
ನವದೆಹಲಿ: ಪಾಕಿಸ್ಥಾನದ ಮಾಜಿ ಪ್ರಧಾನಿ ಮತ್ತು ಕ್ರಿಕೆಟಿಗ ಇಮ್ರಾನ್ ಖಾನ್ ಅವರ ಎಲ್ಲಿದ್ದಾರೆ ಎಂಬ ನಿಗೂಢತೆ ಇನ್ನಷ್ಟು ಆಳವಾಗುತ್ತಿದೆ. ಈ ನಡುವೆ ʼಗುಲಾಮಗಿರಿಗಿಂತ ಸಾವಿಗೆ ಆದ್ಯತೆ ನೀಡುತ್ತೇನೆʼ ಎಂದು ಅವರು ವರ್ಷದ ಹಿಂದೆ ಒಂದು ಲೇಖನದಲ್ಲಿ ಬರೆದಿದ್ದ ಸಾಲುಗಳು ಈಗ ಸದ್ದು ಮಾಡಲಾರಂಭಿಸಿವೆ.
ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ನ ಸಂಸ್ಥಾಪಕನಾಗಿರುವ 73 ವರ್ಷದ ಇಮ್ರಾನ್ ಖಾನ್ ಅವರು ಹಲವಾರು ರಾಜಕೀಯ ಪ್ರೇರಿತ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿ ಆಗಸ್ಟ್ 2023 ರಿಂದ ಜೈಲಿನಲ್ಲಿದ್ದಾರೆ. ಅಂದಿನಿಂದ ಅವರನ್ನು ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಇರಿಸಲಾಗಿದೆ. ಖಾನ್ ಅವರ ಕುಟುಂಬಕ್ಕೆ ಕಳೆದ ಒಂದು ತಿಂಗಳಿನಿಂದ ಅವರನ್ನು ಭೇಟಿಯಾಗಲು ಅವಕಾಶ ನೀಡಲಾಗುತ್ತಿಲ್ಲ, ಆದರೆ ಜೈಲು ಅಧಿಕಾರಿಗಳು ಅವರು ಆರೋಗ್ಯವಾಗಿದ್ದಾರೆ ಎಂದು ಹೇಳುತ್ತಿದ್ದಾರೆ.
ಮೇ 2, 2024 ರಂದು ಬ್ರಿಟಿಷ್ ಪತ್ರಿಕೆ ದಿ ಟೆಲಿಗ್ರಾಫ್ನಲ್ಲಿ ಪ್ರಕಟವಾದ ಲೇಖನದಲ್ಲಿ ಖಾನ್ ಅವರು, ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ನೇತೃತ್ವದ ಪಾಕಿಸ್ತಾನದ ಮಿಲಿಟರಿ ಸ್ಥಾಪನೆಯು ಪಾಕಿಸ್ತಾನದ ರಾಜಕೀಯದಿಂದ ನನ್ನನ್ನು ನಿರ್ಮೂಲನೆ ಮಾಡಲು ಎಲ್ಲಾ ತಂತ್ರಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೇ ನನಗೇನಾದರು ಆದರೆ ಮುನೀರ್ ಅವರೇ ಜವಾಬ್ದಾರರು ಮತ್ತು ಗುಲಾಮಗಿರಿಗಿಂತ ಸಾವಿಗೆ ಆದ್ಯತೆ ನೀಡುತ್ತೇನೆ ಎಂದು ಬರೆದಿದ್ದರು.
“ಸೇನಾ ವ್ಯವಸ್ಥೆಯು ನನ್ನ ವಿರುದ್ಧ ಸಾಧ್ಯವಾದದ್ದನ್ನೆಲ್ಲ ಮಾಡಿದೆ. ಅವರಿಗೆ ಈಗ ಉಳಿದಿರುವುದು ನನ್ನನ್ನು ಕೊಲ್ಲುವುದೊಂದೇ. ನನಗೆ ಅಥವಾ ನನ್ನ ಪತ್ನಿಗೆ ಏನಾದರೂ ಸಂಭವಿಸಿದರೆ, ಜನರಲ್ ಅಸಿಮ್ ಮುನೀರ್ ಹೊಣೆಗಾರನಾಗುತ್ತಾನೆ ಎಂದು ನಾನು ಸಾರ್ವಜನಿಕವಾಗಿ ಹೇಳಿದ್ದೇನೆ. ಆದರೆ ನನ್ನ ನಂಬಿಕೆ ಬಲವಾಗಿರುವುದರಿಂದ ನಾನು ಹೆದರುವುದಿಲ್ಲ. ಗುಲಾಮಗಿರಿಗಿಂತ ನಾನು ಸಾವನ್ನು ಬಯಸುತ್ತೇನೆ” ಎಂದು ಖಾನ್ ಬರೆದಿದ್ದಾರೆ.
