ಅದು 1985 ರ ಜೂನ್ 23. ಲಂಡನ್ನಿಂದ ದೆಹಲಿಗೆ ಬರುತ್ತಿದ್ದ ‘ಏರ್ ಇಂಡಿಯಾ 182’ ವಿಮಾನದಲ್ಲಿ 329 ಪ್ರಯಾಣಿಕರು ಉತ್ಸಾಹಿತರಾಗಿ ಕುಳಿತಿದ್ದರು. ವಿಮಾನ ಹೊರಟು ‘ಐರ್ಲೆಂಡ್’ ತೀರದ ಮೇಲಿದ್ದಾಗಲೇ ಸ್ಪೋಟಗೊಂಡಿತು. ತಾಂತ್ರಿಕ ಕಾರಣದಿಂದ ವಿಮಾನ ಸ್ಪೋಟಗೊಂಡಿತು ಎಂದು ಮೊದಲು ಭಾವಿಸಲಾಯಿತಾದರೂ ಮತ್ತೆ ‘ಲಗೇಜ್ ಬಾಂಬ್’ ಬಗ್ಗೆ ತಿಳಿಯಿತು. ಸತ್ತವರ ಸಂಖ್ಯೆ 329. ಅವರಲ್ಲಿ ಬಹುಪಾಲು ಕೆನಡಾ ಮತ್ತು ಬ್ರಿಟನ್ ನ ಪ್ರಜೆಗಳು.
ಅದೇ ದಿನ ಜಪಾನಿನ ‘ಟೋಕಿಯೋ ನರಿತಾ ಏರ್ಪೋರ್ಟ್’ನಲ್ಲೂ ಲಗೇಜ್ ಬಾಂಬ್ ಸ್ಫೋಟಗೊಂಡು ಲಗೇಜ್ ನಿರ್ವಾಹಕರು ತೀರಿಕೊಂಡರು. ಈ ಬಾಂಬ್ ಅನ್ನು ‘ಏರ್ ಇಂಡಿಯಾ- 301’ ಲ್ಲಿ ಸ್ಫೋಟಿಸುವ ಯೋಜನೆ ಇದ್ದುದು ತನಿಖೆಯಲ್ಲಿ ತಿಳಿಯಿತು. ಈ ಎರಡೂ ಘಟನೆಗಳ ಹೊಣೆ ಹೊತ್ತದ್ದು ‘ಖಲಿಸ್ಥಾನ’ ಪರ ಹೋರಾಡುತ್ತಿದ್ದ ‘ಬಬ್ಬರ್ ಖಾಲ್ಸಾ’ ಎನ್ನುವ ಉಗ್ರ ಸಂಘಟನೆ. ಇದಕ್ಕಿಂತ ಮೊದಲು ಭಾರತದಲ್ಲಿ ಇಂದಿರಾ ಗಾಂಧಿ ಹತ್ಯೆಯೂ ಸೇರಿದಂತೆ ಹಲವು ಹಿಂಸಾತ್ಮಕ ಕೃತ್ಯದಲ್ಲಿ ಭಾಗವಹಿಸುತ್ತಿದ್ದ ಈ ಉಗ್ರರು ವಿಶ್ವಮಟ್ಟದ ಗಮನ ಸೆಳೆಯಲು ಈ ಎರಡು ಘಟನೆಗಳನ್ನು ರೂಪಿಸಿದರು.
ಖಲಿಸ್ಥಾನ: ಗುರು ಗೋಬಿಂದರಿಗೆ ಅವಮಾನ
ಮೂಲತಃ ಖಲಿಸ್ಥಾನ ಎಂದರೆ ಖಾಲ್ಸಾದ ನೆಲ. ‘ಖಾಲ್ಸಾ’ ಎಂದರೆ ಗುರು ಗೋಬಿಂದ್ ಸಿಂಗ್ ಅವರು ಇಸ್ಲಾಮಿಕ್ ಮತಾಂತರ ಕ್ಕೆ ತಡೆಯೊಡ್ಡಲು ಕಟ್ಟಿದ ಧರ್ಮಕ್ಕೆ ಬೇಕಾಗಿ ಹೋರಾಡುವ ವೀರರ ಗುಂಪು. ಆದರೆ, ಈಗಿನ ಖಲಿಸ್ಥಾನದ ಹಿನ್ನೆಲೆ ಸಿಖ್ಖರಿಗೆ ಪ್ರತ್ಯೇಕವಾದ ರಾಷ್ಟ್ರ ಬೇಕೆನ್ನುವ ಹಿಂಸಾತ್ಮಕ ಬೇಡಿಕೆ. ಅದಕ್ಕೆ ಬೇರೆ ಬೇರೆ ಹೆಸರಿನ ಉಗ್ರ ಸಂಘಟನೆಗಳು.
