1957ರ ಸುಮಾರಿನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಕಾಡಿನ ವ್ಯಾಪ್ತಿಯಲ್ಲಿ ಮಂಗನ ಖಾಯಿಲೆಯ ವೈರಾಣುಗಳನ್ನು ಪತ್ತೆ ಹಚ್ಚಲಾಯಿತು. ಹಾಗಾಗಿ ಇದನ್ನು ಕ್ಯಾಸನೂರು ಫಾರೆಸ್ಟ್ ಡಿಸೀಸ್(KFD) ಎಂದೇ ಕರೆಯಲಾಯಿತು. ಮಂಗನ ಮೂಲಕ ವೈರಾಣು ಮನುಷ್ಯನ ದೇಹ ಪ್ರವೇಶಿಸುವುದರಿಂದ ಈ ಖಾಯಿಲೆಯನ್ನು ಗ್ರಾಮೀಣ ಭಾಷೆಯಲ್ಲಿ ಮಂಗನ ಖಾಯಿಲೆ ಎಂದೇ ಕರೆಯುತ್ತಾರೆ.
ಸೋಂಕಿನಿಂದ ಮೊದಲು ಮಂಗಗಳು ಮೃತಪಡುತ್ತವೆ. ಮಂಗ ಮೃತಪಟ್ಟ ಕಾಡಿನಲ್ಲಿ ಓಡಾಡಿದಾಗ ಉಣ್ಣೆಗಳ ಮೂಲಕ ವೈರಾಣುಗಳು ಮನುಷ್ಯನ ದೇಹ ಸೇರುತ್ತವೆ. ಹಾಗೆಯೇ ಅವು ಜಾನುವಾರುಗಳ ಮೈಯಲ್ಲಿ ಸೇರಿ ಆ ಮೂಲಕ ಮನುಷ್ಯನ ದೇಹ ಸಂಪರ್ಕಕ್ಕೆ ಬರುವ ಸಾಧ್ಯತೆಯೂ ಇದೆ. ಕಾಡಂಚಿನ ಜನರಿಗೆ ಪ್ರಾಣಭಯವೊಡ್ಡಿರುವ ಈ ಖಾಯಿಲೆಗೆ ಇದುವರೆಗಿನ ಸರ್ಕಾರಗಳು ಹೆಚ್ಚು ಮಹತ್ವ ನೀಡದೆ ನಿರ್ಲಕ್ಷ್ಯವಹಿಸಿರುವುದು ಮಲೆನಾಡಿಗರನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ.
ಪ್ರತೀ ಬಾರಿಯೂ ಸಾವು ಸಂಭವಿಸುವವರೆಗೂ ಆ ಬಗ್ಗೆ ಯಾವ ಸರ್ಕಾರಗಳೂ ಗಮನ ಹರಿಸುತ್ತಿಲ್ಲ. ಒಮ್ಮೆ ಒಂದೆರಡು ಸಾವುಗಳು ಸಂಭವಿಸಿದಾಗ ಆರೋಗ್ಯ ಇಲಾಖೆಗಳು ಎಚ್ಚೆತ್ತಂತೆ ನಟಿಸಿ ಕೆಲವೇ ದಿನಗಳಲ್ಲಿ ಮತ್ತೆ ನಿದ್ದೆಗೆ ಶರಣಾಗುತ್ತದೆ. ಒಂದು ವರ್ಷದ ಹಿಂದೆ ಕೂಡಾ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ವ್ಯಕ್ತಿಯೊಬ್ಬ ಮಂಗನ ಖಾಯಿಲೆಗೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ಬಲಿಯಾಗಿ, ಇನ್ನೂ ಹಲವು ಜನರಲ್ಲಿ ಸೋಂಕು ಕಾಣಿಸಿಕೊಂಡು ಆತಂಕ ಮೂಡಿಸಿತ್ತು. 2001 ರಿಂದ 2015ರವರೆಗೆ 1,025 ಮಂಗನಕಾಯಿಲೆ ಪ್ರಕರಣಗಳು ಪತ್ತೆಯಾಗಿದ್ದು ಇದೇ ಅವಧಿಯಲ್ಲಿ 38 ಮಂದಿ ಮಂಗನ ಖಾಯಿಲೆಯಿಂದ ಅಸುನೀಗಿದ ಬಗ್ಗೆ ಆರೋಗ್ಯ ಇಲಾಖೆಯ ಮೂಲಗಳಿಂದ ದೊರೆತ ಅಂಕಿ ಅಂಶಗಳನ್ನುಲ್ಲೇಖಿಸಿಯೇ ವರದಿಯಾಗಿತ್ತು.
