ನವದೆಹಲಿ: ಕೋವಿಡ್ ಮತ್ತು ಕೋವಿಡೇತರ ತುರ್ತು ಸಂದರ್ಭಗಳನ್ನು ಎದುರಿಸಲು ಅತ್ಯವಶ್ಯಕವಾದ, ಎಲ್ಲ ಖಾಸಗಿ ಕ್ಲಿನಿಕ್, ನರ್ಸಿಂಗ್ ಹೋಂ ಮತ್ತು ಪ್ರಯೋಗಾಲಯಗಳ ಆರಂಭಕ್ಕೆ ಹಾಗೂ ಎಲ್ಲ ವೈದ್ಯಕೀಯ ವೃತ್ತಿಪರರು, ಅರೆ ವೈದ್ಯಕೀಯ ಸಿಬ್ಬಂದಿಗಳ ಮತ್ತು ಆಂಬುಲೆನ್ಸ್ಗಳ ಸುಗಮ ಸಂಚಾರ ಖಾತ್ರಿಪಡಿಸಬೇಕು ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಎಲ್ಲದಾ ರಾಜ್ಯಗಳಿಗೆ ನಿರ್ದೇಶಿಸಿದೆ.
ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದು, ಅತ್ಯಮೂಲ್ಯವಾದ ಮಾನವರ ಜೀವ ಉಳಿಸಲು ಮತ್ತು ಸಾರ್ವಜನಿಕ ಆರೋಗ್ಯ ಅಗತ್ಯತೆಗಳನ್ನು ಪೂರೈಸಲು ಅಗತ್ಯವಾದ ವೈದ್ಯಕೀಯ ವೃತ್ತಿಪರರ ಸಂಚಾರಕ್ಕೆ ಯಾವುದೇ ಅಡೆತಡೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ. ವೈದ್ಯಕೀಯ ವೃತ್ತಿಪರರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಸಂಚಾರಕ್ಕೆ ಯಾವುದಾದರೂ ನಿರ್ಬಂಧಗಳನ್ನು ವಿಧಿಸಿದರೆ ಅದರಿಂದ ಕೋವಿಡ್ ಮತ್ತು ಕೋವಿಡೇತರ ವೈದ್ಯಕೀಯ ಸೇವೆಗಳಲ್ಲಿ ಗಂಭೀರ ತೊಂದರೆಗಳಾಗುತ್ತವೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಸಂವಹನದಲ್ಲಿ ಎಲ್ಲ ವೈದ್ಯಕೀಯ ಸಿಬ್ಬಂದಿ, ನರ್ಸ್ಗಳು, ಅರೆ ವೈದ್ಯಕೀಯ ಸಿಬ್ಬಂದಿ, ನೈರ್ಮಲ್ಯ ಕಾರ್ಯಕರ್ತರು ಮತ್ತು ಆಂಬುಲೆನ್ಸ್ಗಳ ಸುಗಮ ಸಂಚಾರವನ್ನು ಖಾತ್ರಿಪಡಿಸಬೇಕೆಂದು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ಇದರಿಂದ ಯಾವುದೇ ನಿರ್ಬಂಧವಿಲ್ಲದೆ ಕೋವಿಡ್ ಮತ್ತು ಕೋವಿಡೇತರ ಸೇವೆಗಳು ಲಭ್ಯವಾಗುವಂತೆ ನೋಡಿಕೊಳ್ಳಲು ಸಹಕಾರಿಯಾಗಲಿದೆ. ಅಲ್ಲದೆ ಮೇಲೆ ತಿಳಿಸಲಾದ ಎಲ್ಲ ವೃತ್ತಿಪರರು ಅಂತರ-ರಾಜ್ಯ ಸಂಚಾರ ಕೈಗೊಳ್ಳಲೂ ಸಹ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಅನುಕೂಲ ಮಾಡಿಕೊಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಎಲ್ಲ ಖಾಸಗಿ ಕ್ಲಿನಿಕ್ಗಳು, ನರ್ಸಿಂಗ್ ಹೋಂಗಳು ಮತ್ತು ಪ್ರಯೋಗಾಲಯಗಳು, ಸೀಮಿತ ವೃತ್ತಿಪರರು ಮತ್ತು ಸಿಬ್ಬಂದಿಯೊಂದಿಗೆ ಕಾರ್ಯಾರಂಭಕ್ಕೆ ಒತ್ತು ನೀಡಬೇಕು ಎಂದು ಸೂಚಿಸಲಾಗಿದೆ. ಇದರಿಂದಾಗಿ ಎಲ್ಲ ಕೋವಿಡ್ ಮತ್ತು ಕೋವಿಡೇತರ ತುರ್ತುಗಳನ್ನು ಎದುರಿಸುತ್ತಿರುವವರು ವೈದ್ಯಕೀಯ ಸೇವೆಗಳನ್ನು ಪಡೆಯಲು ಯಾವುದೇ ತೊಂದರೆಯಾಗುವುದಿಲ್ಲ ಮತ್ತು ಆಸ್ಪತ್ರೆಗಳ ಮೇಲಿನ ಹೊರೆ ತಗ್ಗಲಿದೆ ಎಂದು ತಿಳಿಸಲಾಗಿದೆ.
ಇನ್ನು ವಲಸೆ ಕಾರ್ಮಿಕರಿಗೆ ಸಹಕಾರವಾಗುವಂತೆ ರೈಲು ವ್ಯವಸ್ಥೆಯ ಕುರಿತಾಗಿಯೂ ಕೇಂದ್ರ ಗೃಹ ಕಾರ್ಯದರ್ಶಿಗಳು ಈ ಹಿಂದೆ ಎಲ್ಲಾ ರಾಜ್ಯಗಳಿಗೂ ಪತ್ರ ಮುಖೇನ ತಿಳಿಸಿದ್ದರು. ಇದೀಗ ವೈದ್ಯಕೀಯ ವಿಚಾರಕ್ಕೆ ಸಂಬಂಧಿಸಿದಂತೆಯೂ ರಾಜ್ಯಗಳಿಗೆ ಮಹತ್ವದ ಆದೇಶ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.