News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬೆಂಗಳೂರಿನಲ್ಲಿ ನಮೋ ಭಾರತ್ ವತಿಯಿಂದ ಅಜಾತಶತ್ರುವಿಗೆ ನಮನ

ಬೆಂಗಳೂರು ಅಗಸ್ಟ್ 19: ಬೆಂಗಳೂರಿನ ಗಿರಿನಗರದ ಯೋಗಶ್ರೀ ಕೇಂದ್ರದಲ್ಲಿ ನಮೋ ಭಾರತ್ ಸಂಘಟನೆಯ ವತಿಯಿಂದ, ಅಜಾತಶತ್ರುವಿಗೆ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅತಿಥಿಗಳಾಗಿ ಡಿ. ಎಚ್. ಶಂಕರಮೂರ್ತಿ, ಮಾಜಿ ವಿಧಾನ ಪರಿಷತ್ ಸಭಾಪತಿಗಳು, ಹಾಗೂ ಶ್ರೇಯಾಂಕ್ ರಾನಡೆ, ರಾಷ್ಟ್ರೀಯ ಯುವ ಚಿಂತಕರು ಉಪಸ್ಥಿತರಿದ್ದರು.

ಯೋಗಶ್ರೀ ಸಭಾಂಗಣದಲ್ಲಿ ಜರುಗಿದ ಅಟಲ್ ಬಿಹಾರಿ ವಾಜಪೇಯಿ ಅವರ ನಮನ ಕಾರ್ಯಕ್ರಮಕದಲ್ಲಿ ವಾಜಪೇಯಿಯವರ ಅವಧಿ: ನವ ಭಾರತದ ನಿರ್ಮಾಣದ ಬುನಾದಿ ಎಂಬ ವಿಷಯದಲ್ಲಿ ಭಾಷಣ ನುಡಿನಮನ ನಡೆಯಿತು. ಜನಸಂಘದ ಕಾಲದಿಂದಲೂ ಅಟಲ್ ಜೀ ಅವರೊಂದಿಗೆ ಒಡನಾಟ ಹೊಂದಿದ್ದ ಡಿ.ಎಚ್. ಶಂಕರಮೂರ್ತಿಯವರು ,ಅಟಲ್ ಬಿಹಾರಿ ವಾಜಪೇಯಿ ಅವರ ಆರಂಭಿಕ ಜೀವನ, ಜನ ಸಂಘದ ದಿನಗಳ ಅವರ ನೆನಪುಗಳು, ನಂತರ ಅವರೊಂದಿಗೆ ಪಕ್ಷದ ಸಂಘಟನೆಯ ಕೆಲಸದ ಸಮಯದಲ್ಲಿನ ಅವರ ರೋಚಕ ಅನುಭವಗಳನ್ನು ಹಂಚಿಕೊಂಡರು. 1984 ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲನ್ನು ಅನುಭವಿಸಿದ ಸಮಯದಲ್ಲಿ ಶಿವಮೊಗ್ಗದ ಒಬ್ಬ ಹಿಂದುಳಿದ ಜಾತಿಯ ಕಾರ್ಯಕರ್ತ ಅಟಲ್ ಜಿ ಯವರ ಸೋಲಿಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು, ಅಟಲ್ ಜಿ ದೆಹಲಿಯಿಂದ ಆ ಕಾರ್ಯಕರ್ತನ ಮನೆಗೆ ಬಂದು, ಅವರ ಮನೆಯವರಿಗೆ ಧೈರ್ಯ ತುಂಬಿದ್ದರು ಎಂದು ಅಟಲ್ ಜೀ ಅವರ ಸರಳತೆಯ ಹಾಗೂ ಸಾಮಾನ್ಯ ಜನರಲ್ಲೊಂದಾಗುವ ಅವರ ವ್ಯಕ್ತಿತ್ವವನ್ನು ನೆನಪಿಸಿಕೊಂಡರು. ಮುಂದುವರೆದು, ವಾಜಪೇಯಿಯವರು ಅಂದು ರಾಜಕೀಯಕ್ಕೆ ಬರದೆ ಹೋಗಿದ್ದರೆ, ಅವರು ಒಬ್ಬ ಶ್ರೇಷ್ಠ ಕವಿಯಾಗುತ್ತಿದ್ದರು. ಅವರೊಬ್ಬ ಸಂಗೀತಗಾರರಾಗುತ್ತಿದ್ದರು, ಒಬ್ಬ ಖ್ಯಾತ ವಾಗ್ಮಿಯಾಗುತ್ತಿದ್ದರು, ಪತ್ರಿಕೋದ್ಯಮಕ್ಕೆ ಒಬ್ಬ ಮಹಾನ್ ಸಾಂಪಾದಕರಾಗುತ್ತಿದರು. ಈ ಎಲ್ಲ ಅರ್ಹತೆ ಹೊಂದಿದ್ದ ಅವರು, ಸಂಘದ ಪ್ರಭಾವದಿಂದ ತನ್ನೆಲ್ಲ ಶಕ್ತಿ,ಅರ್ಹತೆಯನ್ನು ದೇಶದ ಕೆಲಸಕ್ಕೆ ನೀಡಬೇಕೆಂದು, ರಾಜಕೀಯಕ್ಕೂ ಧುಮುಕಿ ಭಾರತ ರತ್ನರಾದರು ಎಂದು ತಮ್ಮ ಭಾವನಾತ್ಮಕ ನುಡಿ ನಮನವನ್ನು ಸಲ್ಲಿಸಿದರು.