ಖಾಯಿಲೆಯ ಗುಣ ಲಕ್ಷಣಗಳು
ವಿಪರೀತ ಜ್ವರ, ಕಣ್ಣು ಕೆಂಪಾಗುವುದು, ವಾಂತಿ, ತಲೆನೋವು, ಮೂಗು, ಕರುಳು ಹಾಗೂ ಚರ್ಮದಲ್ಲಿ ರಕ್ತಸ್ರಾವ, ಕೀಲು ನೋವು, ಮಾಂಸ ಖಂಡಗಳಲ್ಲಿ ನೋವು ಖಾಯಿಲೆಯ ಗುಣ ಲಕ್ಷಣ. ಜ್ವರ ಒಮ್ಮೆ ಉಲ್ಬಣಿಸಿದರೆ ಅದರ ನಿಯಂತ್ರಣ ಕಷ್ಟಸಾಧ್ಯವಲ್ಲದೆ ಜೀವಕ್ಕೇ ಕುತ್ತು ಬರುವ ಸಾಧ್ಯತೆಯಿದೆ.
ಮೊನ್ನೆ ಸಾಗರ ತಾಲೂಕಿನ ಅರಳಗೋಡು ಗ್ರಾಮದಲ್ಲಿ ಶ್ವೇತಾ ಜೈನ್ ಎನ್ನುವ ವಿದ್ಯಾರ್ಥಿನಿ ಮೃತಪಡುವ ಮೂಲಕ ವಾರದೊಳಗೆ ಮಂಗನ ಖಾಯಿಲೆಗೆ ಮೃತಪಟ್ಟವರ ಸಂಖ್ಯೆ ಏಳಕ್ಕೆ ತಲುಪಿದೆ! ನಿಯಂತ್ರಿಸಲು ಅಸಾಧ್ಯವೆಂದೇ ಪರಿಗಣಿಸಲ್ಪಟ್ಟಿರುವ ಇಷ್ಟೊಂದು ಭೀಕರ ಖಾಯಿಲೆಯೊಂದು ಶರವೇಗದಲ್ಲಿ ವ್ಯಾಪಿಸುತ್ತಿದ್ದರೂ ಯಾವ ಸುದ್ದಿವಾಹಿನಿಗಳಲ್ಲೂ ಇದೊಂದು ಪ್ರಮುಖ ಸುದ್ದಿಯಾಗಿ ಪ್ರಸಾರವಾಗುತ್ತಿಲ್ಲ. ಇದರ ನಿಯಂತ್ರಣದ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿಲ್ಲ. ಇದುವರೆಗೂ ಕೇವಲ ಇದೊಂದು ಸ್ಥಳೀಯ ಸಮಸ್ಯೆ ಎನ್ನುವಂತೆ ಮಾತ್ರ ಬಿಂಬಿತವಾಗಿದೆ. ರೋಗ ಪತ್ತೆಗೆ ರಕ್ತದ ಮಾದರಿ ಪರೀಕ್ಷಿಸುವ ಸಂಪೂರ್ಣ ಸುಸಜ್ಜಿತ ಪ್ರಯೋಗಲಾಯಗಳು ಕೂಡಾ ಇದುವರೆಗೂ ಈ ಭಾಗದಲ್ಲಿ ಇಲ್ಲದಿರುವುದು ಮಂಗನ ಖಾಯಿಲೆಯ ಬಗ್ಗೆ ಇದುವರೆಗಿನ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯನ್ನು ತೋರಿಸುತ್ತದೆ.
ಆಸ್ಪತ್ರೆಗಳಲ್ಲಿ ಎಲ್ಲವೂ ಇದೆ ಎಂದು ಆರೋಗ್ಯ ಇಲಾಖೆ ಹೇಳುತ್ತಿದೆಯಾದರೂ ಸ್ಥಳೀಯವಾಗಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಸಾರ್ವಜನಿಕರಿಗೆ ತಮ್ಮ ಜೀವ ರಕ್ಷಿಸಿಕೊಳ್ಳಲು ಸಾಕಷ್ಟು ಕಡೆ ಯಾವ ಸೌಲಭ್ಯಗಳೂ ದೊರೆಯುತ್ತಿಲ್ಲ. “ಅರಳಗೋಡು ಪಂಚಾಯತಿ ಹೊರತಾಗಿ ಇನ್ನೆಲ್ಲೂ ಸೂಕ್ತ ಸೌಲಭ್ಯಗಳು ಲಭ್ಯವಿಲ್ಲ. ಯಾಕೆಂದರೆ ನಮ್ಮೂರಲ್ಲಿ ಇನ್ನೂ ಯಾರೂ ಸತ್ತಿಲ್ಲ…!” ಎಂದು ಆ ಭಾಗದ ವ್ಯಕ್ತಿಯೊಬ್ಬರು ನೊಂದು ನುಡಿಯುತ್ತಾರೆ.
