ಭುವನೇಶ್ವರ: ದೇಶದಾದ್ಯಂತ ನಕ್ಸಲರ ಅಟ್ಟಹಾಸ ಕಡಿಮೆಯಾಗುತ್ತಿದೆ. ಒಂದು ಕಾಲದಲ್ಲಿ ನಕ್ಸಲ್ ಭಯೋತ್ಪಾದನೆಯಿಂದ ತೀವ್ರ ಹದಗೆಟ್ಟಿದ್ದ ಒರಿಸ್ಸಾ ಇಂದು ನಕ್ಸಲ್ ಮುಕ್ತಗೊಳ್ಳುವತ್ತ ಮುನ್ನಡೆಯುತ್ತಿದೆ. ಅಲ್ಲಿನ 5 ಜಿಲ್ಲೆಗಳನ್ನು ನಕ್ಸಲ್ ಮುಕ್ತವೆಂದು ಘೋಷಣೆ ಮಾಡಲಾಗಿದೆ.
ಎಡಪಂಥೀಯ ಉಗ್ರಗಾಮಿತ್ವ ಪೀಡಿತ ಪ್ರದೇಶಗಳ ಪಟ್ಟಿಯಿಂದ ಐದು ಜಿಲ್ಲೆಗಳನ್ನು ತೆಗೆದುಹಾಕಲು ಒರಿಸ್ಸಾ ಸರ್ಕಾರ ಅನುಮೋದನೆ ನೀಡಿದೆ ಎಂದು ಡಿಜಿಪಿ ಅಭಯ್ ಶುಕ್ರವಾರ ತಿಳಿಸಿದ್ದಾರೆ.
“ನಕ್ಸಲ್ ಪೀಡಿತ ಜಿಲ್ಲೆಗಳ ಪಟ್ಟಿಯಿಂದ ಅಂಗುಲ್, ಬೌಧ್, ಸಂಬಲ್ಪುರ, ದಿಯೋಘರ್, ಮತ್ತು ನಾಯಗಢ್ ಜಿಲ್ಲೆಗಳನ್ನು ತೆಗೆದುಹಾಕಲು ಒರಿಸ್ಸಾ ಸರ್ಕಾರ ಅನುಮೋದನೆ ನೀಡಿದೆ. ಇದು ಈ ಜಿಲ್ಲೆಗಳಲ್ಲಿ ಭದ್ರತಾ ಪರಿಸ್ಥಿತಿ ಸುಧಾರಣೆಗೊಂಡಿದೆ ಎಂಬುದನ್ನು ಸೂಚಿಸುತ್ತದೆ. ಇಡೀ ಒರಿಸ್ಸಾವನ್ನು ನಕ್ಸಲ್ ಮುಕ್ತಗೊಳಿಸಲು ರಾಜ್ಯ ಪೊಲೀಸರು ಬದ್ಧರಾಗಿದ್ದಾರೆ” ಎಂದು ಡಿಜಿಪಿ ಟ್ವೀಟ್ ಮಾಡಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ, ಈ ಜಿಲ್ಲೆಗಳಲ್ಲಿ ಯಾವುದೇ ನಕ್ಸಲ್ ಹಿಂಸಾಚಾರಗಳು ವರದಿಯಾಗಿಲ್ಲ ಮತ್ತು ಒಟ್ಟಾರೆ ಭದ್ರತಾ ಪರಿಸ್ಥಿತಿಯಲ್ಲಿ ಪ್ರಗತಿಪರ ಸುಧಾರಣೆ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.
2018ರಲ್ಲಿ, ಆರು ಜಿಲ್ಲೆಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಇದೀಗ 5 ಜಿಲ್ಲೆಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ.
ರಾಜ್ಯದ ನಕ್ಸಲ್ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಒರಿಸ್ಸಾ ಪೊಲೀಸರು ಉತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹಲವಾರು ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಡಿಜಿಪಿ ಅಭಯ್ ಹೇಳಿದ್ದಾರೆ. ರಾಜ್ಯದಲ್ಲಿ ನಕ್ಸಲರ ಶರಣಾಗತಿ ಹೆಚ್ಚಾಗಿದೆ ಎಂದಿದ್ದಾರೆ.
2019ರಲ್ಲಿ 13 ನಕ್ಸಲರು ಮತ್ತು ಈ ವರ್ಷ 17 ನಕ್ಸಲರು ಶರಣಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.