ಅಸಂಬದ್ಧ ಬೇಡಿಕೆ
ಈಗಿನ ಪಂಜಾಬ್ ಅನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಸರದಾರರು ಆಳುತ್ತಿದ್ದರು. ಮಹಾರಾಜ ರಣಜೀತ್ ಸಿಂಗ್ 1799 ರಿಂದ 1849 ರವರೆಗೆ ಏಕೀಕೃತ ಸಾಮ್ರಾಜ್ಯ ಸ್ಥಾಪಿಸಿ ಆಳಿದರು. ಎರಡನೇ ಆಂಗ್ಲೋ- ಸಿಖ್ ಕದನದ ನಂತರ ಈ ಪ್ರದೇಶ ಬ್ರಿಟಿಷ್ ಮತ್ತು ಅವರ ಸಾಮಂತರ ಪಾಲಾಯಿತು.
1930ರ ಹೊತ್ತಿಗೆ ಪ್ರತ್ಯೇಕ ಸಿಖ್ ರಾಷ್ಟ್ರದ ಮೊದಲ ಕೂಗು ಕೇಳಿಬಂದವು. ಮುಸ್ಲಿಂ ಲೀಗ್ ಪಂಜಾಬ್ ಅನ್ನೂ ಸೇರಿಸಿ ಮುಸ್ಲಿಂ ರಾಷ್ಟ್ರವನ್ನು ರೂಪಿಸಲು ಕೇಳಿಕೊಂಡಾಗಲಂತೂ ಸಿಖ್ ಪಕ್ಷವಾದ ‘ಶಿರೋಮಣಿ ಅಕಾಲಿ ದಳ’, ಪಟಿಯಾಲದ ಮಹಾರಾಜನ ನೇತೃತ್ವದಲ್ಲಿ ಇಂದಿನ ಭಾರತ ಮತ್ತು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಸೇರಿಸಿಕೊಂಡು ‘ಖಲಿಸ್ಥಾನ’ದ ರಚಿಸುವ ಬೇಡಿಕೆ ಇಟ್ಟಿತು. ಪಾಕಿಸ್ತಾನ ರಚನೆಯಾಗುವ ಹೊತ್ತಿಗೆ ಪಾಕಿಸ್ತಾನದ ಪಂಜಾಬಿನಲ್ಲಿ ಸಿಖ್ಖರು ಬಹುಸಂಖ್ಯಾತರಾಗಿದ್ದು, ವಿಭಜನೆಯ ಸಮಯದಲ್ಲಿ ಹಿಂಸೆಗೆ ಹೆದರಿ ಭಾರತದ ಈಗಿನ ಹರಿಯಾಣ, ಹಿಮಾಚಲ ಪ್ರದೇಶ, ಪಂಜಾಬ್ ಪ್ರಾಂತ್ಯಕ್ಕೆ ವಲಸೆ ಬಂದರು. ಇಲ್ಲಿ ಹಿಂದುಗಳೇ ಬಹುಸಂಖ್ಯಾತರು. ಹಾಗಾಗಿ, ಖಲಿಸ್ಥಾನ ಆಗಬೇಕಿದ್ದರೆ ಅದು ಪಾಕಿಸ್ತಾನದ ಪಂಜಾಬಿನಲ್ಲಿ ಆಗಬೇಕು. ಭಾರತದಲ್ಲಿ ಅಲ್ಲ. ಹಾಗಾಗಿಯೇ ಇದು ಅಸಂಬದ್ಧ ಬೇಡಿಕೆ.
