ಬೆಂಗಳೂರು: ಕರ್ನಾಟಕ ಗ್ರಾಮೀಣ ಬ್ಯಾಂಕ್ ದಕ್ಷಿಣ ಭಾರತದ ಅತಿದೊಡ್ಡ ಗ್ರಾಮೀಣ ಬ್ಯಾಂಕ್ ಯಾವಾಗಲೂ ತನ್ನ ಗ್ರಾಹಕ ಸ್ನೇಹಿ ಉತ್ಪನ್ನಗಳನ್ನು ಹೊರತರುವಲ್ಲಿ ಮುಂಚೂಣಿಯಲ್ಲಿರುವ ಬ್ಯಾಂಕ್. ಈಗ ಇದೇ ಬ್ಯಾಂಕ್ ಗ್ರಾಹಕರಿಗೆ ಸುಲಭವಾಗಿ ವಹಿವಾಟು ನಡೆಸಲು ಮತ್ತೊಂದು ಸೇವೆಯನ್ನು ಹೊರತಂದಿದೆ. ನಬಾರ್ಡ್ನ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ರಮೇಶ್ ಅವರು ಕರ್ನಾಟಕ ಗ್ರಾಮೀಣ ಬ್ಯಾಂಕ್ನ 523 ಶಾಖೆಗಳಲ್ಲಿ “ಕ್ಷಣದಲ್ಲಿ ಹಣ” ಎಂಬ ಅತ್ಯಂತ ನವೀನ ಮತ್ತು ಗ್ರಾಹಕ ಸ್ನೇಹಿ ಮೈಕ್ರೋ ಎಟಿಎಂ ಬಿಡುಗಡೆ ಮಾಡಿದರು.
ಹೊಸ ಯೋಜನೆಯ ಕುರಿತು ತಿಳಿಸಿದ ರಮೇಶ್ ಗ್ರಾಹಕರಿಗೆ ತಂತ್ರಜ್ಞಾನ ಸಕ್ರಿಯಗೊಳಿಸಿದ ಸೇವೆಗಳನ್ನು ಉತ್ತೇಜಿಸುವಲ್ಲಿ ಬ್ಯಾಂಕ್ನ ಪ್ರಯತ್ನಗಳನ್ನು ಶ್ಲಾಘಿಸಿದರು. ಸೋಮಶೇಖರ, ಜನರಲ್ ಮ್ಯಾನೇಜರ್ ಅವರು ಕ್ಷಣದಲ್ಲಿ ಹಣ ಯೋಜನೆಯ ಪ್ರಮುಖ ಲಕ್ಷಣಗಳನ್ನು ವಿವರಿಸಿದರು.
ಈ ಹೊಸ ಪ್ರಯತ್ನವು ಖಂಡಿತ ಸಾರ್ವಜನಿಕರಿಗೆ ಬ್ಯಾಂಕಿಂಗ್ ಸೇವೆಗಳ ವಿತರಣೆಯಲ್ಲಿ ಅಸಾಧಾರಣ ಬದಲಾವಣೆಯನ್ನು ಹೇಗೆಲ್ಲಾ ತರಲಿದೆ ಎಂಬುದನ್ನು ಅಧ್ಯಕ್ಷರಾದ ಶ್ರೀನಾಥ ಜೋಶಿ ವಿವರಿಸಿದರು. ಗ್ರಾಹಕರು ಕೇವಲ ತಮ್ಮ ಆಧಾರ್ ಸಂಖ್ಯೆಯನ್ನು ಬಳಸುವ ಮೂಲಕ ಖಾತೆಯಿಂದ ಹಣವನ್ನು ಹಿಂಪಡೆಯಬಹುದು ಮತ್ತು ಜಮಾ ಮಾಡಬಹುದು, ಮಿನಿ ಸ್ಟೇಟ್ಮೆಂಟ್ಗಳನ್ನು ರಚಿಸಬಹುದು, ಬ್ಯಾಲೆನ್ಸ್ ವಿಚಾರಣೆ ಮಾಡಬಹುದು. ಅಲ್ಲದೇ ಹಣದ ವರ್ಗಾವಣೆ ಕೂಡ ಸಾಧ್ಯವಿದ್ದು, ಆಧಾರ್ ಕಾರ್ಡಿನ ಅತ್ಯುತ್ತಮ ಬಳಕೆ ಇದಾಗಲಿದೆ.
