ನವದೆಹಲಿ: ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ತ್ವರಿತಗತಿಯ ಪರೀಕ್ಷೆ, ಸ್ಥಳೀಯ ಕಂಟೋನ್ಮೆಂಟ್ ವಲಯಗಳು ಮತ್ತು ಸಂಪೂರ್ಣ ಮತ್ತು ಸರಿಯಾದ ಮಾಹಿತಿಯನ್ನು ಸಾರ್ವಜನಿಕರಿಗೆ ಪ್ರಸಾರ ಮಾಡುವುದು ದೇಶದ ಪ್ರಮುಖ ಅಸ್ತ್ರಗಳಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿನ ತಮ್ಮ ಅನುಭವದ ಬಗ್ಗೆ ಮಾತನಾಡಲು ಅವರು ಇಂದು ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಂವಹನ ನಡೆಸಿದರು.
ಈ ವೇಳೆ ಮಾತನಾಡಿದ ಮೋದಿ, ಅನೇಕ ಬಾರಿ ಕೋವಿಡ್ ಪಾಸಿಟಿವ್ ಆಗಿದ್ದರೂ ಕೂಡ ಹಲವಾರು ಅಧಿಕಾರಿಗಳು ಜನರಿಗೆ ಸೇವೆ ಸಲ್ಲಿಸುವುದನ್ನು ಮುಂದುವರೆಸಿದ್ದಾರೆ. ಕೋವಿಡ್ ಕಾರಣದಿಂದ ಅನೇಕ ಅಧಿಕಾರಿಗಳು ತಮ್ಮ ಸಂಬಂಧಿಕರನ್ನು ಕಳೆದುಕೊಂಡರು ಆದರೂ ಅವರು ತಮ್ಮ ಸೇವೆಯನ್ನು ಮುಂದುವರಿಸಲು ಆಯ್ಕೆ ಮಾಡಿಕೊಂಡರು ಎಂದು ಅವರು ಹೇಳಿದರು.
ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ನವೀನ ಆಲೋಚನೆಗಳನ್ನು ತನಗೆ ಕಳುಹಿಸುವಂತೆ ಪ್ರಧಾನಿ ಜಿಲ್ಲಾ ಅಧಿಕಾರಿಗಳನ್ನು ಕೇಳಿಕೊಂಡಿದ್ದಾರೆ, ಇದರಿಂದಾಗಿ ಯಶಸ್ವಿ ಮಾದರಿಗಳನ್ನು ದೇಶದ ಬೇರೆಡೆ ಪುನರಾವರ್ತಿಸಬಹುದು ಎಂದಿದ್ದಾರೆ. ದೇಶದ ಪ್ರತಿಯೊಂದು ಭಾಗವು ವಿಭಿನ್ನ ರೀತಿಯ ಸಮಸ್ಯೆಗಳನ್ನು ಹೊಂದಿದೆ ಮತ್ತು ಆದ್ದರಿಂದ ವಿಭಿನ್ನ ಪರಿಹಾರಗಳ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸಿದ ಸ್ಥಳೀಯ ಅಧಿಕಾರಿಗಳನ್ನು ಮೋದಿ ಶ್ಲಾಘಿಸಿದರು.
ತಮ್ಮ ಜಿಲ್ಲೆಯಲ್ಲಿನ ಪ್ರತಿಯೊಬ್ಬ ನಾಗರಿಕರ ಸುಗಮ ಜೀವನದ ಬಗ್ಗೆಯೂ ಕಾಳಜಿ ವಹಿಸುವಂತೆ ಪ್ರಧಾನಮಂತ್ರಿಯವರು ಅಧಿಕಾರಿಗಳಿಗೆ ತಿಳಿಸಿದರು. ಸೋಂಕು ಹರಡದಂತೆ ತಡೆಯುವುದು ಅಗತ್ಯವಾಗಿದೆ ಎಂದು ಒತ್ತಿ ಹೇಳಿದ ಅವರು, ಅದೇ ವೇಳೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತಡೆಯಾಗದಂತೆ ಖಾತ್ರಿಪಡಿಸುವುದೂ ಮುಖ್ಯ ಎಂದರು. ಪಿ.ಎಂ. ಕೇರ್ಸ್ ನಿಧಿಯ ಮೂಲಕ ದೇಶದ ಪ್ರತಿಯೊಂದು ಜಿಲ್ಲೆಯಲ್ಲಿಯ ಆಸ್ಪತ್ರೆಯಲ್ಲಿಯೂ ಆಮ್ಲಜನಕ ಉತ್ಪಾದನಾ ಸ್ಥಾವರಗಳನ್ನು ಸ್ಥಾಪಿಸುವ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದ ಅವರು, ಹಲವು ಆಸ್ಪತ್ರೆಗಳಲ್ಲಿ ಈ ಸ್ಥಾವರಗಳು ಈಗಾಗಲೇ ಕಾರ್ಯಾರಂಭ ಮಾಡಿವೆ ಎಂದು ತಿಳಿಸಿದರು.