ಜತೆಗೆ, ಭಾರತದ ಪಂಜಾಬಿಗೆ ಬಂದ ಸಿಖ್ಖರೂ ಹಿಂದೂ ಸಂಖ್ಯೆಯನ್ನು ಮೀರಲಿಲ್ಲ. ಅಂದಿನವರೆಗೂ ಸಿಖ್ಖರಿಗೆ ತಾಯ್ನೆಲ ಎನ್ನುವ ಭಾವನೆಯಾಗಲೀ, ಪಂಜಾಬ್ ತಮ್ಮದು ಎನ್ನುವ ವಾದವಾಗಲೀ ಇರಲಿಲ್ಲ. ಸಿಖ್ ಇತಿಹಾಸಕಾರರಾದ ಹರ್ಜೋತ್ ಸಿಂಗ್ ಒಬೆರಾಯ್ ಹೇಳುವಂತೆ, ಇದೆಲ್ಲಾ 1940 ರ ಆನಂತರ ಹುಟ್ಟಿಕೊಂಡ ವಾದಗಳು. ಅದರಲ್ಲೂ ಈ ಬೇಡಿಕೆ ಹಿಂಸಾತ್ಮಕ ಮಾರ್ಗಹಿಡಿದದ್ದು 1970 ರ ಈಚೆಗೇನೆ.
ಸಿಖ್ಖರ ಪವಿತ್ರ ಗ್ರಂಥ ‘ಗ್ರಂಥ ಸಾಹಿಬ್’ ನಲ್ಲಿ ಭಾರತದ ಎಲ್ಲಾ ಭಾಗದ ಸಂತರ ಕೊಡುಗೆ ಇದೆ. ಹಾಗೆಯೇ, ಭಾರತದೆಲ್ಲೆಡೆ ಸಿಖ್ಖರ ಗುರುದ್ವಾರಗಳಿವೆ. ನಾನಕರೂ ಓಡಾಟದಲ್ಲಿದ್ದವರೇ. ಕರ್ನಾಟಕದ ಬೀದರಿನಲ್ಲೂ ನಾನಕರು ಬಂದ ನೆನಪಿನ ಗುರುದ್ವಾರವಿದೆ. ನಾನಕರು ಹುಟ್ಟಿದ ‘ನಂಕನ ಸಾಹಿಬ್’ ಇರುವುದು ಪಾಕಿಸ್ತಾನದಲ್ಲಿ. ಲಾಹೋರನ್ನು ಕೇಂದ್ರವಾಗಿಟ್ಟೇ ಮಹಾರಾಜ ರಣಜಿತ್ ಸಿಂಹ ಆಳಿದ್ದು. ಹಾಗಾಗಿ ಸಿಖ್ಖರನ್ನು ಭಾರತದ ಪಂಜಾಬಿಗೆ ಮಾತ್ರ ಭಾವನಾತ್ಮಕವಾಗಿ ಸೀಮಿತಗೊಳಿಸುವ ಪ್ರತ್ಯೇಕವಾದಿ ನಿಲುವಲ್ಲಿ ಕೆಲ ಸ್ವಾರ್ಥಿಗಳ ರಾಜಕೀಯ ಮಹತ್ವಾಕಾಂಕ್ಷೆ ಮಾತ್ರವೇ ಇದೆ. ತಮ್ಮದಲ್ಲದ ಪೂರ್ಣ ಕಲ್ಪನಾತ್ಮಕ ಭೂಮಿಯನ್ನು, ತಮ್ಮದು ಮಾತ್ರವೆಂದು ಅಂಗೀಕರಿಸುವ ನಿರ್ಧಾರವನ್ನು 1946ರಲ್ಲಿ ಅಕಾಲಿ ದಳ ಪ್ರಕಟಿಸಿದ್ದು, ನಂತರ ಪ್ರತ್ಯೇಕ ರಾಜ್ಯ ಕೇಳಿದ್ದು, ನದಿ ವಿಷಯಕ್ಕೆ ವಿವೇಚನೆ ಇಲ್ಲದೇ ವರ್ತಿಸಿದ್ದು, 1984ರಲ್ಲಿ ಖಲಿಸ್ಥಾನಿ ಉಗ್ರ ಬಿಂದ್ರಾನ್ವಾಲ- ಅಮೃತಸರ ಕೇಂದ್ರಿತವಾಗಿ ತನ್ನ ಸರ್ಕಾರ ರಚಿಸಿದ್ದು, ಶಸ್ತ್ರಾಸ್ತ್ರ ಸಂಗ್ರಹಿಸಿದ್ದು, ತನ್ನನ್ನು ತಾನೇ ಸಿಖ್ಖರ ಪರಮೋಚ್ಚ ನಾಯಕನೆಂದೂ, ಖಲಿಸ್ಥಾನದ ಅಧ್ಯಕ್ಷನೆಂದೂ ಘೋಷಿಸಿದ್ದು ಈ ರಾಜಕೀಯ ಅಧಿಕಾರದ ಹೀನ ಆಕಾಂಕ್ಷೆಯಿಂದಲೇ. ಆದರೆ, ಪ್ರಧಾನಿ ಇಂದಿರಾ ಗಾಂಧಿ ಸೇನಾ ಕಾರ್ಯಾಚರಣೆ ಮೂಲಕ ಬಿಂದ್ರಾನ್ವಾಲನನ್ನು ಕೊಂದುಹಾಕಿದರು. ಮುಂದೆ ತಾವೂ ಇದೇ ಉಗ್ರರಿಗೆ ಬಲಿಯಾದರು.