ಸೆರೆವಾಸದಲ್ಲಿ ಅವರ ಸಾವು ಸಂಭವಿಸಿದೆ ಎಂಬ ವದಂತಿಗಳು ಈಗ ಹರಡುತ್ತಿದ್ದಂತೆ, ಲೇಖನದಲ್ಲಿನ ಅವರ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಖಾನ್ ಅವರ ಬೆಂಬಲಿಗರು ಅಡಿಯಾಲ ಜೈಲಿನ ಹೊರಗೆ ಧರಣಿ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಅವರನ್ನು ಭೇಟಿಯಾಗಲು ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಇಮ್ರಾನ್ ಖಾನ್ ಮಗ ಕಾಸಿಮ್ ಖಾನ್ ತಮ್ಮ ತಂದೆಯ ಬಿಡುಗಡೆಗೆ ಒತ್ತಾಯಿಸಿದ್ದಾರೆ. “ಕಳೆದ ಆರು ವಾರಗಳಿಂದ, ಅವರನ್ನು ಸಂಪೂರ್ಣ ಪ್ರತ್ಯೇಕತೆಯ ವಾತಾವರಣದಲ್ಲಿ ಡೆತ್ ಸೆಲ್ನಲ್ಲಿ ಏಕಾಂಗಿಯಾಗಿ ಇರಿಸಲಾಗಿದೆ. ಸ್ಪಷ್ಟ ನ್ಯಾಯಾಲಯದ ಆದೇಶಗಳ ಹೊರತಾಗಿಯೂ, ಅವರ ಸಹೋದರಿಯರು ಅವರನ್ನು ಭೇಟಿಯಾಗುವುದರಿಂದ ನಿರ್ಬಂಧಿಸಲಾಗಿದೆ. ಯಾವುದೇ ಫೋನ್ ಕರೆಗಳಿಲ್ಲ, ಯಾವುದೇ ಸಭೆಗಳಿಲ್ಲ, ಮತ್ತು ಅವರ ಯೋಗಕ್ಷೇಮದ ಸುದ್ದಿಗಳಿಲ್ಲ. ನನ್ನ ಸಹೋದರ ಮತ್ತು ನಾನು ನಮ್ಮ ತಂದೆಯನ್ನು ಯಾವುದೇ ರೀತಿಯಲ್ಲಿ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ” ಎಂದು ಕಾಸಿಮ್ ಬರೆದಿದ್ದಾರೆ.
“ಈ ನಿಗೂಢತೆ ಯಾವುದೇ ಭದ್ರತಾ ಪ್ರೋಟೋಕಾಲ್ನ ಭಾಗವಲ್ಲ. ಇದು ತನ್ನ ತಂದೆಯ ಸ್ಥಿತಿಯನ್ನು ಮರೆಮಾಚುವ ಉದ್ದೇಶಪೂರ್ವಕ ಪ್ರಯತ್ನ. ನನ್ನ ತಂದೆಯ ಸುರಕ್ಷತೆ ಮತ್ತು ಈ ಅಮಾನವೀಯ ನಡವಳಿಕೆಯ ಪ್ರತಿಯೊಂದು ಪರಿಣಾಮಕ್ಕೂ ಪಾಕಿಸ್ತಾನಿ ಸರ್ಕಾರ ಮತ್ತು ಅದರ ಯಜಮಾನರು ಸಂಪೂರ್ಣ ಕಾನೂನು, ನೈತಿಕ ಮತ್ತು ಅಂತರರಾಷ್ಟ್ರೀಯ ಜವಾಬ್ದಾರಿಯನ್ನು ಹೊರುತ್ತಾರೆ ಎಂಬುದನ್ನು ಸ್ಪಷ್ಟಪಡಿಸಬೇಕು” ಎಂದಿದ್ದಾರೆ.
ಅವರು ಅಂತರರಾಷ್ಟ್ರೀಯ ಸಮುದಾಯ ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ತಮ್ಮ ತಂದೆ ಜೀವಂತವಾಗಿದ್ದಾರೆ ಎಂದು ದೃಢೀಕರಿಸಬೇಕು, ನ್ಯಾಯಾಲಯದ ಆದೇಶದ ಪ್ರಕಾರ ಅವರನ್ನು ಸಂಪರ್ಕಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



