ಬೆಂಗಳೂರು: ವಿಜಯಪುರ ಮತ್ತು ಕೊಳ್ಳೇಗಾಲದ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸಾಧಿಸಿದ ಗೆಲುವು ಪಕ್ಷದ ಪರ ಜನರು ತೋರಿಸುತ್ತಿರುವ ಒಲವನ್ನು ವ್ಯಕ್ತಪಡಿಸಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗಳ ಫಲಿತಾಂಶ ಮತ್ತು ಕಲ್ಬುರ್ಗಿಯ ಸಮಾವೇಶದ ಸಂಖ್ಯೆಯು ಭಾರತ್ ಜೋಡೋ ಯಾತ್ರೆಗೆ ತಕ್ಕ ಉತ್ತರ ಕೊಟ್ಟಿದೆ ಎಂದು ತಿಳಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿಜಯಪುರ ನಗರ ಪಾಲಿಕೆ ಫಲಿತಾಂಶ ಹೊರಬಿದ್ದಿದೆ. ವಿಜಯಪುರ ಪಾಲಿಕೆಯಲ್ಲಿ ಬಿಜೆಪಿ ಗೆಲ್ಲುವುದು ಕಷ್ಟ ಎಂದು ವಿಶ್ಲೇಷಿಸಲಾಗುತ್ತಿತ್ತು. ಆದರೆ, ನಾವು ಬಹಳ ಸರಳ ಮತ್ತು ಸುಲಭವಾಗಿ ಗೆದ್ದಿದ್ದೇವೆ. ಒಟ್ಟು 35 ಸೀಟುಗಳಲ್ಲಿ 17 ಸೀಟನ್ನು ಬಿಜೆಪಿ ಗೆದ್ದಿದೆ ಎಂದು ತಿಳಿಸಿದರು. ಸರಳ ಬಹುಮತ ಲಭಿಸಿದ್ದು, ಇಲ್ಲಿ ಯಾವತ್ತೂ ಬಿಜೆಪಿ ಗೆದ್ದಿರಲಿಲ್ಲ ಎಂದರು. ಇದೊಂದು ಐತಿಹಾಸಿಕ ಗೆಲುವು ಎಂದು ತಿಳಿಸಿದರು.
ವಿಜಯಪುರದಲ್ಲಿ ನಾಳೆ ದೊಡ್ಡ ಪ್ರಮಾಣದ ಸಂಭ್ರಮಾಚರಣೆ ನಡೆಯಲಿದೆ. ಕಾರ್ಯಕರ್ತರು ಮತ್ತು ಪ್ರಮುಖರು ಈ ಕುರಿತು ಯೋಜಿಸಿದ್ದಾರೆ. ಕೊಳ್ಳೇಗಾಲದ ನಗರಸಭೆಯ 7 ಸೀಟುಗಳಿಗೆ ಉಪ ಚುನಾವಣೆ ನಡೆದಿದ್ದು, 6 ಸೀಟುಗಳನ್ನು ಬಿಜೆಪಿ ಗೆದ್ದಿದೆ. ಇದು ಬಿಜೆಪಿ ಪರ ವಾತಾವರಣದ ಸಂಕೇತ ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್ ಪಕ್ಷವು ವಿಜಯಪುರದಲ್ಲಿ ಬಹಳ ಪ್ರಯತ್ನ ಪಟ್ಟರೂ ಕೇವಲ 10 ಸೀಟುಗಳನ್ನು ಗೆದ್ದಿದೆ. ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರನ್ನು ಓಲೈಸುವ ಪಕ್ಷವಾಗಿ ಮುಂದುವರಿದಿದೆ. 10 ಸೀಟುಗಳಲ್ಲಿ 7 ಜನ ಮುಸ್ಲಿಮರು ಗೆದ್ದಿದ್ದಾರೆ. 35 ಸೀಟುಗಳಲ್ಲಿ 17 ಮುಸ್ಲಿಮರಿಗೆ ಅವರು ಟಿಕೆಟ್ ಕೊಟ್ಟಿದ್ದರು. ತುಷ್ಟೀಕರಣದ ಕಾಂಗ್ರೆಸ್ ಪಕ್ಷದ ಹಳೆಯ ನೀತಿಯನ್ನು ಅದು ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ವಿವರಿಸಿದರು.