“ಕ್ಯಾಸನೂರು ಕಾಡಿನ ಖಾಯಿಲೆ ಕಾಡಿನಿಂದ ಕಾಡಿಗೆ ಅಡ್ಡಾಡುತ್ತಲೇ ಇದೆ. ಆದರೆ ಆ ಒಂದು ಪ್ರದೇಶದಲ್ಲಿ ಮೃತರ ಸಂಖ್ಯೆ ಕಡಿಮೆಯಾಗಿದೆ ಎನ್ನುವ ಒಂದೇ ಕಾರಣಕ್ಕೆ ಆ ಖಾಯಿಲೆ ಮುಗಿಯಿತು ಎಂದು ಸರ್ಕಾರ ಭಾವಿಸಿದಂತಿದೆ” ಎನ್ನುವುದು ಇನ್ನೊಬ್ಬರ ಅಳಲು. ಹೌದು. ಇದೀಗ ಆ ಖಾಯಿಲೆ ಕೇವಲ ಕ್ಯಾಸನೂರು ಖಾಯಿಲೆಯಾಗಿ ಉಳಿದಿಲ್ಲ. 2013ರಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲೂ ಈ ವೈರಸ್ ಕಾಣಿಸಿಕೊಂಡಿತ್ತು. 2015ರಲ್ಲಿ ಕೇರಳದ ವೈನಾಡು ಪ್ರದೇಶದಲ್ಲಿ 18 ಪ್ರಕರಣಗಳು ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ. ಹೀಗಿರುವಾಗ ಮುಂದೊಂದು ದಿನ ಇಡೀ ದೇಶವೆಲ್ಲಾ ಹರಡಿ ಮನುಕುಲಕ್ಕೇ ಮಾರಕವಾದರೂ ಆಗಬಹುದಾದ ಇಂತಹಾ ಮಾರಣಾಂತಿಕ ಖಾಯಿಲೆಯನ್ನು ಕೇವಲ ಒಂದು ಸ್ಥಳೀಯ ಸಮಸ್ಯೆಯೆನ್ನುವಂತೆ ಬಿಂಬಿಸುತ್ತಾ ನಿರ್ಲಕ್ಷಿಸುವುದು ಎಷ್ಟು ಸರಿ?
“ಲಂಟಾನ್ ಗಿಡ ಉಣ್ಣೆಗಳ ಆವಾಸ ಸ್ಥಾನ. ಯಾವಾಗ ಅರಣ್ಯ ಇಲಾಖೆ ಲಂಟಾನ್ ಗಿಡಗಳಿಗೂ ಬೆಂಕಿ ಕೊಡಲು ತಡೆ ನೀಡಿತೋ, ಮಂಗನ ಖಾಯಿಲೆ ಹರಡುವ ಉಣ್ಣೆಗಳಿಗೆ ಹಬ್ಬವಾಗಿದೆ. ಇದೀಗ ಮಂಗಗಳು ಹಿಂಡು ಹಿಂಡಾಗಿ ಸಾಯುತ್ತಿವೆ. ಆದರೆ ಸುಡಲು ಅರಣ್ಯ ಇಲಾಖೆ ವಿಫಲವಾಗುತ್ತಿದೆ. ಇನ್ನು ಸರ್ಕಾರ ತುರ್ತಾಗಿ ಹೆಚ್ಚುವರಿ ಸಿಬ್ಬಂದಿಗಳನ್ನೂ ಹಾಕಿಲ್ಲ” ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸ್ಥಳೀಯರು.
ಹಾಗಾದರೆ ಕೇವಲ ಒಂದು ವಾರದೊಳಗೆ ಏಳು ಜನರ ಜೀವಗಳನ್ನು ಬಲಿಪಡೆದಿರುವ ಮಂಗನ ಖಾಯಿಲೆಯ ಬಗ್ಗೆ ಸರ್ಕಾರಗಳು ಕಣ್ಣು ತೆರೆಯಲು ಇನ್ನೆಷ್ಟು ಬಲಿ ಬೇಕು? ಮಂಗನ ಖಾಯಿಲೆಯ ಶಾಶ್ವತ ಮುಕ್ತಿಗೆ ಸರ್ಕಾರಗಳು ಯೋಜನೆಗಳನ್ನು ಹಾಕಿಕೊಳ್ಳಬೇಕಾದರೆ ಮತ್ತೆಷ್ಟು ಜೀವಗಳ ಬಲಿಯಾಗಬೇಕು?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.