ಬೆಂಗಳೂರು: ಮರಗಳನ್ನು ಉಳಿಸಿ, ಬೆಳೆಸುವ ದೃಷ್ಟಿಯಿಂದ ಕಾಗದಗಳ ಬಳಕೆ ಕಡಿಮೆ ಮಾಡುವುದು, ಹಾಳೆಗಳ ಎರಡೂ ಬದಿಗಳನ್ನು ಉಪಯೋಗಿಸಿ ಬರೆಯುವಂತೆ ಮೂವರು ವಿದ್ಯಾರ್ಥಿಗಳು ಮಾಡಿದ್ದ ಮನವಿಗೆ ಹೈಕೋರ್ಟ್ ಸಕಾರಾತ್ಮಕವಾಗಿ ಸ್ಪಂದಿಸಿದೆ.
ರಾಜ್ಯದ ಹೈಕೋರ್ಟ್ ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಎ4 ಹಾಳೆಯ ಎರಡೂ ಬದಿಗಳಲ್ಲಿ ಮುದ್ರಣ ಮಾಡುವ ಮುಖೇನ ಕಾಗದಗಳ ಬಳಕೆಯನ್ನು ಕಡಿಮೆ ಮಾಡಲು ತೀರ್ಮಾನಿಸಿದ್ದು, ಈ ಮೂಲಕ ಕಾಗದದ ಬಳಕೆ ಕಡ್ಡಾಯಗೊಳಿಸುವ ನಿಯಮವನ್ನು ತಿದ್ದುಪಡಿ ಮಾಡಿದೆ.
ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ವಿಭಾಗೀಯ ಪೀಠ 2019 ರ ಆಗಸ್ಟ್ 22ರಂದು ಕೋರ್ಟ್ನಲ್ಲಿ ಎ4 ಕಾಗದವನ್ನೇ ಬಳಕೆ ಮಾಡಲು ತೀರ್ಮಾನ ಕೈಗೊಂಡಿತ್ತು. 2020 ರ ನವೆಂಬರ್ 17 ರಂದು ಈ ಸಂಬಂಧ ಅಧಿಸೂಚನೆ ಹೊರಡಿಸುವ ಮೂಲಕ ರಾಜ್ಯ ಸರ್ಕಾರ ಈ ತಿದ್ದುಪಡಿಯನ್ನು ಅಂಗೀಕಾರ ಮಾಡಿದೆ ಎಂದು ನ್ಯಾಯಪೀಠ ಮಾಹಿತಿ ನೀಡಿದೆ.
ನ್ಯಾಯಾಲಯಕ್ಕೆ ಈ ಸಂಬಂಧ ಅರ್ಜಿ ಸಲ್ಲಿಸಿದ್ದ ಲಕ್ನೋದ ಕಾನೂನು ವಿದ್ಯಾರ್ಥಿಗಳಾದ ಆಕೃತಿ, ಬೆಂಗಳೂರಿನ ಭಾವನಾ ಮತ್ತು ಉದಯಪುರದ ಲಕ್ಷ್ಯ ಪುರೋಹಿತ್, ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ಎ4 ಕಾಗದಗಳನ್ನೇ ಬಳಕೆ ಮಾಡುವಂತೆ ನಿರ್ದೇಶಿಸಲು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ಈ ಅರ್ಜಿಯಲ್ಲಿ ಸಲ್ಲಿಸಿರುವ ವಿಚಾರ ಸಮಂಜಸವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಿಜಿಸ್ಟ್ರಾರ್ ಜನರಲ್ ಸಂಬಂಧಪಟ್ಟ ಸಮಿತಿಯ ಗಮನ ಸೆಳೆದಿದ್ದಾರೆ ಎಂದು ನ್ಯಾಯಪೀಠ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.