ಬಿಂದ್ರಾನ್ವಾಲನನ್ನು ಹೊಡೆದು ಹಾಕಿದ ಈ ‘ಆಪರೇಷನ್ ಬ್ಲೂ ಸ್ಟಾರ್’ನ ನೇತ್ರತ್ವ ವಹಿಸಿದ್ದೂ ಲೆ|ಜೆ ಕುಲ್ದೀಪ್ ಸಿಂಗ್ ಬ್ರಾರ್ ಎಂಬ ಸಿಖ್ ಸೇನಾಧಿಕಾರಿ. ಬಹುಪಾಲು ಸಿಖ್ ಯೋಧರೂ ಇದ್ದರು ಎಂದರೆ ಬಹುಪಾಲು ಸಿಖ್ಖರಿಗೆ ಈ ಪ್ರತ್ಯೇಕತೆ ಬೇಕಿಲ್ಲ ಎಂದೇ ಸಾಬೀತಾಯಿತು. ಹಾಗೇಯೇ, ಪ್ರತ್ಯೇಕತೆಯ ಕೂಗು ಒಟ್ಟು ಸಿಖ್ ಜನಾಂಗದ್ದಲ್ಲ ಅನ್ನುವುದೂ ಸ್ಪಷ್ಟವಾಯಿತು. ಇಂದಿರಾ ಹತ್ಯೆಯ ನಂತರ ಉಂಟಾದ ‘ಸಿಖ್ ವಿರೋಧಿ ಗಲಭೆ’ಗಳಲ್ಲಿ ಪ್ರಾಣತೆತ್ತವರು ಮಾತ್ರ ಅಮಾಯಕ ಸಿಖ್ಖರೇ.
ಪಾಕಿಸ್ತಾನದ ಪಾಪಿ ಕೈಗಳ ಮಗು
ಖಲಿಸ್ಥಾನಿ ಉಗ್ರರ ಹಿಂದೆ ಯಾರಿದ್ದಾರೆ ಅನ್ನುವುದು ಎಲ್ಲರಿಗೂ ತಿಳಿದ ವಿಚಾರ. ಪಂಜಾಬಿನ ಸಿಎಂ ಅಮರಿಂದರ್ ಸಿಂಗ್, ಅನೇಕ ಬಾರಿ ಖಲಿಸ್ಥಾನಿಗಳ ಹಿಂದೆ ಪಾಕಿಸ್ತಾನದ ಐಎಸ್ಐ ಮತ್ತು ಕೆನಡಾ, ಬ್ರಿಟನ್, ಇಟಲಿಯ ಖಲಿಸ್ಥಾನಿ ಅನುಕಂಪವಾದಿಗಳ ಕೈಗಳು ಇರುವುದನ್ನು ಬಹಿರಂಗವಾಗಿಯೇ ಹೇಳಿದ್ದಾರೆ.
ಮಾಕ್ಡೊನಾಲ್ಡ್ ಲಾರಿಯರ್ ಇನ್ಸ್ಟಿಟ್ಯೂಟ್, ಟೆರ್ರಿ ಮಿಲ್ಲೇವ್ಸ್ಕಿ ಎಂಬ ಹಿರಿಯ ಪತ್ರಕರ್ತರ ,’ಖಲಿಸ್ತಾನ್: ಎ ಪ್ರಾಜೆಕ್ಟ್ ಆಫ್ ಪಾಕಿಸ್ತಾನ್’ ಎಂಬ ಸಂಶೋಧನಾ ವರದಿಯನ್ನು ಪ್ರಕಟಿಸಿದೆ. ಇದರಲ್ಲಿ ಪಾಕಿಸ್ತಾನ ಹೇಗೆ ಖಲಿಸ್ತಾನದ ಉಗ್ರವಾದವನ್ನು ಹುಟ್ಟು ಹಾಕಿದೆ ಎಂದು ಲೇಖಕರು ವಿವರಿಸಿದ್ದಾರೆ. ಮೂಲತಃ ಲಾಹೋರಿನ ನಿವಾಸಿಗಳಾಗಿದ್ದ ಸಿಖ್ಖರಿಗೆ ಭಾರತದ ಪಂಜಾಬ್ ಅನ್ನು ಯಾಕೆ ಪಡೆಯಲು ಪಾಕಿಸ್ತಾನ ಹೇಳುತ್ತಿದೆ ಎನ್ನುವುದನ್ನು ವಿವೇಚಿಸುವ ತುರ್ತು ಇದೆ ಎನ್ನುತ್ತಾರೆ ಲೇಖಕರು. ಉದ್ದೇಶಿತ ಖಲಿಸ್ಥಾನದಲ್ಲಿ ಗುರುನಾನಕರು ಹುಟ್ಟಿದ ಪ್ರದೇಶ, ‘ನಂಕನಾ ಸಾಹೀಬ್’ ಇಲ್ಲದಿರುವುದನ್ನು ಅವರು ಗುರುತಿಸಿದ್ದಾರೆ.
