ಶ್ರೀನಗರ: ಪಾಕಿಸ್ಥಾನ ಮೂಲದ ಉಗ್ರ ಮೊಹಮ್ಮದ್ ನಾವೆದ್ ಅಲಿಯಾಸ್ ಉಸ್ಮಾನ್ ಖಾನ್ನನ್ನು ಸೆರೆ ಹಿಡಿದ ಇಬ್ಬರು ಉಧಮ್ಪುರದ ನಾಗರಿಕರ ಹೆಸರನ್ನು ಜಮ್ಮು ಕಾಶ್ಮೀರ ಪೊಲೀಸರು ’ಶೌರ್ಯ ಚಕ್ರ’ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದಾರೆ.
ಸಹಚರರೊಂದಿಗೆ ಉಧಮ್ಪುರದ ಮೇಲೆ ದಾಳಿ ನಡೆಸಿದ್ದ ನಾವೆದ್ ಕೆಲ ನಾಗರಿಕರನ್ನು ಒತ್ತೆಯಾಗಿ ಇರಿಸಿಕೊಂಡಿದ್ದ. ಆದರೆ ಚಾಣಾಕ್ಷತೆ ಮೆರೆದ ರಾಕೇಶ್ ಕುಮಾರ್ ಶರ್ಮಾ ಮತ್ತು ಬಿಕ್ರಂಜಿತ್ ಎಂಬುವವರು ಆತನ ಬಳಿಯಿದ್ದ ಎಕೆ 47 ರೈಫಲನ್ನು ಕಸಿದುಕೊಂಡು ಆತನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅವರ ಈ ಸಾಹಸಕ್ಕಾಗಿ ಅವರ ಹೆಸರನ್ನು ಶೌರ್ಯ ಚಕ್ರ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ಅಲ್ಲದೇ ರಾಕೇಶ್ ಕುಮಾರ್ ಮತ್ತು ಬಿಕ್ರಂಜಿತ್ ಅವರಿಗೆ ತಮ್ಮ ಇಲಾಖೆಯಲ್ಲಿ ಹುದ್ದೆಗಳನ್ನು ನೀಡಿದೆ.
ತಮ್ಮ ಕಾರ್ಯವನ್ನು ವಿವರಿಸಿರುವ ರಾಕೇಶ್, ‘ನಾವೆದ್ನ ಕುತ್ತಿಗೆಯನ್ನು ನಾನು ಹಿಡಿದೆ, ಬಿಕ್ರಂಜಿತ್ ಅವರು ಆತನ ಬಳಿಯಿದ್ದ ರೈಫಲನ್ನು ಕಸಿದುಕೊಂಡರು. ಇದಕ್ಕೂ ಮುನ್ನ ಆತ ನಮ್ಮ ಮೇಲೆ ಹಲವು ಸುತ್ತುಗಳ ಗುಂಡು ಹಾರಿಸಿದ್ದ, ನಾವು ಅದರಿಂದ ತಪ್ಪಿಸಿಕೊಂಡೆವು, ಆತನನ್ನು ಹಿಡಿದ ಬಳಿಕ ನನ್ನನ್ನು ಬಿಡಿ ನಿಮಗೆ ಯಾವ ತೊಂದರೆಯನ್ನೂ ಮಾಡುವುದಿಲ್ಲ ಎಂದು ಆತ ಮನವಿ ಮಾಡಿಕೊಂಡ’ ಎಂದಿದ್ದಾರೆ.
ಉಗ್ರರನ್ನು ಹಿಡಿಯುವ ಕಾರ್ಯ ಕೇವಲ ಸೇನೆ, ಪೊಲೀಸರದಲ್ಲ, ನಾಗರಿಕರೂ ಇದಕ್ಕೆ ಕೈಜೋಡಿಸಬೇಕು ಎಂಬುದನ್ನು ರಾಕೇಶ್ ಮತ್ತು ಬಿಕ್ರಂ ಅವರು ತೋರಿಸಿಕೊಟ್ಟಿದ್ದಾರೆ. ಅವರ ಈ ಕಾರ್ಯ ಶ್ಲಾಘನಾರ್ಹವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.