ತಿರುವನಂತಪುರ : ಶಬರಿಮಲೆ ದೇವಾಲಯವನ್ನು ಪ್ರವೇಶಿಸಲು ಎಲ್ಲಾ ವಯಸ್ಸಿನ ಮಹಿಳೆಯರಿಗೂ ಪ್ರವೇಶ ಕಲ್ಪಿಸಿಕೊಡಲು ಮುಂದಾಗಿರುವ ಕೇರಳ ಸರ್ಕಾರದ ವಿರುದ್ಧ ಬಿಜೆಪಿ ಸೋಮವಾರದಿಂದ ಅನಿರ್ದಿಷ್ಟಾವಧಿ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಿದೆ.
ವಿಧಾನಸೌಧದ ಎದುರು, ಕೇರಳ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಎನ್. ರಾಧಾಕೃಷ್ಣನ್ ಅವರು ಉಪವಾಸ ಆರಂಭಿಸಿದ್ದಾರೆ. ಬಿಜೆಪಿ ಸಂಸದ ಸರೋಜ್ ಪಾಂಡೆ ಅವರಿಗೆ ಸಾಥ್ ನೀಡಿದರು. ಕೇರಳದ ಎಲ್ಲ 14 ಜಿಲ್ಲೆಗಳ ಬಿಜೆಪಿ ಕಾರ್ಯಕರ್ತರು ಈ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ.
ಕೇರಳದ ಸಿಪಿಎಂ ಸರ್ಕಾರ ಜನರ ಆಶೋತ್ತರಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಬಗ್ಗೆ ಸಂಸತ್ತಿನಲ್ಲೂ ಪ್ರಸ್ತಾಪಿಸುತ್ತೇವೆ ಎಂದು ಪಾಂಡೆ ಹೇಳಿದ್ದಾರೆ.
ಇನ್ನೊಂದೆಡೆ ಶಬರಿಮಲೆ ವಿಚಾರವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ನಡುವೆ ವಿಧಾನಸಭೆ ಕಲಾಪದಲ್ಲಿ ಭಾರೀ ವಾಕ್ಸಮರ ನಡೆಯಿತು. ಇದರಿಂದಾಗಿ ನಾಲ್ಕನೇ ದಿನವೂ ಕಲಾಪವನ್ನು ಮುಂದೂಡಲಾಯಿತು.
ಶಬರಿಮಲೆ ವಿವಾದ ಕುರಿತು ಬಿಜೆಪಿ ವರಿಷ್ಠರಿಗೆ ವರದಿ ನೀಡಲು ಹುಬ್ಬಳ್ಳಿ-ಧಾರವಾಡ ಸಂಸದ ಪ್ರಹ್ಲಾದ ಜೋಶಿ, ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲು, ಛತ್ತೀಸ್ಗಢದ ದುರ್ಗ್ ಕ್ಷೇತ್ರದ ಸಂಸದೆ ಸರೋಜ್ ಪಾಂಡೆ, ಉತ್ತರಪ್ರದೇಶದ ಕೌಶಂಬಿ ಸಂಸದ ವಿನೋದ್ ಸೋಂಕರ್ ಅವರು ಎರಡು ದಿನಗಳಿಂದ ಕೇರಳದಲ್ಲೇ ಬೀಡುಬಿಟ್ಟಿದ್ದು, ಅಯ್ಯಪ್ಪ ಭಕ್ತರ ಜತೆ ಸಮಾಲೋಚನೆಯಲ್ಲಿ ನಿರತರಾಗಿದ್ದಾರೆ.
ಬಿಜೆಪಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದ ಪ್ರಹ್ಲಾದ ಜೋಶಿ ಅವರು, ‘ಶಬರಿಮಲೆಯಲ್ಲಿನ ಸಂಪ್ರದಾಯವನ್ನು ಕೇರಳದ ಕಮ್ಯುನಿಸ್ಟ್ ಸರ್ಕಾರ ನಾಶಪಡಿಸುತ್ತಿದೆ. ಇಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಅವರಿಗೆ ಸಲ್ಲಿಸುತ್ತೇವೆ. ಬ್ರಿಟಿಷರ ಕಾಲದಲ್ಲೂ ಧಾರ್ಮಿಕ ನಂಬಿಕೆಯುಳ್ಳವರನ್ನು ಗುರಿಯಾಗಿಸುತ್ತಿರಲಿಲ್ಲ’ ಎಂದರು.
source: m.dailyhunt.in
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.