1971ರ ಬಾಂಗ್ಲಾ ವಿಮೋಚನಾ ಯುದ್ಧದ ನಂತರ, ಉಗ್ರ ಜಗಜಿತ್ ಚೌಹಾನ್ ನ ಜತೆಗೆ ಪಾಕ್ ಪ್ರಧಾನಿ ಜುಲ್ಫಿಕರ್ ಆಲಿ ಭುಟ್ಟೋ ಮಾತುಕತೆಯಲ್ಲಿ ಖಲಿಸ್ಥಾನಿ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದು ವರದಿಯಾಗಿತ್ತು. ‘ಆಪರೇಷನ್ ಬ್ಲೂ ಸ್ಟಾರ್’ ಸಮಯದಲ್ಲಿ ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳು ಉಗ್ರರಲ್ಲಿದ್ದುದೂ ಪಾಕಿಸ್ತಾನದ ಪಾತ್ರವನ್ನು ನಮಗೆ ತಿಳಿಸುತ್ತದೆ. ಖಲಿಸ್ಥಾನಿ ಹೋರಾಟಗಾರ ಗೋಪಾಲ್ ಸಿಂಗ್ ಚಾವ್ಲಾ ಪಾಕ್ ನಲ್ಲಿರುವುದೂ, ಲಷ್ಕರ್ ಉಗ್ರ ಹಫೀಝ್ ಸಯೀದ್ ನೊಂದಿಗೆ ಕಾಣಿಸಿಕೊಳ್ಳುವುದನ್ನು ಅನೇಕ ಬಾರಿ ಮಾಧ್ಯಮಗಳು ವರದಿ ಮಾಡಿವೆ. ಭಾರತದ ಆಂತರಿಕ ವಿಷಯದಲ್ಲಿ ಕೈಯಾಡಿಸಿ ತಾನು ಮಹಾನ್ ದೇಶದಂತೆ ಬಿಂಬಿಸುವುದು ಪಾಕಿಸ್ತಾನದ ಚಾಳಿ.
ಉಳಿದಂತೆ ಕೆನಡಾದ ರಾಜಕೀಯ ದಂಗೆಕೋರರೂ ಖಲಿಸ್ತಾನಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎನ್ನುವ ಮಾತೂ ಇದೆ.
ಅಕಾಲಿದಳದ ಅಕಾಲ ಆಕಾಂಕ್ಷೆ
ಅಂದಿಗೂ ಇಂದಿಗೂ ಸಿಖ್ಖರನ್ನು ಪ್ರತಿನಿಧಿಸುವ ‘ಅಕಾಲಿದಳ’ವು ಸ್ವಾತಂತ್ರ್ಯ ಪೂರ್ವದಿಂದಲೂ ಸಿಖ್ಖರ ಮುಖವಾಣಿಯಾಗಲು ಪ್ರಯತ್ನಿಸುತ್ತಿತ್ತು. 1947ರಲ್ಲಿ , ‘ಪಂಜಾಬಿ ಸುಭಾ ಆಂದೋಲನ’ದ ಮೂಲಕ ಸಿಖ್ಖರಿಗೆ ಪ್ರತ್ಯೇಕ ರಾಷ್ಟ್ರ ಯಾ ಸ್ವಾಯತ್ತ ರಾಜ್ಯವನ್ನು ನಿರ್ಮಿಸುವ ಬೇಡಿಕೆ ಇಟ್ಟಿತ್ತು.