ಲಸಿಕೆ ಹಾಕುವುದು ರೋಗದ ತೀವ್ರತೆಯನ್ನು ಕಡಿಮೆ ಮಾಡಲು ಮತ್ತು ಆಸ್ಪತ್ರೆಗೆ ದಾಖಲಾಗುವುದನ್ನು ಮತ್ತು ಮರಣ ಪ್ರಮಾಣವನ್ನು ತಗ್ಗಿಸಲು ಹೇಗೆ ಸಹಾಯ ಮಾಡುತ್ತದೆ ಎಂಬ ಕುರಿತಂತೆ ಪ್ರಧಾನಮಂತ್ರಿ ಮಾತನಾಡಿದರು. ಕರೋನಾ ಲಸಿಕೆ ಪೂರೈಕೆಯನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದರು. ಲಸಿಕೆ ಹಾಕುವ ವ್ಯವಸ್ಥೆ ಮತ್ತು ಪ್ರಕ್ರಿಯೆಯನ್ನು ಆರೋಗ್ಯ ಸಚಿವಾಲಯ ಸುವ್ಯವಸ್ಥಿತಗೊಳಿಸುತ್ತಿದೆ ಎಂದು ಅವರು ತಿಳಿಸಿದರು. ರಾಜ್ಯಗಳಿಗೆ 15 ದಿನಗಳ ಮುಂಚಿತವಾಗಿಯೇ ವೇಳಾಪಟ್ಟಿ ನೀಡುವ ಪ್ರಯತ್ನಗಳು ನಡೆಯುತ್ತಿವೆ ಎಂದ ಅವರು, ಲಸಿಕೆ ವ್ಯರ್ಥವಾಗುವುದನ್ನು ತಡೆಯುವ ಅಗತ್ಯದ ಬಗ್ಗೆ ಒತ್ತಿ ಹೇಳಿದರು. ಹಾಸಿಗೆ ಮತ್ತು ಲಸಿಕೆ ಲಭ್ಯತೆಯ ಮಾಹಿತಿ ಸುಲಭವಾಗಿ ದೊರೆತಾಗ ಜನರಿಗೆ ಅನುಕೂಲವಾಗುತ್ತದೆ ಎಂದರು. ಅದೇ ರೀತಿಯಲ್ಲಿ, ಕಾಳಸಂತೆ ಮಾರಾಟ ನಿಗ್ರಹಿಸಬೇಕು ಮತ್ತು ಹಾಗೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮುಂಚೂಣಿ ಕಾರ್ಯಕರ್ತರ ಆತ್ಮ ಸ್ಥೈರ್ಯ ಹೆಚ್ಚಿಸುವ ಮೂಲಕ ಸಜ್ಜುಗೊಳಿಸಬೇಕು ಎಂದರು. ಹೇಗೆ ಗ್ರಾಮೀಣರು ವ್ಯಕ್ತಿಗತ ಅಂತರ ಕಾಪಾಡಿಕೊಂಡು ಕೃಷಿಯಲ್ಲಿ ತೊಡಗಿದ್ದಾರೆ ಎಂಬುದನ್ನು ಉಲ್ಲೇಖಿಸಿ ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಗ್ರಾಮಗಳು ಮಾಹಿತಿಯನ್ನು ಗ್ರಹಿಸುತ್ತವೆ ಮತ್ತು ಅವರ ಅಗತ್ಯಗಳಿಗೆ ಅನುಗುಣವಾಗಿ ಮಾರ್ಪಡಿಸಿಕೊಳ್ಳುತ್ತವೆ ಎಂದು ಅವರು ಹೇಳಿದರು. ಇದು ಹಳ್ಳಿಗಳ ಶಕ್ತಿಯಾಗಿದೆ. ಕೊರೊನಾ ವೈರಾಣು ವಿರುದ್ಧ ನಾವು ಉತ್ತಮ ರೂಢಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ನೀವು ಯಾವುದೇ ಉತ್ತಮ ಕ್ರಮ ಕೈಗೊಳ್ಳಲು ಮುಕ್ತರಾಗಿದ್ದೀರಿ ಎಂದ ಅವರು, ನೀತಿ ಬದಲಾವಣೆಗಳ ಅಗತ್ಯ ಇದ್ದರೆ ಸೂಚಿಸಿ ಎಂದು ತಿಳಿಸಿದರು. ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ ಎಚ್ಚರವಾಗಿರಬೇಕು ಎಂದು ಅವರು ಮನವಿ ಮಾಡಿದರು.
ಸಂವಾದದ ವೇಳೆ ಅಧಿಕಾರಿಗಳು ಕೋವಿಡ್ ಎರಡನೇ ಅಲೆಯ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಮಾರ್ಗದರ್ಶನ ಮಾಡುತ್ತಿರುವ ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ತಮ್ಮ ಅನುಭವಗಳನ್ನು ಪ್ರಧಾನಮಂತ್ರಿಯವರೊಂದಿಗೆ ಹಂಚಿಕೊಂಡ ಅಧಿಕಾರಿಗಳು, ಇತ್ತೀಚೆಗೆ ಹೆಚ್ಚಳವಾದ ಪ್ರಕರಣಗಳನ್ನು ತಗ್ಗಿಸಲು ಕೈಗೊಂಡ ನಾವಿನ್ಯಪೂರ್ಣ ಕ್ರಮಗಳ ಬಗ್ಗೆಯೂ ವಿವರಿಸಿದರು. ವೈದ್ಯಕೀಯ ಮೂಲಸೌಕರ್ಯ ವರ್ಧನೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾಮರ್ಥ್ಯವರ್ಧನೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದರು. ಉತ್ತಮ ರೂಢಿಗಳನ್ನು ಮತ್ತು ನಾವಿನ್ಯ ಪೂರ್ಣ ಕ್ರಮಗಳನ್ನು ಕ್ರೋಡೀಕರಿಸುವಂತೆ ತಿಳಿಸಿದ ಪ್ರಧಾನಮಂತ್ರಿಯವರು, ಅವುಗಳು ದೇಶದ ಇತರ ಜಿಲ್ಲೆಗಳಲ್ಲೂ ಬಳಸಬಹುದೆಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.