ನವದೆಹಲಿ: ಭಾರೀ ವಿವಾದ ಸೃಷ್ಟಿಸಿದ್ದ ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್(ಎನ್ಎಸ್ಎಸ್ಒ)ನ ಉದ್ಯೋಗ ಸೃಷ್ಟಿಯ ವರದಿಗೆ ತಿರುಗೇಟು ನೀಡುವಂತಹ ವರದಿಯನ್ನು ನೀತಿ ಆಯೋಗ ಪ್ರಕಟಿಸಿದೆ ಮತ್ತು ಸರ್ಕಾರ ಕೂಡ ಈ ವರ್ಷದ ಉದ್ಯೋಗ ವರದಿಯನ್ನು ಮಾರ್ಚ್ನಲ್ಲಿ ಪ್ರಕಟಿಸುತ್ತಿದೆ.
ಎನ್ಎಸ್ಎಸ್ಒನ ವರದಿಗೆ ತಿರುಗೇಟು ನೀಡಿರುವ ನೀತಿ ಆಯೋಗದ ಸಿಇಓ ಅಮಿತಾಭ್ ಕಾಂತ್ ಅವರು, ಉದ್ಯೋಗ ಸೃಷ್ಟಿಯ ವರದಿಯನ್ನು ಸಿದ್ಧಪಡಿಸುವಾಗ ಹಿಂದಿನ ವಿಧಾನಗಳನ್ನು ಇಲ್ಲಿ ಅನುಸರಿಸಲಾಗಿಲ್ಲ ಎಂದು ಆರೋಪಿಸಿದ್ದಾರೆ.
‘2011-12ರ ಡಾಟಾಗೆ ಈಗಿನ ಎನ್ಎಸ್ಎಸ್ಒ ಡಾಟಾವನ್ನು ಹೋಲಿಸಲು ಸಾಧ್ಯವಿಲ್ಲ. 2011-12ರಲ್ಲಿ ಐದು ವರ್ಷಗಳಿಗೊಮ್ಮೆ ಅಧ್ಯಯನ ನಡೆಸಲಾಗುತ್ತಿತ್ತು. ಉದ್ಯೋಗ ಸೃಷ್ಟಿ ಕೆಳಗಿಳಿದಿದೆ ಎಂಬುದು ತಪ್ಪು, ಈ ವರ್ಷದ ವರದಿ ಸಿದ್ಧಪಡಿಸಲು ಅನುಸರಿಸಲಾದ ವಿಧಾನ ಹಿಂದಿನದಕ್ಕಿಂತ ಸಂಪೂರ್ಣ ಬದಲಾಗಿದೆ’ ಎಂದು ಕಾಂತ್ ಹೇಳಿದ್ದಾರೆ.
ಕಾಂತ್ ಅವರ ಪ್ರಕಾರ, ಆಯೋಗ ತ್ರೈಮಾಸಿಕವಾಗಿ ವರದಿಯನ್ನು ಸಿದ್ಧಪಡಿಸುತ್ತದೆ, ನಾಲ್ಕು ತ್ರೈಮಾಸಿಕಗಳ ವರದಿ ಸಿದ್ಧವಾಗಿದೆ. ಉದ್ಯೋಗ ಸೃಷ್ಟಿಯ ವಿಷಯದಲ್ಲಿ, ಕ್ಯಾಬ್ ಉದ್ಯಮದಲ್ಲಿರುವ ಓಲಾ ಮತ್ತು ಉಬೇರ್ಗಳು 2.2 ಮಿಲಿಯನ್ ಉದ್ಯೋಗ ಸೃಷ್ಟಿಸಿವೆ.
ಬದಲಾವಣೆಯನ್ನು ಪತ್ತೆ ಹಚ್ಚಲು ಒಂದು ತ್ರೈಮಾಸಿಕದೊಂದಿಗೆ ಮತ್ತೊಂದು ತ್ರೈಮಾಸಿಕವನ್ನು ಹೋಲಿಸುವುದು ಅಗತ್ಯ ಎಂದಿದ್ದಾರೆ.
ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗಗಳು ಸೃಷ್ಟಿಯಾಗಿವೆ ಎಂಬುದನ್ನು ನೀತಿ ಆಯೋಗ ಹೇಳಿದ್ದು, ಇದಕ್ಕೆ ಪೂರಕವೆಂಬಂತೆ ಸೊಸೈಟಿ ಆಫ್ ಇಂಡಿಯನ್ ಅಟೊಮೊಬೈಲ್, ಟ್ರ್ಯಾಕ್ಟರ್ ಮೆಕಾನೈಝೇಶನ್ ಅಸೊಸಿಯೇಶನ್, ಎಂಪ್ಲಾಯೀಸ್ ಪ್ರೊವಿಡೆಂಟ್ ಫಂಡ್ ಆರ್ಗನೈಝೇಶನ್, ಪ್ರವಾಸೋದ್ಯಮ ಸಚಿವಾಲಯದ ವರದಿಗಳನ್ನು ಅದು ಮುಂದಿಟ್ಟಿದೆ.
2014 ಮತ್ತು 18ರ ನಡುವೆ, ಸುಮಾರು 14.62 ಮಿಲಿಯನ್ ಉದ್ಯೋಗ ಸೃಷ್ಟಿಯಾಗಿವೆ. ಇದರಲ್ಲಿ 3.4 ಮಿಲಿಯನ್ ಉದ್ಯೋಗಗಳನ್ನು ಸಾರಿಗೆ ವಲಯ ಸೃಷ್ಟಿಸಿದೆ. ಇದರ ಪೈಕಿ ಓಲಾ ಮತ್ತು ಉಬೇರ್ 2.2 ಮಿಲಿಯನ್ ಉದ್ಯೋಗ ಸೃಷ್ಟಿಸಿದೆ.
2017 ಮತ್ತು 18ರ ನಡುವೆ 7.9 ಮಿಲಿಯನ್ ಉದ್ಯೋಗ ಸೃಷ್ಟಿಯಾಗಿದ್ದು, ಇದರಲ್ಲಿ 4.8 ಮಿಲಿಯನ್ ಉದ್ಯೋಗಗಳನ್ನು 18-25 ವಯಸ್ಸಿನವರು ಪಡೆದುಕೊಂಡಿದ್ದಾರೆ. ಐಟಿ ಸೆಕ್ಟರ್ 1.5 ಮಿಲಿಯನ್ ಉದ್ಯೋಗದ ಕೊಡುಗೆ ನೀಡಿದೆ.
ಕೇಂದ್ರ ಸರ್ಕಾರದ ಮುದ್ರಾ ಯೋಜನೆ 15.43 ಕೋಟಿ ರೂಪಾಯಿಗಳನ್ನು ಸಾಲವಾಗಿ ನೀಡಿದೆ. ಇದರಲ್ಲಿ 4 ಕೋಟಿ ಮಂದಿ ಹೊಸ ಸಾಲದಾರರು. ಅಂದರೆ ಅವರು ಹೊಸದಾಗಿ ಉದ್ಯಮ ಜಗತ್ತಿಗೆ ಕಾಲಿಟ್ಟಿದ್ದಾರೆ. ಶೇ.90 ಮತ್ತು 70ರಷ್ಟು ಸಾಲವನ್ನು ಶಿಶು ಮತ್ತು ಮಹಿಳಾ ಕೆಟಗರಿಯಲ್ಲಿ ನೀಡಲಾಗಿದೆ.
ಹಣಕಾಸು ವರ್ಷ 2018ರಲ್ಲಿ ಹೆದ್ದಾರಿ ನಿರ್ಮಾಣ ವಲಯವು 3 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ನೀತಿ ಆಯೋಗ ಹೇಳಿದ್ದು, ಈ ಮೂಲಕ ಎನ್ಎಸ್ಎಸ್ಒ ವರದಿಗೆ ತಿರುಗೇಟು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.