ಮರಗಡಿದಡ್ಡಿ ಉತ್ತರ ಕನ್ನಡ ಜಿಲ್ಲೆಯ ಒಂದು ಅತೀ ಸಣ್ಣ ಹಳ್ಳಿ. ಹುಬ್ಬಳ್ಳಿಯಿಂದ ಸಿರ್ಸಿಗೆ ಹೋಗುವ ಬಸ್ಸು ಹತ್ತಿ, ಮುಂಡಗೋಡದ ನಂತರದ ಕಾತೂರು ಎಂಬ ಗ್ರಾಮದಲ್ಲಿ ಇಳಿದು ಅಲ್ಲಿಂದ 3 ಕಿ.ಮಿ. ದೂರವನ್ನು ಕಾಡಿನಲ್ಲಿ ಕ್ರಮಿಸಿದರೆ ಮರಗಡಿದಡ್ಡಿ ಸಿಗುತ್ತದೆ. ಮೀಸಲು ಅರಣ್ಯಕ್ಕೆ ಲಗತ್ತಾಗಿರುವ ಗ್ರಾಮ ಇದು. ಇರುವುದು ಮನೆಗಳು 21, ಜನಸಂಖ್ಯೆಯೋ ಕೇವಲ 100. ಈ ಊರಿನಲ್ಲಿರುವವರು ಗೌಳಿ ಜನಾಂಗದವರು. ತಾವು ಸಾಕಿರುವ ನಾಟಿ ಹಸು ಮತ್ತು ಎಮ್ಮೆಗಳನ್ನು ಬೆಳ್ಳಂಬೆಳಗ್ಗೆ ಕಾಡಿಗೆ ಹೊಡೆದು ಹೋದರೆಂದರೆ ಬರುವುದೇ ಸೂರ್ಯ ಮುಳುಗುವ ವೇಳೆಗೆ. ಹಾಲು ಮಾರುವುದರೊಂದಿಗೆ ಹಾಲಿನಿಂದ ಖೋವಾ ಮಾಡಿ ಮಾರುವುದು ಮತ್ತು ತಮ್ಮ ದನ, ಎಮ್ಮೆಗಳು ಹಾಕಿದ ಸಗಣಿಯನ್ನು ಒಟ್ಟು ಮಾಡಿ ಗೊಬ್ಬರವನ್ನು ಅಡಿಕೆ ತೋಟಗಳಿಗೆ ಮಾರುವುದು ಇವರ ಜೀವನೋಪಾಯ.ಮಳೆಗಾಲ ಬಂತೆಂದರೆ ಮಳೆಯೋ ಮಳೆ. ಊರೆಲ್ಲಾ ಕೊಚ್ಚೆ ಕೊಚ್ಚೆ. ಕಳೆದ ವರ್ಷ ಊರಿನ ನೆಲ ಒಂದಿಷ್ಟು ಸಿಮೆಂಟು ಕಂಡಿದೆ. ಊರಿನ ಮಕ್ಕಳು ಒಂದಿಷ್ಟು ವರ್ಷ ಶಾಲೆಗೆ ಹೋಗಿ ನಂತರ ಶಾಲೆ ಬಿಟ್ಟು ಬಂದು ಊರು ಸೇರುತ್ತಿದ್ದರು. ಈಗ ಊರಿಗೆ ಬರದೆ ಗೋವಾಕ್ಕೆ ಹೋಗುತ್ತಾರೆ.
