ನವದೆಹಲಿ: ನೆರೆಯಿಂದ ತತ್ತರಿಸಿ ಹೋಗಿರುವ ಕೇರಳ ರಾಜ್ಯಕ್ಕೆ ದೇಶ ವಿದೇಶಗಳಿಂದ ನೆರವು ಹರಿದು ಬರುತ್ತಿದೆ. ಕೇರಳ ಜನತೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಯುಎಇ ರೂ.700 ಕೋಟಿಗಳ ನೆರವನ್ನು ಘೋಷಣೆ ಮಾಡಿದೆ. ಆದರೆ ಮೂಲಗಳ ಪ್ರಕಾರ ಈ ನೆರವನ್ನು ಸ್ವೀಕರಿಸಲು ಕೇರಳಕ್ಕೆ ಕೇಂದ್ರ ಸರ್ಕಾರದ ನಿಯಮ ಅಡ್ಡಿಯಾಗಲಿದೆ.
‘ಸದ್ಯಕ್ಕೆ ಭಾರತ ವಿದೇಶಗಳಿಂದ ಯಾವುದೇ ದೇಣಿಗೆಯನ್ನು ಸ್ವೀಕರಿಸುತ್ತಿಲ್ಲ, ಇದು ಕೇರಳಕ್ಕೆ ನೆರವು ಘೋಷಣೆ ಮಾಡಿರುವ ಯುಎಇಗೂ ಅನ್ವಯವಾಗುತ್ತದೆ’ ಎಂದು ಕೇಂದ್ರ ಹಿರಿಯ ಸಚಿವರೊಬ್ಬರು ತಿಳಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.
ಅಲ್ಲದೇ ಇದುವರೆಗೆ ವಿದೇಶಾಂಗ ಸಚಿವಾಲಯಕ್ಕೆ ಇಂತಹ ಯಾವುದೇ ನೆರವಿನ ಆಫರ್ ಬಂದಿಲ್ಲ, ಆಫರ್ ಬಂದರೆ ಈ ಬಗ್ಗೆ ಸಚಿವಾಲಯವೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದಿದ್ದಾರೆ.
ಅಲ್ಲದೇ ಅನಿವಾಸಿ ಭಾರತೀಯರು ಯಾವುದೇ ಅಡೆತಡೆಯಿಲ್ಲದೆ ಕೇರಳ ಸಿಎಂ ಪರಿಹಾರ ನಿಧಿಗೆ ಹಣವನ್ನು ಕಳುಹಿಸಬಹುದಾಗಿದೆ, ಇದಕ್ಕೆ ಯಾವುದೇ ತೆರಿಗೆಯನ್ನು ವಿಧಿಸಲಾಗುವುದಿಲ್ಲ. ಅಲ್ಲದೇ ನೋಂದಾಯಿತ ಎನ್ಜಿಓಗಳಿಗೆ ಕಳುಹಿಸುವ ಹಣಕ್ಕೂ ತೆರಿಗೆ ಇಲ್ಲ. ಆದರೆ ನೋಂದಾಯಿಸದೆ ಇರುವ ಎನ್ಜಿಓಗಳಿಗೆ ಕಳುಹಿಸಿಕೊಡುವ ಹಣಕ್ಕೆ ತೆರಿಗೆ ವಿಧಿಸಲಾಗುತ್ತದೆ.
ಈ ಹಿಂದೆ ಉತ್ತರಾಖಂಡದಲ್ಲಿ ನೆರೆ ಸಂಭವಿಸಿದ್ದ ಸಂದರ್ಭದಲ್ಲೂ ಅಂದಿನ ವಿತ್ತ ಸಚಿವ ಪಿ.ಚಿದಂಬರಂ ವಿದೇಶಿ ರಾಷ್ಟ್ರಗಳ ದೇಣಿಗೆಯನ್ನು ನಿರಾಕರಣೆ ಮಾಡಿದ್ದರು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.