1966 ರಲ್ಲಿ ಇಂದಿರಾ ಗಾಂಧಿ ಸರ್ಕಾರ ‘ಪಂಜಾಬ್ ಏಕೀಕರಣ ಕಾಯ್ದೆ’ ಮೂಲಕ ಒಪ್ಪಿ ಪಂಜಾಬ್ ಪ್ರಾಂತ್ಯವನ್ನು ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಾಗಿ ವಿಂಗಡಿಸಿತು. ಕೆಲ ಪ್ರದೇಶಗಳು ಹಿಮಾಚಲ ಪ್ರದೇಶಕ್ಕೆ ಸೇರಿತು. ‘ಚಂಡೀಗಢ’ ಕೇಂದ್ರಾಡಳಿತ ಪ್ರದೇಶವಾಗಿ, ಚಂಡೀಗಡ ಹರಿಯಾಣಕ್ಕೂ ರಾಜಧಾನಿಯಾದುದು ಅಕಾಲಿ ದಳಕ್ಕೆ ಸಹ್ಯವಾಗಲಿಲ್ಲ. ಜತೆಗೆ, ನದಿ ನೀರಿಗೆ ಸಂಬಂಧಿಸಿದಂತೆ ಉಂಟಾದ ವಿವಾದವೂ ಅಕಾಲಿದಳದ 1972ರ ಸೋಲಿಗೆ ಕಾರಣವಾಯಿತು. ಜನಪ್ರಿಯತೆಯನ್ನು ಗಳಿಸುವುದಕ್ಕೆ ಅಕಾಲಿದಳ ‘ಆನಂದ್ಪುರ್ ಸಾಹಿಬ್ ರೆಸಲ್ಯೂಷನ್’ ಎಂಬ ಬೇಡಿಕೆಯನ್ನು ಇಟ್ಟಿತು. ಪಂಜಾಬಿಗೆ ಸ್ವಾಯತ್ತತೆ ಮತ್ತು ಹಿಂದೂ ಧರ್ಮದಿಂದ ಪ್ರತ್ಯೇಕ ಎಂಬ ಮಾನ್ಯತೆಯನ್ನು ಕೇಳಿತು. ಮೊದಲೇ ಹೇಳಿದಂತೆ ಇದೆಲ್ಲಾ ಹೀನ ರಾಜಕೀಯ ದಾಳಗಳು. ಅಂದೇ ಈ ವಿಚಾರ ಮರೆತೇ ಹೋಗಿತ್ತು. ಆದರೆ, ಅಕಾಲಿ ದಳ ಮತ್ತು ಖಲಿಸ್ಥಾನಿ ಹೋರಾಟಗಾರ ‘ಜರ್ನೈಲ್ ಸಿಂಗ್ ಬಿಂದ್ರಾನ್ವಾಲ’ 1982ರಲ್ಲಿ ಜತೆಯಾಗುವುದರೊಂದಿಗೆ ‘ಧರ್ಮ ಯುದ್ಧ ಮೋರ್ಚಾ’ ಆರಂಭವಾಗಿ ಮತ್ತೆ ಈ ಬೇಡಿಕೆಗೆ ಬಲ ಬಂತು ಮತ್ತೊಂದು ಮಹತ್ವದ ಘಟನೆಯೆಂದರೆ ಈಗಾಗಲೇ ಪಂಜಾಬಿನ ರಾಜಕಾರಣಿ ‘ಜಗಜಿತ್ ಸಿಂಗ್ ಚೌಹಾನ್’ ಚುನಾವಣೆಯಲ್ಲಿ ಸೋತು ಖಲಿಸ್ಥಾನಕ್ಕಾಗಿ ಬ್ರಿಟನಿಗೆ ತೆರಳಿ ಹೋರಾಟಕ್ಕೆ ಅಣಿಯಾಗಿದ್ದದು. ಇವನ ಜತೆ ದೇವೆಂದರ್ ಸಿಂಗ್ ಪರ್ಮರ್ ಎಂಬ ಈ ಮೊದಲೇ ಲಂಡನ್ ಸೇರಿದ್ದ ಹೋರಾಟಗಾರ ಜತೆಯಾದದ್ದು. ಇವರೆಲ್ಲರೂ ಸೇರಿ ಭಾರತಕ್ಕೆ ಬೆಂಕಿ ಹಚ್ಚಿದರು. ಇದೇ ಚೌಹಾಣ್ , ಭುಟ್ಟೋನ ಭಟ್ಟಂಗಿ.