ನಂತರ ಮಾತನಾಡಿದ ಯುವ ಚಿಂತಕ ಶ್ರೇಯಾಂಕ್ ರಾನಡೆ ಯವರು ವಾಜಪೇಯಿಯವರ ವ್ಯಕ್ತಿತ್ವ, ಆದರ್ಶ, ಅವರು ಅಧಿಕಾರದಲ್ಲಿದ್ದ ಸಂದರ್ಭದ ಅವರ ಆರ್ಥಿಕ ಮತ್ತು ವಿದೇಶಿ ನೀತಿ ಹಾಗೂ, ಪ್ರಸಕ್ತ ವಿದ್ಯಮಾನಗಳ ಹಿಂದೇ ಇರುವ ಅಟಲ್ ಜೀ ಅವರ ಕೊಡುಗೆಗಳನ್ನು ಅಂಕಿ ಅಂಶಗಳೊಂದಿಗೆ ತಿಳಿಸಿದರು. ವಾಜಪೇಯಿಯವರ 5 ವರ್ಷದ ಪೂರ್ಣಾವಧಿ ಸರ್ಕಾರ ಹಾಗೂ ಹಿಂದಿನ 13 ತಿಂಗಳ ಸರ್ಕಾರ ಇದ್ದಾಗಲೂ ಕೂಡ, ಒಂದರಮೇಲೊಂದರಂತೆ ಅಡೆತಡೆಗಳು ಬಂದರೂ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದರು. ಪೊಖ್ರಾನ್ ಅಣು ಪರೀಕ್ಷೆಯ ಪರಿಣಾಮದಿಂದ ಇತರ ದೇಶಗಳು ಭಾರತದ ಮೇಲೆ ಹಾಕಿದ ನಿರ್ಬಂಧದಿಂದ ಉಂಟಾದ ವಿದೇಶಿ ವಿನಿಮಯದ ಕೊರತೆಯನ್ನು ಎದೆಗುಂದದೆ, ಜಾಗರೂಕತೆಯಿಂದ ನಿಭಾಯಿಸಿದ ಅವರ ತಂತ್ರಗಾರಿಕೆ ಹಾಗೂ ವಿದೇಶಿ ನೀತಿಯನ್ನು ವಿವರಿಸಿದರು. 2004 ರಲ್ಲಿ ವಾಜಪೇಯಿಯವರಿಗೆ ಎರಡನೇ ಬಾರಿ ಅಧಿಕಾರ ನೀಡದೇ ಮಾಡಿದ ತಪ್ಪು 2019 ರಲ್ಲಿ ಮರುಕಳಿಸಬಾರದು ಎಂಬ ಎಚ್ಚರಿಕೆಯ ಕರೆ ನೀಡಿದರು.

ಅತಿಥಿಗಳ ಮುಖ್ಯಭಾಷಣಕ್ಕೂ ಮೊದಲು ವಿಘ್ನೇಶ್ ಕಾಮತ್ ಅವರು ನಮೋ ಭಾರತ ಸಂಘಟನೆಯ ಪರವಾಗಿ ಕಾರ್ಯಕ್ರಮದ ಕುರಿತ ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ರಾಷ್ಟ್ರ ಸಂತ ವಾಜಪೇಯಿಯವರ ಆದರ್ಶ ವ್ಯಕ್ತಿತ್ವದ ಅವಲೋಕನ ಹಾಗೂ ರಾಜಕೀಯ ಇತಿಹಾಸದಲ್ಲಿ ದೇಶ ಕಂಡ ಆಮೂಲಾಗ್ರ ಬದಲಾವಣೆ ಹಾಗೂ ಅವರ ಆಶಾವಾದದ ಕುರಿತು ಸಮಗವಾದ್ರ ನುಡಿನಮನವನ್ನು ಸಲ್ಲಿಸಿದರು. ಸಂಘಟನೆಯ ಕಾರ್ಯಕರ್ತರಾದ ಲಕ್ಷ್ಮೀಶ ಕೆ. ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲ ನಾಗರಿಕರು , ಅಟಲ್ ಜಿ ಅಭಿಮಾನಿಗಳು ಹಾಗೂ ಸಂಘಟನೆಯ ಕಾರ್ಯಕರ್ತರು ಶಾಂತಿ ಮಂತ್ರವನ್ನು ಸಾಮೂಹಿಕವಾಗಿ ಹೇಳಿ ಅಗಲಿದ ಆತ್ಮಕ್ಕೆ ಶಾಂತಿ ಕೋರಿದರು. ನಂತರ ಎಲ್ಲರೂ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಮಾಡುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top