ನವದೆಹಲಿ : ಕೋವಿಡ್-19 ಸೋಂಕಿನ ವಿರುದ್ಧ ನಿರಂತರ ಹೋರಾಟ ನಡೆಸುತ್ತಾ ಬಂದಿರುವ ಭಾರತ, ಹೊಸದೊಂದು ಮೈಲಿಗಲ್ಲು ಸ್ಥಾಪಿಸಿದೆ. ದೇಶದಲ್ಲಿ ಕೊರೊನಾ ಸೋಂಕಿನಿಂದ ಗುಣುಖರಾದವರ ಒಟ್ಟು ಪ್ರಮಾಣ ಇದೀಗ 3 ಕೋಟಿಯ ಗಡಿ ದಾಟಿದೆ.
ದೇಶದಲ್ಲಿ ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ ಒಟ್ಟು 3,00,14,713 ರೋಗಿಗಳು ಈಗಾಗಲೇ ಗುಣಮುಖರಾಗಿದ್ದಾರೆ. ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 39,649 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಒಟ್ಟಾರೆ ಚೇತರಿಕೆ ದರವೀಗ 97.22%ಗೆ ಸುಧಾರಣೆ ಕಂಡಿದೆ. ಚೇತರಿಕೆ ದರ ಸುಸ್ಥಿರ ಏರಿಕೆ ಪ್ರವೃತ್ತಿ ಹಿಡಿದಿದೆ.
ಮತ್ತೊಂದು ಕಡೆ, ದೇಶವ್ಯಾಪಿ ನಡೆಯುತ್ತಿರುವ ಬೃಹತ್ ಕೋವಿಡ್-19 ಲಸಿಕಾ ಅಭಿಯಾನದಲ್ಲಿ ಇದುವರೆಗೆ ಲಸಿಕೆ ನೀಡಿಕೆ ಪ್ರಮಾಣ 37.73 ಕೋಟಿ ಡೋಸ್ ದಾಟಿದೆ. ಒಟ್ಟಾರೆ, 37,73,52,501 ಡೋಸ್ ಲಸಿಕೆ ಹಾಕಲಾಗಿದೆ. 48,51,209 ಅಭಿಯಾನಗಳಲ್ಲಿ ಈ ಕಾರ್ಯ ನಡೆದಿದೆ ಎಂಬುದು ಇಂದು ಬೆಳಗ್ಗೆ 7 ಗಂಟೆಗೆ ಲಭ್ಯವಾಗಿರುವ ತಾತ್ಕಾಲಿಕ ವರದಿಯಿಂದ ತಿಳಿದುಬಂದಿದೆ. ಕಳೆದ 24 ತಾಸುಗಳಲ್ಲಿ 12,35,287 ಡೋಸ್ ಲಸಿಕೆ ಹಾಕಲಾಗಿದೆ.
ಕೋವಿಡ್-19 ಲಸಿಕೆ ಅಭಿಯಾನ ಸಾರ್ವತ್ರೀಕರಣದ ಹೊಸ ಹಂತ 2021 ಜೂನ್ 21ರಿಂದ ಆರಂಭವಾಗಿದೆ. ಕೇಂದ್ರ ಸರ್ಕಾರವು ದೇಶಾದ್ಯಂತ ಕೋವಿಡ್-19 ಲಸಿಕೆ ಅಭಿಯಾನದ ವ್ಯಾಪ್ತಿ ಹೆಚ್ಚಿಸಲು ಮತ್ತು ಕಾರ್ಯಕ್ರಮಕ್ಕೆ ಮತ್ತಷ್ಟು ವೇಗ ನೀಡಲು ಬದ್ಧವಾಗಿದೆ.
ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 37,154 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಸತತ ಕಳೆದ 15 ದಿನಗಳಿಂದ ಪತ್ತೆಯಾಗುತ್ತಿರುವ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ 50 ಸಾವಿರ ಮಟ್ಟದಿಂದ ಕೆಳಗಿರುವುದು ಆಶಾದಾಯಕ ಬೆಳವಣಿಗೆ. ಕೇಂದ್ರ ಸರಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಮತ್ತು ಜಂಟಿ ಪ್ರಯತ್ನಗಳ ಫಲವಾಗಿ ಹೊಸ ಪ್ರಕರಣಗಳ ಪ್ರಮಾಣ ಗಣನೀಯವಾಗಿ ತಗ್ಗುತ್ತಿದೆ.
ಭಾರತದಲ್ಲಿ ಇಂದು ಸಕ್ರಿಯ ಪ್ರಕರಣಗಳ ಸಂಖ್ಯೆ 4,50,899ಕ್ಕೆ ಇಳಿಕೆ ಕಂಡಿದೆ. ದೇಶದ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ 1.46% ಇದೆ.
ದೇಶಾದ್ಯಂತ ಕೊರೊನಾ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಕಳೆದ 24 ತಾಸುಗಳಲ್ಲಿ 14,32,343 ಪರೀಕ್ಷೆಗಳನ್ನು ನಡೆಸಲಾಗಿದೆ. ದೇಶದಲ್ಲಿ ಇದುವರೆಗೆ ಒಟ್ಟು 43 ಕೋಟಿಗಿಂತ ಅಧಿಕ ಅಂದರೆ 43,23,17,813 ಪರೀಕ್ಷೆಗಳನ್ನು ನಡೆಸಲಾಗಿದೆ.
ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ, ವಾರದ ಪಾಸಿಟಿವಿಟಿ ದರ ನಿರಂತರ ಇಳಿಕೆ ಕಾಣುತ್ತಿರುವುದನ್ನು ಗಮನಿಸಬಹುದು. ಅದೀಗ 2.32%ಗೆ ಕುಸಿದಿದೆ. ದೈನಂದಿನ ಪಾಸಿಟಿವಿಟಿ ದರ ಸತತ 21ನೇ ದಿನದಲ್ಲಿ 3% ಮಟ್ಟದಿಂದ ಕೆಳಗಿದ್ದು, ಪ್ರಸ್ತುತ 2.59% ಇದೆ. ನಿರಂತರ 35 ದಿನಗಳಿಂದ 5% ಮಟ್ಟದಿಂದ ಕೆಳಗೆ ಮುಂದುವರಿದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.