ಬೆಳಗಾವಿ ಚುನಾವಣೆಯಲ್ಲಿ ಕಾಂಗ್ರೆಸ್ 15 ಸೀಟು ಗೆದ್ದಿದ್ದರೆ ಅದರಲ್ಲಿ 9 ಜನ ಮುಸ್ಲಿಮರಿದ್ದರು. ಗುಲ್ಬರ್ಗದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದ 27 ಸೀಟುಗಳಲ್ಲಿ 18 ಜನ ಮುಸ್ಲಿಮರು ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷ ಮುಸ್ಲಿಂ ಲೀಗ್ ಆಗುತ್ತಿದೆ ಎಂದು ತಿಳಿಸಿದರು.
ನವೆಂಬರ್ 20ರಂದು ಬಳ್ಳಾರಿಯಲ್ಲಿ ಎಸ್ಟಿ ಸಮಾವೇಶ ನಡೆಯಲಿದ್ದು, ಅಲ್ಲಿ 8ರಿಂದ 10 ಲಕ್ಷ ಜನರು ಭಾಗವಹಿಸಲಿದ್ದಾರೆ. ಕೇಂದ್ರದ ಪ್ರಮುಖ ನಾಯಕರನ್ನು ಆಹ್ವಾನಿಸಿದ್ದು, ಎರಡರಿಂದ ಮೂರು ದಿನಗಳಲ್ಲಿ ಸ್ಪಷ್ಟತೆ ಲಭಿಸಲಿದೆ ಎಂದರು. ದೀರ್ಘ ಕಾಲದಿಂದ ಬಾಕಿ ಇದ್ದ ಮೀಸಲಾತಿ ಹೆಚ್ಚಳದ ಬಳಿಕ ಎಸ್ಟಿ ಸಮುದಾಯದಲ್ಲಿ ಹೆಚ್ಚಿನ ಉತ್ಸಾಹ ಇದೆ. ಪ್ರಮುಖರ ಭೇಟಿ ವೇಳೆ ಹೆಚ್ಚಿನ ಪ್ರತಿಕ್ರಿಯೆ ಮತ್ತು ಉತ್ಸಾಹವೂ ವ್ಯಕ್ತವಾಗಿದೆ ಎಂದು ವಿವರಿಸಿದರು.
ಕೋರ್ಟ್ ಸೂಚನೆಯಂತೆ ಬಿಬಿಎಂಪಿ ಚುನಾವಣೆ ನಡೆಸಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಕಾಂಗ್ರೆಸ್ ಪಕ್ಷವು ತುಷ್ಟೀಕರಣಕ್ಕೆ ಒತ್ತು ಕೊಡುತ್ತಿದೆ. ಪಕ್ಷ ಜೋಡಣೆ ಕಾರ್ಯದ ಬಗ್ಗೆ ಗಮನ ಕೊಡಲಿ ಎಂದು ಸಲಹೆ ನೀಡಿದರು.
ಕಲ್ಬುರ್ಗಿಯಲ್ಲಿ ಒಬಿಸಿ ಸಮಾವೇಶ ಅದ್ಧೂರಿಯಾಗಿ ನಡೆದಿದೆ. ನಾವು 1.5 ಲಕ್ಷದಿಂದ 2 ಲಕ್ಷ ಜನರನ್ನು ನಿರೀಕ್ಷೆ ಮಾಡಿದ್ದರೂ 3 ಲಕ್ಷಕ್ಕಿಂತ ಹೆಚ್ಚು ಜನರು ಸೇರಿದ್ದಾರೆ. ಇದು ಅತ್ಯಂತ ವಿಶೇಷ ಎಂದು ತಿಳಿಸಿದರು. ನಮ್ಮ ಪ್ರಮುಖರ ಪ್ರವಾಸ ಮತ್ತು ಶ್ರಮ ಇದಕ್ಕೆ ಕಾರಣ ಎಂದು ಮೆಚ್ಚುಗೆ ಸೂಚಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.