ಈ ಹಳ್ಳಿಯಲ್ಲಿ ಒಂದು ಸರ್ಕಾರಿ ಶಾಲೆ. ಶಾಲೆಯಲ್ಲಿ 16 ವಿದ್ಯಾರ್ಥಿಗಳು. ಆ ಶಾಲೆಗೊಬ್ಬ ಉಪಾಧ್ಯಾಯ ಹನುಮಂತ ಚೊಟಣ್ಣನವರ. ನಿಮಗೆ ತಿಳಿದಿರುವಂತೆ ಎಲ್ಲಾ ಹಳ್ಳಿ ಮೇಷ್ಟ್ರುಗಳೂ ಪಕ್ಕದ ದೊಡ್ಡ ಊರಿನಲ್ಲಿ ಮನೆಮಾಡಿ ಹೆಂಡತಿ ಮಕ್ಕಳನ್ನು ಅಲ್ಲಿಟ್ಟು ಮೋಟರ್ ಬೈಕ್ ಹತ್ತಿ ಹಳ್ಳಿ ಶಾಲೆಗೆ ಹೋಗಿ ಬರುತ್ತಾರೆ. ಹಳ್ಳಿಯಲ್ಲಿ ಹುಟ್ಟಿ ಬೆಳೆದ ಮೇಷ್ಟ್ರುಗಳೂ ಸಹ ಅಪ್ಪ, ಅಮ್ಮ, ತಮ್ಮ ತಂಗಿ ಎಲ್ಲಾ ಹಳ್ಳಿಯಲ್ಲಿದ್ದರೂ ಇವರು ತಾಲೂಕು ಕೇಂದ್ರದಲ್ಲಿ ಮನೆ ಮಾಡಿ ತಮ್ಮ ಶಾಲೆಗೆ ಓಡಾಡುತ್ತಾರೆ. ಕೇಳಿದರೆ ತಮ್ಮ ಮಕ್ಕಳ ‘ಎಜುಕೇಶನ್’ ಹಳ್ಳಿಯಲ್ಲಿ ಸರಿಯಾದ ವಾತಾವರಣ ಇಲ್ಲದಿರುವುದು ಮುಂತಾದ ನಂಬಲೇ ಬೇಕಾದ ಕಾರಣ ಹೇಳುತ್ತಾರೆ. ಆದರೆ ಹನುಮಂತ ಎಂಬ ಈ ನಮ್ಮ ‘ದಡ್ಡ’ ಹಳ್ಳಿ ಮೇಷ್ಟ್ರು ಮರಗಡಿದಡ್ಡಿಯಲ್ಲೇ ಗೌಳಿಗರಂತೆ ತಾನೇ ಒಂದು ಪುಟ್ಟ ಮಣ್ಣಿನ ಮನೆ ಕಟ್ಟಿಕೊಂಡು ಅಲ್ಲೇ 10 ವರ್ಷಗಳಿಂದ ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದಾರೆ. ಮನೆ ಮತ್ತು ಶಾಲೆ ಅಕ್ಕ-ಪಕ್ಕದಲ್ಲೇ ಇದೆ. ಮನೆ ಕಟ್ಟಲು ಸುಮಾರು 20 ಸಾವಿರ ಖರ್ಚಾಗಿರಬಹುದು ಎನ್ನುತ್ತಾರೆ. ಇವರ ಹೆಂಡತಿ ಮೀನಾಕ್ಷಿ ತನ್ನ ಗಂಡ ಸರ್ಕಾರಿ ಕೆಲಸದ ಮೇಲೆ ಕಛೇರಿಗೆ ಹೋದಾಗ ಮಕ್ಕಳಿಗೆ ರಜಾ ಘೋಷಿಸಿ ಓಡಿಸದೆ ತಾನೇ ಪಾಠ ಮಾಡುತ್ತಾರೆ. ಬಿಸಿ ಅಡಿಗೆಯವಳು ಬರದಿದ್ದರೆ ತಾನೇ ಅಡಿಗೆ ಮಾಡಿ ಊಟ ಬಡಿಸುತ್ತಾರೆ. ಅವರ ಎರಡು ಮಕ್ಕಳು ಧೃತನ್ ಮತ್ತು ಧೃತಿ ಅದೇ ಶಾಲೆಯಲ್ಲಿ ಓದುತ್ತಿವೆ. ಎಲ್ಲಾ ಉಪಾಧ್ಯಾಯರು ‘ನಲಿ ಕಲಿ’ ಪದ್ಧತಿ ಸರಿಯಿಲ್ಲ ಎಂದು ದೂರು ಹೇಳುತ್ತಿದ್ದರೆ ಈತ ನಲಿ ಕಲಿ ಚೆನ್ನಾಗಿದೆ ಎನ್ನುತ್ತಾ ಶಾಲೆಯ ಗೋಡೆಯ ತುಂಬಾ ತಾನೇ ಅನೇಕ ಚಿತ್ರ ಪಟಗಳನ್ನು ಬರೆದು ತೂಗಿಹಾಕಿದ್ದಾರೆ.
