ನವದೆಹಲಿ: ಚುನಾವಣಾ ಅವಧಿಯಲ್ಲಿ ಮತದಾರರಿಗೆ ಆಮಿಷವೊಡ್ಡುವ ರಾಜಕೀಯ ಪಕ್ಷಗಳ ಸಂಸ್ಕೃತಿಯನ್ನು ಸುಪ್ರೀಂಕೋರ್ಟ್ ಗುರುವಾರ ತೀವ್ರವಾಗಿ ಟೀಕಿಸಿದೆ. ಇಂತಹ ಸಂಸ್ಕೃತಿ ದೇಶದ ಆರ್ಥಿಕತೆಗೆ ದೊಡ್ಡ ನಷ್ಟವನ್ನು ಉಂಟುಮಾಡುತ್ತಿದೆ ಎಂದು ಹೇಳಿದೆ.
ರಾಜಕೀಯ ಪಕ್ಷಗಳ ಉಚಿತ ಕೊಡುಗೆಗಳ ಘೋಷಣೆ ಮತ್ತು ಉಚಿತ ವಸ್ತುಗಳ ವಿತರಣೆ ಗಂಭೀರ ವಿಷಯವಾಗಿದ್ದು, ಈ ಸಂಸ್ಕೃತಿಯನ್ನು ನಿಲ್ಲಿಸಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜನರ ಕಲ್ಯಾಣ ಯೋಜನೆಗಳು ಮತ್ತು ಉಚಿತಗಳ ನಡುವೆ ಸಮತೋಲನಕ್ಕಾಗಿ ಕರೆ ನೀಡಿದ ಸುಪ್ರೀಂಕೋರ್ಟ್, ಸಂಪೂರ್ಣ ಮೊತ್ತವನ್ನು ಮೂಲಸೌಕರ್ಯಗಳ ಅಭಿವೃದ್ಧಿಗೆ ಖರ್ಚು ಮಾಡಬೇಕು ಎಂದು ಒತ್ತಿ ಹೇಳಿದೆ.
ಚುನಾವಣಾ ಪೂರ್ವದಲ್ಲಿ ಮತದಾರರಿಗೆ ಆಮಿಷ ಒಡ್ಡುವ ‘ಉಚಿತ’ ಭರವಸೆ ನೀಡುವ ರಾಜಕೀಯ ಪಕ್ಷಗಳನ್ನು ನಿಷೇಧಿಸುವಂತೆ ಕೋರಿ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಚುನಾವಣಾ ಪ್ರಣಾಳಿಕೆಯನ್ನು ನಿಯಂತ್ರಿಸಲು ಮತ್ತು ಅದರಲ್ಲಿ ನೀಡಿದ ಭರವಸೆಗಳಿಗೆ ರಾಜಕೀಯ ಪಕ್ಷಗಳನ್ನು ಹೊಣೆಗಾರರನ್ನಾಗಿ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿಯಲ್ಲಿ ಕೇಳಲಾಗಿದೆ.
“ಇದು ಸಮಸ್ಯೆಯಲ್ಲ ಎಂದು ಯಾರೂ ಹೇಳುವುದಿಲ್ಲ. ಇದು ಗಂಭೀರ ಸಮಸ್ಯೆಯಾಗಿದೆ. ಪಡೆಯುವವರು ಉಚಿತಗಳನ್ನು ಬಯಸುತ್ತಾರೆ. ನಮ್ಮದು ಕಲ್ಯಾಣ ರಾಜ್ಯವಾಗಿದೆ. ಕೆಲವರು ತೆರಿಗೆ ಕಟ್ಟುತ್ತಿದ್ದಾರೆ ಮತ್ತು ಅದನ್ನು ಅಭಿವೃದ್ಧಿ ಪ್ರಕ್ರಿಯೆಗೆ ಬಳಸಬೇಕು. ಹಾಗಾಗಿ ಉಚಿತ ಕೊಡುಗೆ ಗಂಭೀರ ಸಮಸ್ಯೆಯಾಗಿದೆ. ಆದ್ದರಿಂದ ಸಮಿತಿಯು ಎರಡೂ ಕಡೆಯ ವಾದವನ್ನು ಆಲಿಸಬೇಕು” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.