ನವದೆಹಲಿ: ದೇಶದಲ್ಲಿ ಕೊರೋನಾವೈರಸ್ನ ಅಟ್ಟಹಾಸ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. 50,000 ಕ್ಕೂ ಹೆಚ್ಚು ಸೋಂಕಿತರ ಪ್ರಕರಣಗಳು ದೇಶದಲ್ಲಿ ವರದಿಯಾದ ಬೆನ್ನಲ್ಲೇ, ಇದೀಗ ಸೋಂಕಿತರ ಚಿಕಿತ್ಸೆಗೆಂದು ಸಿದ್ಧ ಮಾಡಲಾದ ರೈಲ್ವೆ ಬೋಗಿಗಳನ್ನು ಉಪಯೋಗಿಸಿಕೊಳ್ಳಲು ಕೇಂದ್ರ ಆರೋಗ್ಯ ಸಚಿವಾಲಯ ನಿರ್ಧರಿಸಿದೆ.
ಕೊರೋನಾ ಶಂಕಿತ/ ಸೋಂಕಿತರ ನಿರ್ವಹಣೆಗಾಗಿ ಕೇಂದ್ರ ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ ಈ ಅಂಶವನ್ನು ತಿಳಿಸಿದೆ. ಅದಕ್ಕಾಗಿ ದೇಶದ ಸುಮಾರು 215 ರೈಲ್ವೆ ನಿಲ್ದಾಣಗಳನ್ನು ಈ ಪ್ರಕ್ರಿಯೆಗೆ ನಿಯೋಜನೆ ಮಾಡಲು ಕೇಂದ್ರ ತೀರ್ಮಾನಿಸಿದ್ದು, ಇದರಲ್ಲಿ ಕರ್ನಾಟಕದ 14 ನಿಲ್ದಾಣಗಳನ್ನು ಕೇಂದ್ರ ಗುರುತಿಸಿದೆ. ಎಂದಿನಿಂದ ತೊಡಗಿದಂತೆ ರೈಲ್ವೆ ನಿಲ್ದಾಣಗಳಲ್ಲಿ ಬೋಗಿಗಳನ್ನು ಬಳಕೆ ಮಾಡಲಾಗುವುದು ಎಂಬ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ. ಆದರೆ ಯಾವ ಪ್ರದೇಶದಲ್ಲಿ ಹೇಗೆ ಬೋಗಿಗಳನ್ನು ಬಳಸಬೇಕು, ನಿರ್ವಹಣೆ ಮಾಡಬೇಕು ಎಂಬುದನ್ನು ಕುರಿತು ಮಾರ್ಗಸೂಚಿಯಲ್ಲಿ ಆರೋಗ್ಯ ಸಚಿವಾಲಯ ಮಾರ್ಗದರ್ಶನ ನೀಡಿದೆ. ಅಲ್ಲದೆ ಇದರಲ್ಲಿ ವೈದ್ಯಕೀಯ ಸಿಬ್ಬಂದಿಗಳಿಗೆ ಉಳಿದುಕೊಳ್ಳುವುದಕ್ಕೂ ವ್ಯವಸ್ಥೆ ಕಲ್ಪಿಸಲಾಗುವುದಾಗಿ ಸಚಿವಾಲಯ ತಿಳಿಸಿದೆ.
ಈಗಾಗಲೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಶಂಕಿತರು ಮತ್ತು ಸೋಂಕಿತರನ್ನು ತಪಾಸಣೆ ಮಾಡಿ, ರೋಗ ಆರಂಭಿಕ ಹಂತದಲ್ಲಿದ್ದರೆ ಇದೇ ಬೋಗಿಗಳಲ್ಲಿ ಚಿಕಿತ್ಸೆ ನೀಡುವುದು ಮತ್ತು ಸೋಂಕು ತೀವ್ರಗೊಂಡು ಆರೋಗ್ಯ ಗಂಭೀರವಾದಲ್ಲಿ ಸ್ಥಳೀಯ ಕೊರೋನಾ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಮರ್ಥ ನಿರ್ವಹಣೆ ಸಾಧ್ಯವಾಗುವುದಾಗಿಯೂ ಸಚಿವಾಲಯ ಮಾಹಿತಿ ನೀಡಿದೆ. ಇನ್ನು ಈ ಬೋಗಿಗಳ ನಿರ್ವಹಣೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು. ಜೊತೆಗೆ ಅಗತ್ಯವಿರುವ ಎಲ್ಲಾ ಮೂಲ ಸೌಕರ್ಯಗಳನ್ನು ವ್ಯವಸ್ಥೆ ಮಾಡಿ, ಸಂಬಂಧಿಸಿದ ಜಿಲ್ಲೆಯ ಜಿಲ್ಲಾಧಿಕಾರಿಗಳ ಸುಪರ್ಧಿಗೆ ವಹಿಸಲಾಗುವುದಾಗಿಯೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.