ಬೆಳ್ತಂಗಡಿ : ರಾಜ್ಯ ಸರಕಾರ ಬಡವರ ಶೋಷಿತರ ಪರವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು. ಚುನಾವಣೆಯಲ್ಲಿ ಗೆದ್ದವರು ಗೆಲ್ಲಿಸಿದ ಜನರ ಗೌರವವನ್ನು ಹಾಗೂ ಪಕ್ಷದ ಗೌರವವನ್ನು ಉಳಿಸುವ ರೀತಿಯಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದ್ದಾರೆ.
ಅವರು ಮಂಗಳವಾರ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಬೆಂಬಲಿತರಾಗಿ ವಿಜೇತರಾದ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಗ್ರಾಮದ ಅಭಿವೃದ್ಧಿಯ ಬಗ್ಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. ಭ್ರಷ್ಟಾಚಾರಕ್ಕೆ ಆಸ್ಪದ ನೀಡದಂತೆ ಕಾರ್ಯನಿರ್ವಹಿಸಿ. ಕೆಲವೊಂದು ಗ್ರಾಮ ಪಂಚಾಯತ್ಗಳಲ್ಲಿ ಅಪಪ್ರಚಾರಗಳಿಂದಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಸೋಲು ಕಂಡಿರಬಹುದು. ಆದರೆ ಇದು ಶಾಶ್ವತ ಸೋಲಲ್ಲ. ಮುಂದೆ ಉತ್ತಮ ಕೆಲಸ ನಿರ್ವಹಿಸಿ ತಾಲೂಕಿನಲ್ಲೇ ಮಾದರಿ ಗ್ರಾಮ ಪಂಚಾಯತ್ ಮಾಡುವ ಪಣತೊಟ್ಟು ವಿಜೇತ ಅಭ್ಯರ್ಥಿಗಳು ಪ್ರಯತ್ನಿಸಬೇಕು.
ರಾಜ್ಯದಲ್ಲಿ ಆಡಳಿತ ನಡೆಸುವ ಕಾಂಗ್ರೆಸ್ ಸರಕಾರ ಉಚಿತ ಅಕ್ಕಿ ಹಾಗೂ ಕಡಿಮೆ ಬೆಲೆಯಲ್ಲಿ ಅಕ್ಕಿ ನೀಡುವುದರ ಮೂಲಕ ಬಡವರಿಗೆ ಬಡತನವಿರಬಾರದು ಎಂದು ತೋರಿಸಿಕೊಟ್ಟಿದೆ. ದೇಶದ ಯಾವ ರಾಜ್ಯದಲ್ಲೂ ಇಲ್ಲದ ಯೋಜನೆ ಇದಾಗಿದ್ದು ಇದನ್ನು ಸಹಿಸದ ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿದೆ. ಕಾಂಗ್ರೆಸ್ ಪಕ್ಷವನ್ನೇ ನಿರ್ನಾಮ ಮಾಡುತ್ತೇವೆ ಎಂದು ಹೊರಟಿರುವ ಶಕ್ತಿಗಳಿಗೆ ಮುಂದಿನ ತಾ. ಪಂ., ಜಿ. ಪಂ. ಚುನಾವಣೆಗಳಲ್ಲಿ ನಮ್ಮ ಕಾರ್ಯಕರ್ತರು ತಕ್ಕ ಉತ್ತರ ನೀಡಬೇಕಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅಧ್ಯಕ್ಷತೆವಹಿಸಿ ಮಾತನಾಡಿ, ಕಾರ್ಯಕರ್ತರು ಪಕ್ಷದ ಬಲ. ಪಕ್ಷವನ್ನು ಇನ್ನಷ್ಟು ಸಶಕ್ತವಾಗಿ ಕಟ್ಟಲು ನಮ್ಮೊಳಗಿನ ಆಂತರಿಕ ಭೇದಗಳನ್ನು ಮರೆತು ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ. ಪಕ್ಷದೊಳಗಿನ ಕೆಲ ಸಮಸ್ಯೆಗಳಿಂದಾಗಿ ಕೆಲವು ಪಂಚಾಯತ್ಗಳಲ್ಲಿ ಪಕ್ಷದ ಹಿನ್ನಡೆಯಾಗಿದೆ. ಮುಂಬರುವ ದಿನಗಳಲ್ಲಿ ಇದನ್ನು ಸರಿಪಡಿಸಿಕೊಂಡು ಮುಂದುವರಿಯುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರ ಗೌಡ, ಕೆಪಿಸಿಸಿ ಸದಸ್ಯ ಶ್ರೀನಿವಾಸ್ ಕಿಣಿ, ಎಪಿಎಂಸಿ ಅಧ್ಯಕ್ಷ ಧರಣೇಂದ್ರ ಕುಮಾರ್, ಜಿ.ಪಂ. ಸದಸ್ಯ ಶೈಲೇಶ್ ಕುಮಾರ್, ತಾ.ಪಂ. ಸದಸ್ಯ ಧರ್ಣಪ್ಪ ಪೂಜಾರಿ, ಪಕ್ಷದ ಮುಖಂಡರುಗಳಾದ ಶಾಹುಲ್ ಹಮೀದ್, ಈಶ್ವರ ಭಟ್, ಹರೀಶ್ ಬಂದಾರು, ಚಂದು ಎಲ್., ಪದ್ಮ ಕುಮಾರ್, ಫಾರುಕ್, ಇಸುಬು, ಜೆಸಿಂತಾ ಮೋನಿಸ್ ಉಪಸ್ಥಿತರಿದ್ದರು. ವಿಜೇತ ಅಭ್ಯರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮುಗುಳಿ ನಾರಾಯಣ ರಾವ್ ಸ್ವಾಗತಿಸಿ, ನಾಮ್ದೇವ ರಾವ್ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.