ಬೆಂಗಳೂರು : ಭಯೋತ್ಪಾದಕ ಸಂಘಟನೆಗಳಾದ ಲಷ್ಕರೆ ತೊಯಿಬಾ ದಂತಹ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಕೋಮುವಾದ ಸಂಘಟನೆಗಳಾದ ಪಿ.ಎಫ್.ಐ ಮತ್ತು ಕೆ.ಎಫ್.ಡಿ. ಸಂಘಟನೆಯ ಕಾರ್ಯಕರ್ತರ ಮೇಲಿನ 40 ಕ್ಕೂ ಹೆಚ್ಚು ಮೊಕದ್ದಮೆಗಳನ್ನು ಹಿಂಪಡೆದಿರುವ ರಾಜ್ಯ ಸರಕಾರದ ನಿರ್ಧಾರವನ್ನು ಬಜರಂಗದಳ ಅತ್ಯಂತ ಉಗ್ರವಾಗಿ ಖಂಡಿಸುತ್ತದೆ. ಇದು ಭಾರತದ ಸಂವಿಧಾನ ಮತ್ತು ಕಾನೂನಿಗೆ ಮಾಡಿದ ಘೋರ ಅಪಮಾನವಾಗಿದೆ. ಮಾತ್ರವಲ್ಲದೆ ಮುಸಲ್ಮಾನರ ಮತಕ್ಕಾಗಿ ಕಾಂಗ್ರೆಸ್ ಸರಕಾರವು ನಡೆಸುತ್ತಿರುವ ತುಷ್ಟೀಕರಣದ ರಾಜಕಾರಣಕ್ಕೆ ಮತ್ತೊಂದು ನಿದರ್ಶನವಾಗಿದೆ ಎಂದು ಬಜರಂಗದಳ ರಾಜ್ಯ ಸಂಚಾಲಕರಾದ ಸೂರ್ಯನಾರಾಯಣ ಹೇಳಿದ್ದಾರೆ.
ಈಗಾಗಲೇ ಈ ಎರಡು ಸಂಘಟನೆಗಳು ಕರ್ನಾಟಕ ಮತ್ತು ಕೇರಳದಲ್ಲಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದೆ ಎಂಬುದು ಸಾಬಿತಾಗಿದೆ. 2009 ರಲ್ಲಿ ಹುಣಸೂರಿನ ಇಬ್ಬರು ಅಮಾಯಕ ವಿದ್ಯಾರ್ಥಿಗಳನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆಯಿಟ್ಟು ಹತ್ಯೆಗೈದಿರುವುದು, ಮೈಸೂರಿನ ಕ್ಯಾತೆಮಾರನಹಳ್ಳಿಯಲ್ಲಿ ನಡೆದ ಕೋಮುಗಲಭೆ, ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ನಡೆದ ಶಾಲೆ ವಿಧ್ವಂಸದಂತಹ ಕೃತ್ಯ, ಶಿವಮೊಗ್ಗದಲ್ಲಿ ನಡೆದ ಕೋಮುಗಲಭೆ ಮುಂತಾದ ಪ್ರಕರಣಗಳಲ್ಲಿ ಈ ಸಂಘಟನೆಗಳು ಸಕ್ರಿಯವಾಗಿ ಪಾಲ್ಗೊಂಡು ಲಕ್ಷಾಂತರ ರೂ.ಗಳ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡಿದ್ದಲ್ಲದೆ ಅಮಾಯಕ ಹಿಂದುಗಳ ಮೇಲೆ ಹಲ್ಲೆ ಮತ್ತು ಹತ್ಯೆ ಮಾಡಿರುವುದರ ಹಿಂದೆ ಈ ಸಂಘಟನೆಗಳ ಕೈವಾಡವಿರುವುದು ಸಾಬೀತಾಗಿದೆ. ಶಿವಮೊಗ್ಗದಲ್ಲಂತೂ ಪಾಕಿಸ್ಥಾನ ಜಿಂದಾಬಾದ್ ಘೋಷಣೆ ಹಾಕಿದ್ದಲ್ಲದೇ ಪೊಲೀಸರ ಮೇಲೆ ಕಲ್ಲು ತೂರಿ ಹಲ್ಲೆ ಮಾಡಲಾಗಿತ್ತು.
ಇಂತಹ ಹತ್ತಾರು ಉದಾಹರಣೆಗಳಿದ್ದರೂ ಕೂಡ ಪರಾಮರ್ಶೆ ಮಾಡದೆ ರಾಜ್ಯ ಸರಕಾರವು ಮೊಕದ್ದಮೆಗಳನ್ನು ಹಿಂಪಡೆದಿರುವುದು ನಿಜವಾಗಿಯೂ ತುಘಲಕ್ ಆಡಳಿತವನ್ನು ನಡೆಸುವಂತಿದೆ. ರಾಷ್ಟ್ರದ್ರೋಹಿ ಸಂಘಟನೆಗಳಿಗೆ ಬೆಂಬಲ, ದೇಶಭಕ್ತ ಸಂಘಟನೆಗಳಿಗೆ ಕಿರುಕುಳ ಹಾಗೂ ಗೂಂಡಾ ಕಾಯಿದೆ ಇದು ಕಾಂಗ್ರೆಸ್ ಸರಕಾರದ ಕಾರ್ಯವೈಖರಿಯಾಗಿದೆ.
ಒಲೈಕೆಗೊಂದು ಮಿತಿಯಿರಬೇಕು. ಕೇವಲ ಮುಸಲ್ಮಾನರ ಮತಗಳಿಂದ ಮಾತ್ರ ಕಾಂಗ್ರೆಸ್ ಅಧಿಕಾರಕ್ಕೆ ಬಂದಂತೆ ವರ್ತಿಸುವುದು ಸರಿಯಲ್ಲ. ಉದ್ಧಟತನದಿಂದ ಓಲೈಕೆ ರಾಜಕಾರಣ ಮಾಡಿ ಕಾನೂನನ್ನು ದುರುಪಯೋಗಗೊಳಿಸಿದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು.
ಈ ಕೂಡಲೇ ಸರಕಾರವು ತನ್ನ ನಿಲುವನ್ನು ಬದಲಿಸಬೇಕು ಹಾಗೂ ಅಷ್ಟೂ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಕಾನೂನು ರೀತಿಯಲ್ಲಿ ತಕ್ಕ ಶಿಕ್ಷೆಯಾಗಬೇಕು. ಸರಿಯಾದ ರೀತಿಯಲ್ಲಿ ಆಡಳಿತ ನಡೆಸಲು ಬರುವುದಿಲ್ಲವೆಂದಲ್ಲಿ ಮಾನ್ಯ ಮುಖ್ಯಮಂತ್ರಿಗಳು ರಾಜೀನಾಮೆ ನೀಡಲಿ.
ಸರಕಾರದ ಈ ನಿಲುವನ್ನು ಖಂಡಿಸಿ ಜೂನ್ 04,05 ಮತ್ತು 06 ರಂದು ರಾಜ್ಯಾದ್ಯಂತ ಸಾಂಕೇತಿಕ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.