ಹಳ್ಳಿಯಲ್ಲಿ ಏನು ಮಾಡುತ್ತೀರಿ ಎಂದರೆ ಶಾಲೆ ಕೆಲಸವೇ ಮುಗಿಯುವುದಿಲ್ಲ ಸಾರ್ ಎನ್ನುತ್ತಾರೆ. ಮನೆಗೆ ಬಂದು ಬೇಕಾದಷ್ಟು ಓದುತ್ತಾರೆ. ಮನೆಯ ಮುಂದೆ ತೋಟ ಮಾಡುತ್ತಾರೆ. ಹಳ್ಳಿಯಲ್ಲೇ ಇರುವುದರಿಂದ ನನ್ನ ಕೆಲಸಕ್ಕೆ ನ್ಯಾಯ ಒದಗಿಸುತ್ತಿದ್ದೇನೆ ಎಂಬ ಭಾವ ನನ್ನದಾಗಿದೆ. ಸಂಸಾರದೊಂದಿಗೆ ಇರಲು ಬೇಕಾದಷ್ಟು ಸಮಯ ದೊರಕುತ್ತಿದೆ. ಜೊತೆಗೆ ನನ್ನ ಸಂಬಳದ ಹಣದಲ್ಲಿ ಸುಮಾರು ಅರ್ಧಭಾಗ ಉಳಿಯುತ್ತಿದೆ ಎನ್ನುತ್ತಾರೆ. ಮಿಕ್ಕ ಮೇಷ್ಟ್ರುಗಳು ಪಕ್ಕದ ಟೌನ್ ಗೆ ಹೋಗಿ ಟಿ.ವಿ ನೋಡುತ್ತಾ, ಚೀಟಿ ನಡೆಸುತ್ತಾ ಕಾಲಕಳೆದರೆ ನಮ್ಮ ಈ ‘ದಡ್ಡ’ ಹನುಮ್ಯ , ಸಾಲಿ ಸಾಲಿ ಎನ್ನುತ್ತಾನೆ. ಏನು ಮಾಡುವುದು ಇವನಿಗೆ. ಈತನಿಗೆ ತಲೆ ಕೆಟ್ಟಿದೆ ಎಂದರೆ ಈತನ ಹೆಂಡತಿಯೂ ಅವನ ಹಾಗೇ ಆಡುತ್ತಾಳಲ್ಲ ಏನು ಮಾಡುವುದು? ಇವರ ಮಕ್ಕಳೂ ಹಳ್ಳಿ ಮಕ್ಕಳೊಂದಿಗೆ ಹಳ್ಳಿಯವರಾಗಿ ಬೆಳೆಯುತ್ತಿವೆ.
ಈ ಸಂಸಾರವನ್ನು ಕಳೆದ ವಾರ ನೋಡಿ ಬಹಳ ಸಂತೋಷವಾಯಿತು. ನಮ್ಮ ಮಿಕ್ಕೆಲ್ಲಾ ಮೇಷ್ಟ್ರುಗಳೂ, ಸರ್ಕಾರಿ ನೌಕರರೂ ನಮ್ಮ ಚೋಟಣ್ಣನವರ ರೀತಿ ದಡ್ಡರಾಗುವುದು ಯಾವಾಗ?
ಸುದ್ದಿ ಮೂಲ: ಶ್ರೀ ಸಂತೋಷ ಕೌಲಗಿ. ಮೇಲುಕೋಟೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.