ಈ ಸೇವೆಯಿಂದ ಅವರ ಪಾಸ್ಬುಕ್ಗಳು, ಚೆಕ್ ಪುಸ್ತಕಗಳು, ಹಿಂತೆಗೆದುಕೊಳ್ಳುವ ಚೀಟಿಗಳನ್ನು ತುಂಬುವ ತಾಪತ್ರಯ ತಪ್ಪಲಿದ್ದು ಅನಕ್ಷರಸ್ತ ಗ್ರಾಹಕನೂ ತನ್ನ ಹೆಬ್ಬೆರಳಿನ ಗುರುತನ್ನು ದೃಢೀಕರಿಸುವ ಮೂಲಕ ಎಲ್ಲಾ ಸೇವೆಗಳನ್ನು ಆನಂದಿಸಲು ಸಾಧ್ಯ. ಅಲ್ಲದೇ ಬಯೋಮೆಟ್ರಿಕ್ ದೃಢೀಕರಣವೇ ಮೂಲ ವಿಧಾನ ಆಗಿರುವುದರಿಂದ ಇದು ವಂಚನೆಗಳ ಸಾಧ್ಯತೆಯನ್ನು ನಿವಾರಿಸುತ್ತದೆ. ಏಕ ಗವಾಕ್ಷಿ ಪರಿಕಲ್ಪನೆಯಲ್ಲಿ ಕ್ಯಾಷಿಯರ್ ಮಾತ್ರ ವಹಿವಾಟು ನಡೆಸಬಹುದಾದ್ದರಿಂದ, ಇದು ಉದ್ಯೋಗಿಸ್ನೇಹಿ ಕೂಡ ಆಗಿದೆ. ತನ್ಮೂಲಕ ಬ್ಯಾಂಕಿನ ವ್ಯವಹಾರ ಸುಲಲಿತವಾಗಲಿದ್ದು ಹೆಚ್ಚಿನ ಉದ್ಯೋಗಿಗಳ ಅವಶ್ಯಕತೆ ಬೀಳುವುದಿಲ್ಲ. ಬಹುಮುಖ್ಯವಾಗಿ ಕಾಯುವ ಸಮಯವನ್ನು ಕಡಿಮೆ ಮಾಡುವ ಮೂಲಕ ಹೆಚ್ಚಿನ ಸೇವೆಯಲ್ಲಿ ತೊಡಗುವುದು ಅಂತಿಮ ಗುರಿಯಾಗಿದೆ. ಈ ಸಂಪೂರ್ಣ ಪರಿಕಲ್ಪನೆಯು ಆಧಾರ್ ಕಾರ್ಡಿನ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. ನಿಗದಿತ ವಹಿವಾಟುಗಳ ಹೊರತು ಪಡಿಸಿ ಗ್ರಾಹಕರಿಗೆ ಕ್ಷಣದಲ್ಲಿ ಹಣ ಸೇವೆಯು ಬಹುಮಟ್ಟಿಗೆ ಕಾಗದದ ಕೆಲಸವನ್ನು ತೆಗೆದುಹಾಕುತ್ತದೆ.
ಈ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ಅಧಿಕಾರಿಗಳಾದ ಶ್ರೀ ನಿಂಗೇಗೌಡ, ಶ್ರೀ ಅಜಿತನಾಥ್, ಶ್ರೀಮತಿ ಭಾಗ್ಯರೇಖಾ ಮತ್ತು ಶ್ರೀ ಸೋಮಶೇಖರ್ ಸೇರಿದಂತೆ ಹಲವರು ಹಾಜರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.