಕಿಡ್ನ್ಯಾಪ್ ಮಾಡಲಾಗಿತ್ತು. 2018ರಲ್ಲಿ ಅವರೆಲ್ಲ ಅಸುನೀಗಿದ್ದಾರೆ ಎಂದು ಘೋಷಿಸಲಾಯಿತು.
ಪ್ರಸ್ತುತ 10 ಸಾವಿರದಿಂದ 12 ಸಾವಿರದಷ್ಟು ಭಾರತೀಯರು ಇರಾಕ್ನಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಬಾಗ್ದಾದ್, ಹರ್ಬಾಲ ನಜಾಫ್, ಸಮರಾಹ್ಗಳಿಗೆ ವಾರ್ಷಿಕ 30 ಸಾವಿರದಿಂದ 40 ಸಾವಿರದಷ್ಟು ಭಾರತೀಯರು ಯಾತ್ರೆಗೆಂದು ತೆರಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.