ಬೆಂಗಳೂರು: ರಾಜ್ಯದಲ್ಲಿರುವ ಕಾರಾಗೃಹಗಳನ್ನು ಪರಿಶೀಲನೆ ಮಾಡಿ, ಅಲ್ಲಿನ ವ್ಯವಸ್ಥೆಯನ್ನು ಸುಧಾರಣೆ ಮಾಡಲು ಸೂಕ್ತ ಸಲಹೆಗಳಿದ್ದರೆ ನೀಡುವುದಕ್ಕೆ ಪೂರಕವಾಗುವಂತೆ ಎನ್ಜಿಒ ಒಂದರ ಹೆಸರನ್ನು ಸೂಚಿಸುವಂತೆ ಉಚ್ಚ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ರಾಜ್ಯದಲ್ಲಿನ ಕಾರಾಗೃಹಗಳ ಸುಧಾರಣೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು, ಈ ಸಂದರ್ಭದಲ್ಲಿ, ಕಾರಾಗೃಹಗಳ ಪರಿಶೀಲನೆಗೆ, ಸಲಹೆ ಸೂಚನೆ ನೀಡಲು ಸಂಬಂಧಿಸಿದಂತೆ ಎನ್ಜಿಒ ಒಂದನ್ನು ಸೂಚಿಸುವಂತೆ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಬಂಧೀಖಾನೆ ಪ್ರಮಾಣಪತ್ರವನ್ನು ಸಲ್ಲಿಸಿದೆ. ಇದರಲ್ಲಿ, ರಾಜ್ಯದ ಕಾರಾಗೃಹಗಳಲ್ಲಿ 15,083 ಕೈದಿಗಳನ್ನಿಡಲು ಅವಕಾಶವಿದೆ. ಈಗಾಗಲೇ 14,535 ಕೈದಿಗಳು ಕಾರಾಗೃಹದಲ್ಲಿದ್ದು 96% ರಷ್ಟು ತುಂಬಿವೆ. ರಾಜ್ಯದಲ್ಲಿನ ಕಾರಾಗೃಹಗಳ ಪೈಕಿ 13 ಕಾರಾಗೃಹಗಳಲ್ಲಿ ಅವಕಾಶವಿರುವುದಕ್ಕಿಂತ ಅಧಿಕ ಕೈದಿಗಳನ್ನು ಇರಿಸಲಾಗಿದೆ ಎಂದು ತಿಳಿಸಿದೆ. ಈ ಸಂಬಂಧ 2020 ರ ಮಾರ್ಚ್ ತಿಂಗಳಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಆದೇಶದಂತೆ ಹೆಚ್ಚಿನ ಕೈದಿಗಳನ್ನು ಇರಿಸಲಾಗಿದ್ದ ಕಾರಾಗೃಹಗಳಿಂದ 575 ಜನರನ್ನು ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡಲಾಗಿದೆ. ಆ ಮೂಲಕ ಕೈದಿಗಳ ಪ್ರಮಾಣ ತಗ್ಗಿಸಿರುವುದಾಗಿಯೂ ಇಲಾಖೆ ಮಾಹಿತಿ ನೀಡಿದೆ.
ಜೊತೆಗೆ 4 ಕೇಂದ್ರ ಕಾರಾಗೃಹಗಳು ಮತ್ತು 4 ತಾಲೂಕು ಕಾರಾಗೃಹಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಕಾರಾಗೃಹಗಳು ಬಳಕೆಗೆ ಬಂದಾಕ್ಷಣ 4,339 ಕೈದಿಗಳನ್ನಿಡುವ ಸಾಮರ್ಥ್ಯ ಹೆಚ್ಚಾಗಲಿದೆ ಎಂದು ಇಲಾಖೆ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಈ ಎಲ್ಲಾ ವಿಚಾರಗಳ ಜೊತೆಗೆ, ಇನ್ನೊಂದಷ್ಟು ಅಂಶಗಳ ಬಗೆಗೂ ಪರಿಶೀಲನೆ ನಡೆಸಿರುವ ನ್ಯಾಯಾಲಯ, ಕಾರಾಗೃಹಗಳ ಪರಿಶೀಲನೆ ಮತ್ತು ಆಗಬೇಕಾದ ಸುಧಾರಣಾ ವಿಚಾರಗಳಿಗೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ನೀಡಲು ಎನ್ಜಿಒ ಒಂದನ್ನು ಸೂಚಿಸಲು ರಾಜ್ಯ ಸರ್ಕಾರಕ್ಕೆ ತಿಳಿಸಿದೆ. ಈ ಎನ್ಜಿಒ ಕಾರಾಗೃಹಗಳಿಗೆ ಭೇಟಿ ನೀಡಿ ತಪಾಸಣೆ, ಕೈದಿಗಳಿಗೆ ನೀಡಲಾಗುವ ಆಹಾರ ವಸ್ತುಗಳ ಪರಿಶೀಲನೆ, ಸ್ವಚ್ಛತೆ ಸೇರಿದಂತೆ ಇನ್ನಿತರ ಕ್ರಮಗಳನ್ನು ಪರಿಶೀಲಿಸಿ ಮಾಹಿತಿ ನೀಡಬೇಕು. ಸಲಹೆ, ಸೂಚನೆಗಳನ್ನು ನೀಡಬೇಕು ಎಂದು ಕೋರ್ಟ್ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.