ಅದು ಹಾಗಾದರೆ, ಇನ್ನೊಂದೆಡೆ ಹರ್ಚಂದ್ ಸಿಂಗ್ ಲೋಂಗೋವಾಲ್ ಎಂಬ ಅಕಾಲಿ ದಳದ ನಾಯಕ, 1982ರ ಏಷಿಯನ್ ಗೇಮ್ಸ್ ಅನ್ನು ನಿಲ್ಲಿಸಲು ದಿಲ್ಲಿಗೆ ಬರುವುದಾಗಿ ಘೋಷಿಸಿ ಅಂತಾರಾಷ್ಟ್ರೀಯ ಪ್ರಚಾರ ಪಡೆದ. ಆದರೆ, ಅದು ಹರಿಯಾಣ ಸಿಎಂ ಆಗಿದ್ದ ಭಜನ್ ಲಾಲ್ ಅವರು ದೆಹಲಿ ಪಂಜಾಬ್ ಸರಹದ್ದು ಮುಚ್ಚುವುದರೊಂದಿಗೆ ವಿಫಲವಾಯಿತು. (ಈ ರೀತಿಯ ಮೋಡಸ್ ಒಪೆರಾಂಡಿಯನ್ನು ಇತ್ತೀಚಿನ ರೈತ ಹೋರಾಟದಲ್ಲಿಯೂ ಕಾಣಬಹುದು. ರೈತ ಸಂಘಟನೆಗಳೇ ನಮ್ಮ ನಡುವೆ ಬಾಹ್ಯ ಶಕ್ತಿಗಳು ಸೇರಿವೆ ಎಂದಿರುವುದೂ, ದಿಲ್ಲಿ ಪೋಲೀಸ್ ವರದಿ ಖಲಿಸ್ಥಾನಿಗಳ ಇರುವಿಕೆಯನ್ನು ಖಚಿತ ಪಡಿಸಿರುವುದೂ ಭಯವನ್ನು ಹೆಚ್ಚುಮಾಡಿದೆ.)
ಖಲಿಸ್ಥಾನಿಗಳ ಹೋರಾಟ ಹಿಂಸೆಯ ದಾರಿ ಹಿಡಿದದ್ದು 1982ರ ಬಿಂದ್ರಾನ್ವಾಲನ ಪ್ರವೇಶದೊಂದಿಗೆಯೇ. ಮುಂದೆ, ಲೋಂಗೋವಾಲನೂ ಸೇರಿದಂತೆ ಅಕಾಲಿದಳದ ನಾಯಕರು ಇದನ್ನು ನಿಯಂತ್ರಿಸಲಾಗದೇ ಹೋರಾಟದಿಂದ ದೂರವಾದರು.
ಬಿಂದ್ರಾನ್ವಾಲ ಮತ್ತವನ ಬಾಡಿಗೆ ಹಂತಕ ಸಿಂಹಗಳು
ಬಿಂದ್ರಾನ್ವಾಲನ ಜತೆಗಾರರು ತಮ್ಮನ್ನು ತಾವು ‘ಖರ್ಕು'(ಸದ್ದು ಮಾಡುವವ) ಎಂದು ಕರೆದು 1980 ರಿಂದಲೂ ವ್ಯಾಪಕ ಕೊಲೆಗಳನ್ನು ಮಾಡಿದರು. 1984ರ ನಡುವೆ 1200ಕ್ಕಿಂತಲೂ ಹೆಚ್ಚು ಹಿಂಸಾತ್ಮಕ ಘಟನೆಗಳು ವರದಿಯಾದವು. ಸಾವಿರಾರು ಮಂದಿ ಸತ್ತರು. 1984ರಲ್ಲಿ 298 ಕೊಲೆ ಮತ್ತು 525 ಗಾಯಗಳು ವರದಿಯಾದವು. ಒಂದೊಮ್ಮೆ ಪೊಲೀಸ್ ಡಿಐಜಿ ಅವತಾರ್ ಸಿಂಗ್ ಅತ್ವಾಲ್ರನ್ನು 1983ರಲ್ಲಿ ‘ದರ್ಬರ್ ಸಾಹಿಬ್’ ನ ಮುಂದೆ ಕೊಲ್ಲುವುದರೊಂದಿಗೆ ಪೊಲೀಸರು ಇವರಿಗೆ ಭಯ ಪಡುವಂತಾಯಿತು. ಇವರು ಹಿಂದೂ, ಮುಸ್ಲಿಂರು ಸೇರಿದಂತೆ ಅವರನ್ನು ವಿರೋಧಿಸುವ ಸಿಖ್ಖರನ್ನೂ ಕೊಲ್ಲಲು ಆರಂಭಿಸಿದರು. ಅಮಾಯಕ ಬಸ್ ಪ್ರಯಾಣಿಕರನ್ನು ವೃಥಾ ಅಪಹರಿಸಿ ಕೊಲ್ಲುತ್ತಿದ್ದುದೇ ಇವರ ಶೌರ್ಯಕ್ಕೆ ಭೂಷಣವಾಯಿತು. ಸಂವಿಧಾನದ ಆರ್ಟಿಕಲ್ 25ರ ಕ್ಲಾಸ್ 2(b) ಯ ವಿರುದ್ಧವೂ ಇವರ ಹೋರಾಟ ಮುಗಿಲು ಮುಟ್ಟಿತ್ತು. ‘ಆಪರೇಷನ್ ಬ್ಲೂ ಸ್ಟಾರ್’ ನಂತರ ಇವರ ಭಾರತೀಯ ಚಟುವಟಿಕೆ ತಹಬದಿಗೆ ಬಂತು. ನಂತರ ನಡೆದ ಇಂದಿರಾ ಗಾಂಧಿ ಹತ್ಯೆ ಸಿಖ್ ವಿರೋಧಿ ದಂಗೆಗೆ ಕಾರಣವಾಗಿ, ಅಮಾಯಕ ಸಿಖ್ಖರು ಸತ್ತರು. ಏರ್ ಇಂಡಿಯಾ ವಿಮಾನದ ಸ್ಫೋಟದ ಘಟನೆಗಳ ನಂತರ ಅಕಾಲಿದಳ ಖಲಿಸ್ಥಾನ ಹೋರಾಟವನ್ನು ಸಂಪೂರ್ಣ ವಿರೋಧಿಸಿತು.
ಮುಂದೆಯೂ, 1990 ರ ವರೆಗೂ ಸಣ್ಣ ಪುಟ್ಟ ಘಟನೆಗಳು ವರದಿಯಾಗುತ್ತಲೇ ಇತ್ತು. ಸಿಖ್ಖರಲ್ಲಿ ಅನೇಕ ಪಂಗಡಗಳಾಗಿ ಬಹು ಸಂಖ್ಯಾತ ಸಿಖ್ಖರ ಬೆಂಬಲ ಇವರಿಗೆ ಇಲ್ಲವಾಗಿ ಹೋಯಿತು. ಇವರ ರಕ್ತಪಾತ ಸಿಖ್ಖರ ಶಾಂತಿಪ್ರಿಯ, ದೇಶಭಕ್ತ ರೂಪಿಕೆಗೆ ಕಪ್ಪುಮಸಿಯಾದದ್ದು ವಿಷಾಧನೀಯ. 1990 ರ ಈಚೆಗೂ ಅಲ್ಲಲ್ಲಿ ಈ ಉಗ್ರರ ಬೆಂಬಲಿಗರ ನೆಲೆಗಳಿಗೆ ಪೊಲೀಸರ ದಾಳಿಯಾಗುತ್ತಿದೆ. ಸಂತೋಷದ ವಿಷಯವೆಂದರೆ, ಸಿಖ್ ಯುವಕರು ಪೊಲೀಸ್ ಮತ್ತು ಸೈನ್ಯಕ್ಕೆ ಹೆಚ್ಚಾಗಿ ನಿಯೋಜನೆಯಾಗುತ್ತಿದ್ದಾರೆ. ಪಾಕಿಸ್ತಾನದಲ್ಲಿ ಖಲಿಸ್ತಾನಿಗಳು ಲಷ್ಕರ್ ಜತೆ ಕೈಜೋಡಿಸಿರುವ ಗುಪ್ತಚರ ವರದಿಗಳಿವೆ. ಭಾರತದ ಅಧಿಕಾರಿಗಳನ್ನು ಬಲೆಗೆ ಕೆಡಹುವ ಸಂಚೂ ನಡೆಯುತ್ತಿದೆ. ಸದ್ಯಕ್ಕಂತೂ ಈ ಚಟುವಟಿಕೆಗಳು ಭಯಪಡುವಷ್ಟೇನೂ ಇಲ್ಲ. ಅದೇ ನೆಮ್ಮದಿ.
✍️ ಸಂದೀಪ್ ಕೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.